ನವದೆಹಲಿ: ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹವನ್ನು ‘ಡ್ರಾಮಾ’ ಎಂದು ಬಣ್ಣಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾದ ಕಾಂಗ್ರೆಸ್ ನಾಯಕ ಶಶಿ ತರೂರ್, ತಮ್ಮ ಹೇಳಿಕೆ ಕುರಿತು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ನನ್ನ ನೇಪಾಳದ ಮೊದಲ ಟ್ವೀಟ್ನಲ್ಲಿ ಡ್ರಾಮಾ ಎಂಬ ಪದ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಎಲ್ಲರಿಗೂ ಒಂದು ಸ್ಪಷ್ಟನೆ. ಡ್ರಾಮಾ ಎಂದರೆ ಕೇವಲ ನಾಟಕೀಯ ಪ್ರದರ್ಶನ ಎಂದರ್ಥವಲ್ಲ. ತೀವ್ರವಾಗಿ ಮುಖಾಮುಖಿಯಾಗುವ ಶಕ್ತಿಗಳನ್ನು ಒಳಗೊಂಡ ಸ್ಥಿತಿ, ಪರಿಸ್ಥಿತಿ ಅಥವಾ ಘಟನೆಗಳ ಸರಣಿಗೂ ಈ ಪದವನ್ನು ಬಳಸಲಾಗುತ್ತದೆ’ ಎಂದು ಹೇಳಿದ್ದಾರೆ.
ಅದೇ ಅರ್ಥದಲ್ಲಿ ತಾವು ‘ಡ್ರಾಮಾ’ ಪದವನ್ನು ಬಳಸಿದ್ದಾಗಿ ಸ್ಪಷ್ಟಪಡಿಸಿದ ಅವರು, ಸುಲಭವಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಹುದಾದ ಪದವನ್ನು ಆಯ್ಕೆ ಮಾಡಿದ್ದಕ್ಕೆ ವಿಷಾದಿಸುತ್ತೇನೆ ಎಂದಿದ್ದಾರೆ.
ಇದಕ್ಕೂ ಒಂದು ದಿನ ಮುನ್ನ ನೇಪಾಳದ ಗುಡ್ಡ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹವನ್ನು ‘ಬೆಟ್ಟಗಳಲ್ಲಿ ನಡೆದ ಡ್ರಾಮಾ’ ಎಂದು ತರೂರ್ ಬಣ್ಣಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
‘ಇಷ್ಟೊಂದು ಸಮೃದ್ಧ ಶಬ್ದಕೋಶ ಹೊಂದಿರುವ ವ್ಯಕ್ತಿ ಇಂತಹ ಪದವನ್ನು ಆಯ್ಕೆ ಮಾಡಿರುವುದು ದುರದೃಷ್ಟಕರ’ ಎಂದು ಕೆಲವರು ಟೀಕಿಸಿದರೆ, ಇನ್ನು ಕೆಲವರು ತರೂರ್ ಅವರ ಹೇಳಿಕೆಯನ್ನು ಸಂವೇದನಾಶೀಲತೆಯ ಕೊರತೆ ಎಂದು ಆರೋಪಿಸಿದ್ದರು.
ಗುರುವಾರ ಎಕ್ಸ್ನಲ್ಲಿ ನೇಪಾಳದ ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ತರೂರ್, ‘ನೇಪಾಳದ ಕಠ್ಮಂಡುವಿಗೆ ತೆರಳುವಾಗ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ್ದ ಡ್ರಾಮಾ ಹಾಗೂ ಅದರಿಂದ ಉಂಟಾದ ಭೀಕರ ಹಾನಿಯ ಬಗ್ಗೆ ಯಾವುದೇ ಅರಿವಿರಲಿಲ್ಲ’ ಎಂದು ಹೇಳಿದ್ದರು.
ನೇಪಾಳ-ಟಿಬೆಟ್ ಗಡಿಯ ಸಮೀಪದ ರಸುವಾ ಜಿಲ್ಲೆಯಲ್ಲಿ ಉತ್ತರ ನೇಪಾಳದಲ್ಲಿ ತೀವ್ರ ಹಾಗೂ ಹಠಾತ್ ಪ್ರವಾಹ ಸಂಭವಿಸಿದ್ದು, ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳ ವ್ಯಾಪ್ತಿಯಲ್ಲಿ ವ್ಯಾಪಕ ಹಾನಿ ಉಂಟಾಗಿದೆ ಎಂದು ಅವರು ವಿವರಿಸಿದ್ದರು.
ಜಾಗತಿಕ ತಾಪಮಾನ ಏರಿಕೆ ಅಥವಾ ಟಿಬೆಟ್ನಲ್ಲಿ ಸಂಭವಿಸಿದ ಭೂಕಂಪದಿಂದ ಹಿಮನದಿಯ ದೊಡ್ಡ ಭಾಗವೊಂದು ಒಡೆದು ಕೆಳಗಿನ ಕಣಿವೆಗೆ ಬಿದ್ದಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದೂ ತರೂರ್ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದರು.