ಮುಂಬೈ: ಮುಂಬೈನ ಮೀರಾರೋಡ್ನಲ್ಲಿ ನಡೆದ ಕಾವಲುಗಾರನ ಮೇಲೆ ಶಂಕಿತ ಉಗ್ರನ ಚಾಕು ಇರಿತ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ದೊರೆತಿದ್ದು, ಹಲ್ಲೆ ವೇಳೆ ಗಾರ್ಡ್ ತನ್ನನ್ನು ಕೊಲ್ಲದಂತೆ ಪರಿಪರಿಯಾಗಿ ಬೇಡಿಕೊಂಡಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಮುಂಬೈನ ನಯಾ ನಗರ ಪ್ರದೇಶದಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯ ಧರ್ಮವನ್ನು ಕೇಳಿ ಚೂರಿಯಿಂದ ಇರಿದ ಆರೋಪದ ಮೇಲೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.
ಮೂಲಗಳ ಪ್ರಕಾರ, ಆರೋಪಿ ಜೈಬ್ ಜುಬೇರ್ ಅನ್ಸಾರಿ (31) ಇಸ್ಲಾಂ ಧರ್ಮದ ಮೂಲಭೂತ ಸಿದ್ಧಾಂತಗಳಾದ 'ಕಲ್ಮಾ' ಅಥವಾ 'ಕಲಿಮಾ' ಪಠಿಸುವಂತೆ ಕಾವಲುಗಾರರನ್ನು ಒತ್ತಾಯಿಸಿದ್ದ ಎನ್ನಲಾಗಿದೆ.
ಕಾವಲುಗಾರರಾದ ರಾಜ್ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ವೋಕಾರ್ಡ್ ಆಸ್ಪತ್ರೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿದ್ದಾಗ ಅನ್ಸಾರಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಮುಂಜಾನೆ, ಬೆಳಗಿನ ಜಾವ 4 ಗಂಟೆ ಸುಮಾರಿಗೆ ದಾಳಿ ನಡೆದಿದೆ.
ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ ಎಂದು ಕೇಳಿಕೊಂಡ ಗಾರ್ಡ್ ಗಳು
31 ವರ್ಷದ ಜೈಬ್ ಜುಬೇರ್ ಅನ್ಸಾರಿ ಎಂಬಾತ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಅಮಾನವೀಯವಾಗಿ ಚಾಕು ಇರಿದಿರುವ ಬೆಚ್ಚಿಬೀಳಿಸುವ ವಿಡಿಯೋ ಹೊರಬಂದಿದೆ.
ಮುಂಜಾನೆ 4:00 ಗಂಟೆ ಸುಮಾರಿಗೆ ಅನ್ಸಾರಿ ಭದ್ರತಾ ಸಿಬ್ಬಂದಿಗಳಾದ ರಾಜಕುಮಾರ್ ಮಿಶ್ರಾ ಮತ್ತು ಸುಬ್ರತೋ ಸೇನ್ ಎಂಬುವವರನ್ನು ಸಂಪರ್ಕಿಸಿದ್ದಾನೆ. ಅವರ ಹೆಸರು ಮತ್ತು ಧರ್ಮವನ್ನು ಕೇಳಿದ ಬಳಿಕ, 'ಕಲ್ಮಾ' ಪಠಿಸುವಂತೆ ಒತ್ತಾಯಿಸಿದ್ದಾನೆ. ಓದದ ಹಿನ್ನಲೆಯಲ್ಲಿ ಚಾಕು ಇರಿದಿದ್ದಾನೆ ಎನ್ನಲಾಗಿದೆ.
ಈ ವೇಳೆ ಗಾರ್ಡ್ ದಾಳಿಕೋರನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಆದರೂ ಕರುಣೆ ತೋರದ ಪಾತಕಿ ಅವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ವಿಡಿಯೋ ವೈರಲ್
ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿದ್ದ ಅನ್ಸಾರಿ ಕಾವಲುಗಾರನ ಮೇಲೆ ಸತತವಾಗಿ ಚಾಕುವಿನಿಂದ ಇರಿಯುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ನೋವಿನಿಂದ ಕಿರುಚುತ್ತಾ, ಜೀವ ಉಳಿಸುವಂತೆ ಅಂಗಲಾಚುತ್ತಾ ಓಡುತ್ತಿರುವುದು ಕಂಡುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಕಾವಲುಗಾರರನ್ನು ತಕ್ಷಣ ವೊಕಾರ್ಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಅನ್ಸಾರಿಯನ್ನು ಪತ್ತೆಹಚ್ಚಿ, ದಾಳಿ ನಡೆದ 90 ನಿಮಿಷಗಳಲ್ಲೇ ಆತನನ್ನು ನಯಾ ನಗರದ ಬಾಡಿಗೆ ಮನೆಯಿಂದ ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯಡಿ (BNS) ಕೊಲೆ ಯತ್ನ ಮತ್ತು ಧಾರ್ಮಿಕ ವೈಷಮ್ಯ ಬಿತ್ತುವ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ISIS ಸಂಪರ್ಕ ಶಂಕೆ
ಅನ್ಸಾರಿಯ ಮನೆಯಲ್ಲಿ ISIS, "ಲೋನ್ ವುಲ್ಫ್" (Lone wolf) ದಾಳಿ ಮತ್ತು "ಜಿಹಾದ್" ಕುರಿತಾದ ಕೈಬರಹದ ಟಿಪ್ಪಣಿಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ಭಯೋತ್ಪಾದನಾ ನಿರೋಧಕ ದಳ (ATS) ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ. ಅನ್ಸಾರಿ ವಿಜ್ಞಾನ ಪದವೀಧರನಾಗಿದ್ದು, ಹಲವು ವರ್ಷಗಳ ಕಾಲ ಅಮೆರಿಕಾದಲ್ಲಿ ವಾಸವಿದ್ದನು. 2019 ರಲ್ಲಿ ಭಾರತಕ್ಕೆ ಮರಳಿದ್ದ ಈತ, ಇತ್ತೀಚೆಗೆ ಕೋಚಿಂಗ್ ಸೆಂಟರ್ ಒಂದರಲ್ಲಿ ರಸಾಯನಶಾಸ್ತ್ರ ಮತ್ತು ಗಣಿತ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದನು.