ನವದೆಹಲಿ: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಸೇರಿದಂತೆ ದೇಶದ ಆರು ಕ್ರಿಕೆಟ್ ಕ್ರೀಡಾಂಗಣಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ನೋಟಿಸ್ ಜಾರಿ ಮಾಡಿದೆ. ಪಿಚ್ ಮತ್ತು ಮೈದಾನಗಳನ್ನು ನಿರ್ವಹಿಸಲು ಬಳಸುವ ನೀರಿನ ಮೂಲವನ್ನು ಬಹಿರಂಗಪಡಿಸಲು ವಿಫಲವಾದ ಕಾರಣ ಅವುಗಳ ಚಟುವಟಿಕೆಗಳನ್ನು ಏಕೆ ನಿಲ್ಲಿಸಬಾರದು ಎಂದು ವಿವರಿಸುವಂತೆ ಸೂಚಿಸಿದೆ.
ಹಲವು ಕ್ರಿಕೆಟ್ ಕ್ರೀಡಾಂಗಣಗಳು ಕೇಂದ್ರ ಅಂತರ್ಜಲ ಪ್ರಾಧಿಕಾರಕ್ಕೆ (CGWA) ಮಾಹಿತಿಯನ್ನು ಒದಗಿಸುವಂತೆ ಹಸಿರು ನ್ಯಾಯಮಂಡಳಿ ಸೂಚನೆ ನೀಡಿತ್ತು. ಆದರೆ ಅವುಗಳು ಮಾಹಿತಿ ನೀಡಿರಲಿಲ್ಲ.
ಇದಕ್ಕೂ ಮುನ್ನಾ, ಒಳಚರಂಡಿ ಸಂಸ್ಕರಣಾ ಘಟಕ (STP) ಸಂಸ್ಕರಿಸಿದ ನೀರಿನ ಬದಲಿಗೆ ಕ್ರಿಕೆಟ್ ಮೈದಾನಗಳನ್ನು ನಿರ್ವಹಿಸಲು ಅಂತರ್ಜಲ ಅಥವಾ ಸಿಹಿ ನೀರನ್ನು ಬಳಸುವುದರ ವಿರುದ್ಧ ಮತ್ತು ಅಂತರ್ಜಲ ಸಂಗ್ರಹಣೆ, ವಿಸರ್ಜನೆ ಮತ್ತು ಪುನಃಸ್ಥಾಪನೆಗಾಗಿ ಮಳೆನೀರು ಕೊಯ್ಲು ವ್ಯವಸ್ಥೆಗಳನ್ನು ಸ್ಥಾಪಿಸದಿರುವ ವಿರುದ್ಧದ ಅರ್ಜಿಯನ್ನು NGT ವಿಚಾರಣೆ ನಡೆಸಿತು.
NGT ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಮತ್ತು ತಜ್ಞ ಸದಸ್ಯರಾದ ಎ ಸೆಂಥಿಲ್ ವೆಲ್ ಮತ್ತು ಅಫ್ರೋಜ್ ಅಹ್ಮದ್ ಅವರನ್ನೊಳಗೊಂಡ ಪೀಠ, ಏಪ್ರಿಲ್ 16 ರ ಆದೇಶದಲ್ಲಿ ಏಳು ಕ್ರೀಡಾಂಗಣಗಳು ಪದೇ ಪದೇ ನಿರ್ದೇಶನಗಳ ಹೊರತಾಗಿಯೂ ಆರಂಭದಲ್ಲಿ ತಮ್ಮ ಉತ್ತರಗಳನ್ನು ಸಲ್ಲಿಸಲು ವಿಫಲವಾಗಿವೆ ಎಂಬುದನ್ನು ಪರಿಗಣಿಸಿತು.
ವಿಚಾರಣೆಯ ವೇಳೆ, ಹೈದರಾಬಾದ್ ಕ್ರೀಡಾಂಗಣದ ವಕೀಲರು ಮೂರು ವಾರಗಳ ಕಾಲಾವಕಾಶ ಕೋರಿದರು. ಉಳಿದ ಆರು ಮಂದಿ ಹಾಜರಾಗಲು ಅಥವಾ ಯಾವುದೇ ಪ್ರತಿಕ್ರಿಯೆ ಸಲ್ಲಿಸಲು ವಿಫಲರಾದರು ಎಂದು ಅದು ಹೇಳಿದೆ.
ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ನೋಟಿಸ್ ಜಾರಿಗೊಳಿಸಿದ ಆರು ಕ್ರೀಡಾಂಗಣಗಳು ಇಂತಿವೆ: ಅರುಣ್ ಜೇಟ್ಲಿ ಕ್ರೀಡಾಂಗಣ (ದೆಹಲಿ), ಶಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣ (ರಾಯ ಪುರ) ಸವಾಯಿ ಮಾನ್ಸಿಂಗ್ ಕ್ರೀಡಾಂಗಣ (ಜೈಪುರ), ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣ (ಮುಂಬೈ), ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣ (ಲಕ್ನೋ) ಮತ್ತು ಬಾರಾಬತಿ ಕ್ರೀಡಾಂಗಣ (ಕಟಕ್).