ಜಿಯೋಹಾಟ್ಸ್ಟಾರ್ನ 'ಭೋಜ್ಪುರಿ ಬವಾಲ್' ಶೋ ಎಪಿಸೋಡ್ ವೇಳೆಯಲ್ಲಿ ತೇಜ್ ಪ್ರತಾಪ್ ಯಾದವ್, ಬೆದರಿಕೆ, ದ್ರೋಹ, ಬ್ಲ್ಯಾಕ್ಮೇಲ್ ಮತ್ತು ಹನಿ ಟ್ರ್ಯಾಪ್ ಆರೋಪ ಮಾಡಿದ್ದಾರೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಯಾದವ್, ತಮ್ಮ ಸುತ್ತಮುತ್ತಲಿನ ಜನರಿಂದಲೇ ತೊಂದರೆ ಎದುರಿಸಿದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೇ ಅವರ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಅವರ ಟೀಕೆಗಳು ಗಮನ ಸೆಳೆದಿವೆ, ವಿಶೇಷವಾಗಿ ಅವರ ಮಾಜಿ PA ಮತ್ತು ಜೈ ಚಂದ್" ಎಂಬುವರ ವಿರುದ್ಧ ಆರೋಪ ಮಾಡಿದ್ದಾರೆ.
ಅಂದಹಾಗೆ, 'ಭೋಜ್ಪುರಿ ಬವಾಲ್' ನ ಇತ್ತೀಚಿನ ಸಂಚಿಕೆಯಲ್ಲಿ ಕಿಶೋರ್ ಅಜ್ವಾನಿ, ಹಲವು ವಿಚಾರಗಳ ಬಗ್ಗೆ ತೇಜ್ ಪ್ರತಾಪ್ ಅವರನ್ನು ಪ್ರಶ್ನಿಸಿದ್ದು, ಅವರು ಮುಕ್ತವಾಗಿ ಮಾತನಾಡಿದ್ದಾರೆ. ಕೆಲವು ಜನರು ನನ್ನನ್ನು ದುರ್ಬಲಗೊಳಿಸಲು ಮತ್ತು ಕೆಟ್ಟ ಇಮೇಜ್ ಸೃಷ್ಟಿಸಲು ಪ್ರಯತ್ನಿಸಿದರು ಎಂಬ ಮಾತನ್ನು ಹೇಳಿದ್ದಾರೆ. ಆಪ್ತರು ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ ತಮ್ಮ ತಂದೆಗೆ ಸಂಬಂಧಿಸಿದ ಪೋಸ್ಟ್ ಬಗ್ಗೆ ಮಾತನಾಡಿದ್ದು, ಎಪಿಸೋಡ್ಗೆ ಲಿಂಕ್ ಮಾಡಿದ ವ್ಯಕ್ತಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ನಾನು ನನ್ನ ಮಗನನ್ನು ಉಚ್ಚಾಟಿಸುತ್ತಿದ್ದೇನೆ ಎಂದು ನನ್ನ ತಂದೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರಲಿಲ್ಲ; ಹರಿಯಾಣದಿಂದ ಬಂದಿದ್ದ ಜೈ ಚಂದ್ ಎಂಬಾತನೇ ಅದನ್ನು ಬರೆದಿದ್ದನು. ನಾನು ಇದನ್ನು ಇಲ್ಲಿ ಬಹಿರಂಗವಾಗಿ ಹೇಳುತ್ತಿದ್ದೇನೆ ಮತ್ತು ಅವನಿಗೆ ಸವಾಲು ಕೂಡ ಹಾಕುತ್ತಿದ್ದೇನೆ. ಇವರೆಲ್ಲಾ ಚಿಲ್ಲರೆ ವ್ಯಕ್ತಿಗಳು. ಇದರಿಂದ ಏನೂ ಆಗುವುದಿಲ್ಲ. ನಮ್ಮ ತಂದೆಗೆ ಏನೂ ಆಗಲು ಸಾಧ್ಯವಿಲ್ಲ ಎಂದು ಸವಾಲು ಹಾಕಿದ್ದಾರೆ.
ಪಿಎ (PA) ಮೋತಿಲಾಲ್ ಕೂಡ ವಿರೋಧಿಗಳೊಂದಿಗೆ ಕೈಜೋಡಿಸಿದ್ದರು. ಅವರು ಪಕ್ಷದ 20 ಲಕ್ಷ ರೂ.ಗಳೊಂದಿಗೆ ಪರಾರಿಯಾಗಿ, ನಮಗೆ ದ್ರೋಹ ಬಗೆದರು. ಹರಿಯಾಣದ ಈ ಜೈ ಚಂದ್ ದೆಹಲಿಯಲ್ಲಿರುವ ಕೇಂದ್ರದ ನಾಯಕರೊಬ್ಬರನ್ನು ಭೇಟಿಯಾಗಿ ನನ್ನ ಭದ್ರತೆಯನ್ನು ಕೂಡ ತೆಗೆದುಹಾಕುವಂತೆ ಮಾಡಿದರು."ತಮಗೆ ಬೆದರಿಕೆಗಳು ಬರುತ್ತಿವೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿಕೊಂಡಿದ್ದಾರೆ.
ನಮಗೆ ತೀವ್ರ ಬೆದರಿಕೆಗಳು ಬರುತ್ತವೆ. ಈ ಜೈ ಚಂದ್ ನನ್ನನ್ನು ಕೊಲ್ಲಿಸಬಹುದು ಎಂದು ನನಗೆ ಅನ್ನಿಸುತ್ತದೆ. ಆತ ಆರ್ಜೆಡಿಯ ರಾಷ್ಟ್ರೀಯ ಅಧ್ಯಕ್ಷನಾಗಬೇಕೆಂದು ಯೋಚಿಸುತ್ತಿದ್ದಾನೆ. ನನ್ನ ತಾಯಿ ರಾಬ್ರಿ ದೇವಿ ಮಾಜಿ ಮುಖ್ಯಮಂತ್ರಿ, ಎಲ್ಲರಿಗೂ ಭದ್ರತೆ ಇರುತ್ತದೆ, ಆದರೆ ಅವರ ಭದ್ರತೆಯನ್ನು ತೆಗೆದುಹಾಕಲಾಗಿದೆ. ಹಾಗಾಗಿ, ಇದು ಅಸೂಯೆಯಿಂದ ಕೂಡಿದ ಕೆಲಸ. ಏನಾದರೂ ಸಂಭವಿಸಿದರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ? ಯಾರನ್ನೂ ಇಲ್ಲ. ಇದು ಆತಂಕಕಾರಿ ವಿಷಯ ಎಂದಿದ್ದಾರೆ."
ಮಾತುಕತೆ ವೇಳೆ ತೇಜ್ ಪ್ರತಾಪ್ ಎಫ್ಐಆರ್ (FIR) ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ತಮ್ಮ ಮಾಜಿ ಪಿಎ ಮೋತಿಲಾಲ್, ವಿರೋಧಿಗಳೊಂದಿಗೆ ಸೇರಿಕೊಂಡಿದ್ದಾನೆ. ಇದೆಲ್ಲವೂ ವಿರೋಧ ಪಕ್ಷದ ಪಿತೂರಿ. ಅವನಿಗೂ, ನನ್ನ ಜೀವಕ್ಕೆ ಅಪಾಯವಿದೆ. ಹಾಗಾಗೀ ಭಯ ಪಡುತ್ತಿದ್ದೇನೆ ಎಂದು ಹೇಳಿದರು.
ಇದು ಅವರ ಆಪ್ತ ಸಹಾಯಕ ಜೈ ಸಿಂಗ್ ರಾಥೋರ್ಗೆ ಸಂಬಂಧಿಸಿದಂತೆ ಮಾಡಿದ ಆರೋಪವಾದರೂ ಎಲ್ಲಿಯೂ ಅವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ನಾನು ಎಲ್ಲಿಗೆ ಹೋಗುತ್ತಿದ್ದೆ ಮತ್ತು ಯಾರನ್ನು ಭೇಟಿಯಾಗುತ್ತಿದ್ದೆ ಎಂಬಿತ್ಯಾದಿ ನನ್ನ ಸಂಪೂರ್ಣ ಚಟುವಟಿಕೆಗಳ ಮಾಹಿತಿಯನ್ನು ಮೋತಿಲಾಲ್, ಜೈ ಚಂದ್ ಅವರಿಗೆ ನೀಡುತ್ತಿದ್ದನು. ಆತ ಹನಿಟ್ರ್ಯಾಪ್ ಮಾಡುವ ಮೂಲಕ 5-10 ಲಕ್ಷ ರೂಪಾಯಿ ಕೊಡಿ' ಎಂದು ಬೆದರಿಸುತ್ತಿದ್ದನು. ನಾವು ಅವನಿಗೆ ಹಣ ನೀಡುತ್ತಲೇ ಹೋದೆವು. ಆತ ಬೆದರಿಕೆ ಮುಂದುವರೆಸುತ್ತಲೇ ಹೋದ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದರು.