ನವದೆಹಲಿ: ಭಯೋತ್ಪಾದಕ ದಾಳಿಗಳಲ್ಲಿ ಭಾರತ ಕೈವಾಡವಿದೆ ಎಂಬ ಪಾಕಿಸ್ತಾನದ ಆರೋಪಗಳನ್ನು ಭಾರತ ನಿರಾಕರಿಸಿದ್ದು, ಆರೋಪ ಮಾಡುವುದು ಬಿಟ್ಟು, ಆಂತರಿಕ ಭದ್ರತಾ ವೈಫಲ್ಯಗಳತ್ತ ಗಮನಹರಿಸಲಿ ಎಂದು ತಿರುಗೇಟು ನೀಡಿದೆ.
ಪಾಕಿಸ್ತಾನ ಆರೋಪ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಂಧೀರ್ ಜೈಸ್ವಾಲ್ ಅವರು, ಪಾಕಿಸ್ತಾನವು ಪ್ರತೀ ಬಾರಿ ಹಿಂಸಾತ್ಮಕ ಘಟನೆಗಳು ನಡೆದಾಗ ಭಾರತವನ್ನು ದೂಷಿಸುವುದನ್ನು ರೂಢಿಸಿಕೊಂಡಿದೆ. ಇದು ತನ್ನ ಆಂತರಿಕ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಭಾರತದ ಮೇಲೆ ಆರೋಪ ಮಾಡುವುದನ್ನು ಬಿಟ್ಟು, ಪಾಕಿಸ್ತಾನಬಲೂಚಿಸ್ತಾನ ಪ್ರದೇಶದಲ್ಲಿ ದೀರ್ಘಕಾಲದಿಂದಲೂ ಇರುವ ರಾಜಕೀಯ ಮತ್ತು ಆರ್ಥಿಕ ಅಸಮಾಧಾನಗಳತ್ತ ಗಮನ ಹರಿಸಬೇಕೆಂದು ತಿರುಗೇಟು ನೀಡಿದ್ದಾರೆ.
ಪ್ರತಿ ಹಿಂಸಾಚಾರದ ಬಳಿಕ ನಿರಾಧಾರ ಆರೋಪಗಳನ್ನು ಮಾಡುವ ಬದಲು, ಆ ಪ್ರದೇಶದ ಜನರ ದೀರ್ಘಕಾಲದ ಬೇಡಿಕೆಗಳಿಗೆ ಸ್ಪಂದಿಸುವುದು ಉತ್ತಮ ಎಂದು ಸಲಹೆನೀಡಿದ್ದಾರೆ.
ನಿಷೇಧಿತ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ, ಪಾಕಿಸ್ತಾನ (Pakistan)ದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಪಾಕ್ ಐಎಸ್ಐ ಶಿಬಿರದ ಮೇಲೆ ಶನಿವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು.
ದಾಳಿಯಲ್ಲಿ ಒಟ್ಟು 33 ಮಂದಿ ಮೃತಪಟ್ಟಿದ್ದು, ಈ ಪೈಕಿ 18 ನಾಗರಿಕರು (ಐದು ಮಹಿಳೆಯರು ಮತ್ತು ಮೂರು ಮಕ್ಕಳು ಸೇರಿ) 15 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಮಾಹಿತಿ ನೀಡಿದೆ.
ಇದೇ ವೇಳೆ ಬಲೂಚಿಸ್ತಾನದ ವಿವಿಧ ಪ್ರದೇಶಗಳಲ್ಲಿ ವ್ಯಾಪಕ ಕಾರ್ಯಾಚರಣೆ ಆರಂಭಿಸಿ, 145 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿಸಿದೆ.
ಅಲ್ಲದೆ, ದಾಳಿಗಳ ಹಿಂದೆ ಭಾರತ ಮತ್ತು ಆಫ್ಘಾನಿಸ್ತಾನ ಬೆಂಬಲವಿದೆ. ಬಲೂಚ ಲಿಬರೇಶನ್ ಆರ್ಮಿಯ ಉಗ್ರರು ಆಫ್ಘಾನಿಸ್ತಾನ ಭೂಭಾಗದಿಂದ ಕಾರ್ಯಾಚರಿಸುತ್ತಿದ್ದಾರೆಂದು ಆರೋಪಿಸಿದೆ.