ಜೈಪುರ: ಸರ್ಕಾರಿ ಕೆಲಸಕ್ಕಾಗಿ ಕಾನೂನು ವಿದ್ಯಾರ್ಥಿನಿಯೊಬ್ಬರು ತನ್ನ ಹೆತ್ತ ತಾಯಿಯನ್ನೇ ಕೊಂದು ಪೊಲೀಸರ ಅತಿಥಿಯಾಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಕಳೆದ ವರ್ಷ ಆಕೆ ತನ್ನ ತಂದೆಯನ್ನೂ ಕೊಂದಿರಬಹುದು ಎಂದು ಆಕೆಯ ತಾಯಿಯ ಸಹೋದರ ( ಮಾಮ) ಆರೋಪಿಸಿದ್ದಾರೆ.
ಜೈಪುರ ನ್ಯಾಯಾಲಯದಲ್ಲಿ ಗುಮಾಸ್ತರಾಗಿದ್ದ ನೀರಜ್ ಶರ್ಮಾ, ಕೋರ್ಟ್ ಮಾಸ್ಟರ್ ಆಗಿದ್ದ ತನ್ನ ಪತಿ ವಿಜಯ್ ಶರ್ಮಾ ಅವರ ಮರಣದ ನಂತರ ಅನುಕಂಪದ ಆಧಾರದ ಮೇಲೆ ಉದ್ಯೋಗ ಗಿಟ್ಟಿಸಿಕೊಂಡಿದ್ದರು. ವಿಜಯ್ ಶರ್ಮಾ ಕಳೆದ ವರ್ಷ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು.
ಜುಲೈ 3 ರಂದು ಜೈಪುರದಲ್ಲಿ ನೀರಜ್ ಶರ್ಮಾ ಅವರಿಗೆ ಕಾರೊಂದು ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದರು. ಆದರೆ ಅದನ್ನು ಮಾಡಿಸಿದ್ದು, ತಾನು ಹೆತ್ತು ಹೊತ್ತು ಸಾಕಿದ ಮಗಳೇ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ತಾಯಿಯನ್ನೇ ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಪೊಲೀಸರು ಆಕೆಯ ಮಗಳು ಆಯುಷಿಯನ್ನು ಬಂಧಿಸಿದ್ದಾರೆ.
ಅಂತಿಮ ವರ್ಷದ LLB ವಿದ್ಯಾರ್ಥಿನಿ ಆಯುಷಿ, ತನ್ನ ಸೋದರಸಂಬಂಧಿ ಬಲರಾಮ್ ಸಹಾಯದಿಂದ 7 ಲಕ್ಷ ರೂ.ಗೆ ಸುಫಾರಿ ಹಂತಕರನ್ನು ನೇಮಿಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ. ತಾಯಿಯನ್ನು ಕೊಂದು ರಸ್ತೆ ಅಪಘಾತದಂತೆ ಬಿಂಬಿಸುವುದು ಆಕೆಯ ಯೋಜನೆಯಾಗಿತ್ತು. ಆಯುಷಿ ತನ್ನ ತಾಯಿಯನ್ನು ಕೊಂದು ಸರ್ಕಾರಿ ಕೆಲಸ ಪಡೆಯಲು ಬಯಸಿದ್ದಳು ಅಲ್ಲದೇ ಕುಟುಂಬದ ಆಸ್ತಿಯ ಮೇಲೆ ಕಣ್ಣು ಹಾಕಿದ್ದಳು ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಯುಷಿ ಆಕೆಯ ತಂದೆಯನ್ನೂ ಕೊಂದಿದ್ದಾಳೆ ಎಂದು ಆಕೆಯ ತಾಯಿಯ ಸಹೋದರ ರಾಕೇಶ್ ಶರ್ಮಾ ಆರೋಪಿಸಿದ್ದಾರೆ. ಬ್ರೇನ್ ಸ್ಟೋಕ್ ಆದ ನಂತರ ಆಯುಷಿ ಹಾಗೂ ಆಕೆಯ ಸಂಬಂಧಿ ಬಲರಾಮ್ ಅಪರಿಚಿತ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದರು.ಪದೇ ಪದೇ ಕೇಳಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿರುವುದಾಗಿ ಹೇಳುತ್ತಿದ್ದಳು.
ಬಳಿಕ ಕುಟುಂಬಸ್ಥರು ವಿಜಯ್ ಶರ್ಮಾ ಅವರನ್ನು ಮನೆಗೆ ಕರೆತಂದಾಗ ಅವರ ಅನೇಕ ಆಂಗಾಂಗಗಳು ವಿಫಲವಾಗಿರುವುದಾಗಿ ವೈದ್ಯರು ಹೇಳಿದರು. ತನ್ನ ತಂದೆಗೆ ಆಹಾರ ನೀಡಲಾಗುತ್ತಿದ್ದ ಟ್ಯೂಬ್ ನ್ನು ಆಯುಷಿ ತೆಗೆದು ಸಾವಿಗೆ ಕಾರಣಳಾಗಿದ್ದಾಳೆ ಎಂದು ರಾಕೇಶ್ ಶರ್ಮಾ ಆರೋಪಿಸಿದ್ದಾರೆ. ಪೊಲೀಸರು ಈ ಕುರಿತು ಇದೀಗ ವಿಚಾರಣೆ ನಡೆಸುತ್ತಿದ್ದಾರೆ.