ಪ್ರಧಾನಿ ನರೇಂದ್ರ ಮೋದಿ  
ದೇಶ

'ಬೌದ್ಧಿಕ ನಕ್ಸಲರನ್ನು ಗುರುತಿಸಿ, ಅವರನ್ನು ಪ್ರತ್ಯೇಕಿಸಿ': ಪ್ರಧಾನಿ ಮೋದಿ

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ಕೋಟೆಗೋಡೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತವು ಕಾಡು ಪ್ರದೇಶಗಳಲ್ಲಿದ್ದ ಸಶಸ್ತ್ರ ನಕ್ಸಲಿಸಂ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು.

ನವದೆಹಲಿ: ವ್ಯವಸ್ಥೆಯೊಳಗೆ ಬೇರೂರಿಕೊಂಡು ನೀತಿಗಳ ಮೇಲೆ ಪ್ರಭಾವ ಬೀರುವ ಮೂಲಕ ಸಮಾಜಕ್ಕೆ ಅಪಾಯವನ್ನುಂಟುಮಾಡುತ್ತಿರುವ “ಬೌದ್ಧಿಕ ನಕ್ಸಲರು” ಅಥವಾ “ದಿಮಾಗಿ ನಕ್ಸಲರು” ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದರು. ಅಂತಹವರನ್ನು “ಗುರುತಿಸಿ, ಪ್ರತ್ಯೇಕಿಸಬೇಕು” ಎಂದು ಅವರು ನಾಗರಿಕರಿಗೆ ಕರೆ ನೀಡಿದರು.

80ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯ ಕೋಟೆಗೋಡೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತವು ಕಾಡು ಪ್ರದೇಶಗಳಲ್ಲಿದ್ದ ಸಶಸ್ತ್ರ ನಕ್ಸಲಿಸಂ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದರು. ಆದರೆ ಅದರ ಸೈದ್ಧಾಂತಿಕ ಬೆಂಬಲಿಗರು ಹಿಂಸೆ ಮತ್ತು ಅರಾಜಕತೆಯನ್ನು ಉತ್ತೇಜಿಸಲು ಅವಕಾಶಗಳನ್ನು ಹುಡುಕುತ್ತಿದ್ದಾರೆ ಎಂದು ಎಚ್ಚರಿಸಿದರು.

ವರ್ಷಗಳ ಕಾಲ ಮಾವೋವಾದಿ ಮನಸ್ಥಿತಿಯ ಜನರು ಅಧಿಕಾರದ ಕಾರಿಡಾರ್‌ಗಳಲ್ಲಿ ತಮ್ಮ ಪ್ರಭಾವವನ್ನು ಸ್ಥಾಪಿಸಿಕೊಂಡಿದ್ದರು. ಅವರು ಸರ್ಕಾರದ ಸಮಿತಿಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು ಮತ್ತು ಸಾರ್ವಜನಿಕ ನೀತಿಗಳ ಮೇಲೆ ಪ್ರಭಾವ ಬೀರಿದ್ದರು ಎಂದು ಪ್ರಧಾನಿ ಹೇಳಿದರು.

ಈ ಸವಾಲನ್ನು ಲಘುವಾಗಿ ಪರಿಗಣಿಸಬಾರದು, ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದರು.

ದಶಕಗಳ ಕಾಲ ನಡೆದ ನಕ್ಸಲಿಸಂ ಮತ್ತು ಮಾವೋವಾದಿ ಹಿಂಸಾಚಾರವು ಲಕ್ಷಾಂತರ ಯುವಕರ ಜೀವನ ಮತ್ತು ಭವಿಷ್ಯದ ಆಶಯಗಳನ್ನು ನಾಶಪಡಿಸಿದೆ ಎಂದು ಪ್ರಧಾನಿ ಹೇಳಿದರು. ಈ ಸಂಘರ್ಷದಲ್ಲಿ 3,500ಕ್ಕೂ ಹೆಚ್ಚು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಇದು ಯುದ್ಧಗಳಲ್ಲಿ ಮೃತಪಟ್ಟ ಸೈನಿಕರ ಸಂಖ್ಯೆಗೆ ಹೋಲಿಸಿದರೆ ಕೂಡ ಹೆಚ್ಚಿನ ಸಂಖ್ಯೆಯಾಗಿದೆ ಎಂದು ಅವರು ಹೇಳಿದರು.

ನಕ್ಸಲಿಸಂ ಭಾರತದ ಬಹುದೊಡ್ಡ ಭಾಗವನ್ನು ಮತ್ತು ಅಪಾರ ಸಂಖ್ಯೆಯ ಜನಸಂಖ್ಯೆಯನ್ನು ಬಂದೂಕಿನ ಭೀತಿಯಲ್ಲಿ ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು ಎಂದು ಪ್ರಧಾನಿ ಹೇಳಿದರು.

ನಕ್ಸಲಿಸಂ ನಿರ್ಮೂಲನೆಗೆ 2014ರಿಂದ ಆದ್ಯತೆ

2014ರಲ್ಲಿ ಅಧಿಕಾರಕ್ಕೆ ಬಂದ ತಮ್ಮ ಸರ್ಕಾರವು ನಕ್ಸಲಿಸಂ ನಿರ್ಮೂಲನೆಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ದಶಕಗಳಷ್ಟು ಹಳೆಯ ಸವಾಲುಗಳಿಗೆ ಅಂತ್ಯ ಹಾಡಬೇಕು. ನಕ್ಸಲಿಸಂ ಮತ್ತು ಮಾವೋವಾದವು ಲಕ್ಷಾಂತರ ಯುವಕರ ಭವಿಷ್ಯವನ್ನು ನಾಶಮಾಡಿವೆ. ಅಸಂಖ್ಯಾತ ತಾಯಂದಿರ ಮಕ್ಕಳನ್ನು ಕಸಿದುಕೊಂಡಿವೆ, ಕುಟುಂಬಗಳನ್ನು ಹಾಳುಮಾಡಿವೆ ಮತ್ತು ಪೋಷಕರ ಕನಸುಗಳನ್ನು ಛಿದ್ರಗೊಳಿಸಿವೆ ಎಂದು ಅವರು ಹೇಳಿದರು.

ಇಂದು ನಕ್ಸಲೈಟ್ ಮತ್ತು ಮಾವೋವಾದಿ ಹಿಂಸಾಚಾರಕ್ಕೆ ಅಂತ್ಯ ಹಾಡಲಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಹಿಂದೆ ನಕ್ಸಲರ ಗುಂಡಿನ ಸದ್ದು ಮೊಳಗುತ್ತಿದ್ದ, ರಕ್ತಪಾತ ಸಾಮಾನ್ಯವಾಗಿದ್ದ ಪ್ರದೇಶಗಳಲ್ಲಿ ಇಂದು ಅಭಿವೃದ್ಧಿ, ವಿಶ್ವಾಸ ಮತ್ತು ಪ್ರಯತ್ನದ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಈ ಪ್ರದೇಶಗಳು ನಕ್ಸಲಿಸಂನಿಂದ ಮುಕ್ತವಾಗಿವೆ ಎಂದು ಮೋದಿ ಹೇಳಿದರು.

ಸಶಸ್ತ್ರ ಬಂಡಾಯ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ಅದರ ಹಿಂದಿರುವ ಸೈದ್ಧಾಂತಿಕ ಸವಾಲು ಸಂಪೂರ್ಣವಾಗಿ ಮಾಯವಾಗಿದೆ ಎಂದರ್ಥವಲ್ಲ ಎಂದು ಪ್ರಧಾನಿ ಎಚ್ಚರಿಕೆ ನೀಡಿದರು. ಈ ಹಿನ್ನೆಲೆಯಲ್ಲಿ ಜನರು ಸದಾ ಜಾಗರೂಕರಾಗಿರಬೇಕು ಎಂದು ಕರೆ ನೀಡಿದರು.

‘ನಶಾ ಮುಕ್ತ ಭಾರತ’ ನಿರ್ಮಾಣಕ್ಕೆ ಯುವಕರಿಗೆ ಕರೆ

ಪ್ರಧಾನಿ ಮೋದಿ ಅವರು ಯುವಕರು ‘ನಶಾ ಮುಕ್ತ ಭಾರತ’ ನಿರ್ಮಾಣದ ಭಾಗವಾಗಬೇಕು ಎಂದು ಕರೆ ನೀಡಿದರು. ಜನಗಣತಿಯ ಸಂದರ್ಭದಲ್ಲಿ ನಡೆಯುವ ಸ್ವಯಂ ಗಣತಿ ಪ್ರಕ್ರಿಯೆಯಲ್ಲಿ ಯುವಕರು ಭಾಗವಹಿಸಿ, ಕುಟುಂಬದ ಸದಸ್ಯರು ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಲು ಸಹಾಯ ಮಾಡಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

PM Modi's I-Day speech: 'ನಮ್ಮ ಕನಸು, ಸಂಕಲ್ಪಗಳು ದೊಡ್ಡದಾಗಿರಬೇಕು; 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರ ಮಾಡಿಯೇ ತೀರುತ್ತೇವೆ: ಪ್ರಧಾನಿ ಮೋದಿ-Video

80th Independence Day|ಯುವಜನತೆ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು: ಪ್ರಧಾನಿ ಮೋದಿ-Video

ಯುವ ಉದ್ಯೋಗ ಸೇತು, ವಿದ್ಯಾರ್ಥಿ ಸಹಾಯಹಸ್ತ, ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ: ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ CM ಡಿ ಕೆ ಶಿವಕುಮಾರ್ ಪ್ರಮುಖ ಘೋಷಣೆಗಳು-Video

'RSS ನೋಂದಣಿ ಆಗಿಲ್ಲ, ಮುಂದೆಯೂ ಆಗಲ್ಲ': B L ಸಂತೋಷ್

ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗೆ ಪರೀಕ್ಷಾ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ- ಸ್ವಾತಂತ್ರ್ಯ ದಿನದ ಹಿನ್ನೆಲೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಮಾತು