ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ 
ದೇಶ

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!

ಸರ್ಕಾರ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಅವರ ವಿರುದ್ಧ ದ್ವೇಷಪೂರಿತ ಕ್ರಮಗಳನ್ನು (witch-hunting) ಕೈಗೊಳ್ಳುತ್ತಿದೆ ಎಂದು ದಿಪ್ಕೆ ಆರೋಪಿಸಿದ್ದಾರೆ.

ನವದೆಹಲಿ: ಪ್ರತಿಭಟನಾಕಾರರ ವಿರುದ್ಧದ ಎಫ್‌ಐಆರ್‌ಗಳನ್ನು (FIRs) ಹಿಂಪಡೆಯುವ ಮತ್ತು ದಂಡನಾತ್ಮಕ ಕ್ರಮಗಳಿಂದ ದೂರವಿರುವ ಭರವಸೆಯನ್ನು ಸರ್ಕಾರ ಈಡೇರಿಸದಿದ್ದರೆ, ದೇಶಾದ್ಯಂತ ಮತ್ತೆ ಪ್ರತಿಭಟನೆಯನ್ನು ಆರಂಭಿಸುವುದಾಗಿ 'ಕಾಕ್ರೋಚ್ ಜನತಾ ಪಾರ್ಟಿ' (CJP) ಮಂಗಳವಾರ ಹೇಳಿದೆ.

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಮಧ್ಯಂತರ ಆದೇಶವನ್ನು ವಿದ್ಯಾರ್ಥಿಗಳ ವಿರುದ್ಧ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷ ಆರೋಪಿಸಿದೆ.

ಅಲ್ಲದೇ, ಸದ್ಯ ಟೈಫಾಯಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ CJP ಸಂಸ್ಥಾಪಕ ಅಭಿಜೀತ್ ದೀಪ್ಕೆ, ಎಕ್ಸ್ ನಲ್ಲಿ ಪೋಸ್ಟ್ ವೊಂದನ್ನು ಮಾಡಿದ್ದು, ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಮುಂದುವರಿದಿದೆ ಎಂದು ಆರೋಪಿಸಿದ್ದಾರೆ ಮತ್ತು ಇಂತಹ ಕ್ರಮಗಳು ನಿಲ್ಲದಿದ್ದರೆ "ಬೃಹತ್ ಶಾಂತಿಯುತ ಪ್ರತಿಭಟನೆ" ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪೊಲೀಸರಿಂದ ವಿದ್ಯಾರ್ಥಿಗಳಿಗೆ ಕಿರುಕುಳ ಮುಂದುವರಿದರೆ, ಕಾಕ್ರೋಚ್ ಜನತಾ ಪಾರ್ಟಿಯು ಶೀಘ್ರದಲ್ಲೇ ಬೃಹತ್ ಶಾಂತಿಯುತ ಪ್ರತಿಭಟನೆಯ ಮೂಲಕ ಪ್ರತಿಕ್ರಿಯಿಸುತ್ತದೆ. ಸರ್ಕಾರವು ವಿದ್ಯಾರ್ಥಿಗಳನ್ನು ಗುರಿಯಾಗಿಸುವುದನ್ನು ಮತ್ತು ಅವರ ವಿರುದ್ಧ ದ್ವೇಷಪೂರಿತ ಕ್ರಮಗಳನ್ನು ಕೈಗೊಳ್ಳುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

CJP ಪ್ರತಿಭಟನೆಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PILs) ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಮಧ್ಯಂತರ ಆದೇಶದ 'ನಿರ್ದೇಶನ ಸಂಖ್ಯೆ 4'ರ ಕುರಿತು CJP ಮುಖ್ಯ ವಕ್ತಾರ ಸೌರವ್ ದಾಸ್ ಹೇಳಿಕೆಯೊಂದನ್ನು ನೀಡಿದ್ದಾರೆ. ಈಗ ಹಾಕಲಾಗಿರುವ ಎಫ್‌ಐಆರ್‌ಗಳು ಮತ್ತು ತನಿಖೆಗಳನ್ನು ಮುಂದುವರಿಸಲು ಸರ್ಕಾರಗಳಿಗೆ ಅನುಮತಿ ನೀಡುವ ಈ ನಿರ್ದೇಶನವು, 36 ದಿನಗಳ ಕಾಲ ನಡೆದ ಪ್ರತಿಭಟನೆ ಅಂತ್ಯಗೊಳಿಸಲು ನಡೆದ ಮಾತುಕತೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಭರವಸೆಗಳಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಜುಲೈ 25 ರಂದು ಭಾರತ ಸರ್ಕಾರವು ದೇಶದ ಯುವಜನತೆಗೆ ನೀಡಿದ್ದ ಗಂಭೀರ ಭರವಸೆ ಮತ್ತು ಗ್ಯಾರಂಟಿಗೆ ಈ ನಿರ್ದೇಶನ ನೇರ ವಿರುದ್ಧವಾಗಿದೆ. ಆ ಭರವಸೆಯ ಪ್ರಕಾರ, ಎಫ್‌ಐಆರ್‌ಗಳನ್ನು ಹಿಂಪಡೆಯಲಾಗುತ್ತದೆ ಮತ್ತು ಶಾಂತಿಯುತ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಯಾವುದೇ ಪ್ರತಿಭಟನಾಕಾರರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಗುರಿಯಾಗಿಸಲಾಗುವುದಿಲ್ಲ ಎಂದು ಹೇಳಲಾಗಿತ್ತು ಎಂದು ದಾಸ್ ಹೇಳಿದ್ದಾರೆ.

ಸಿಜೆಪಿ ಮುಖ್ಯ ವಕ್ತಾರರಾದ ಸೌರವ್ ದಾಸ್, ನೀಟ್ -ಯುಜಿ ಪ್ರತಿಭಟನೆ ವೇಳೆ ಬಂಧಿಸಲಾದ ಎಲ್ಲಾ ಪ್ರತಿಭಟನಾಕಾರರನ್ನು ಬಿಡುಗಡೆ ಮಾಡಲಾಗುವುದು ಹಾಗೂ ಅವರ ವಿರುದ್ಧದ ಎಫ್ ಐಆರ್ , ವಾಪಸ್ ಪಡೆಯಲಾಗುವುದು, ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಬಿಹಾರ ಮತ್ತು ಅಸ್ಸಾಂ ಸರ್ಕಾರದ ಅಧಿಸೂಚನೆಯ ಪತ್ರಗಳನ್ನು ಎಕ್ಸ್ ಹಾಗೂ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ.

ಸರ್ಕಾರದ ಭರವಸೆಗಳ ಆಧಾರದ ಮೇಲೆ ಸಿಜೆಪಿ ತನ್ನ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು "ಸಂಪೂರ್ಣ ಸದ್ಭಾವನೆಯಿಂದ" ಹಿಂತೆಗೆದುಕೊಂಡಿದೆ. ಕೇಂದ್ರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳು ನ್ಯಾಯಾಲಯದ ಆದೇಶವನ್ನು ಬಳಸಿಕೊಂಡು ವೈಯಕ್ತಿಕ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳನ್ನು ಮುಂದುವರಿಸಬಹುದು ಎಂಬ "ವಿಶ್ವಾಸಾರ್ಹ ಆತಂಕ" ಈಗ ಎದುರಾಗಿದೆ ಎಂದು ಆರೋಪಿಸಿದರು.

ಸೋಮವಾರ ತಡರಾತ್ರಿಯವರೆಗೆ ಸಿಜೆಪಿ ಜೊತೆ ಚರ್ಚೆಗಳು ಮುಂದುವರೆದಿವೆ. ಜುಲೈ 25 ರಂದು ಈಗಾಗಲೇ ಒಪ್ಪಂದಕ್ಕೆ ಬರಲಾಗಿದೆ ಎಂದು ತಿಳಿದಿದ್ದರೂ ಸರ್ಕಾರದ ವಕೀಲರು ಮಧ್ಯಂತರ ಆದೇಶವನ್ನು ಏಕೆ ವಿರೋಧಿಸಲಿಲ್ಲ ಎಂದು ದಾಸ್ ಪ್ರಶ್ನಿಸಿದ್ದಾರೆ.ಆದ್ದರಿಂದ ನ್ಯಾಯಾಲಯದ ಮಾಹಿತಿಯಿಲ್ಲದ ಆದೇಶವು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದ್ದಾರೆ.

ಎಫ್‌ಐಆರ್‌ಗಳನ್ನು ಮುಂದುವರಿಸಲು ಸುಪ್ರೀಂಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿಲ್ಲ ಎಂದು ಹೇಳಿದ ದಾಸ್, ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಅಥವಾ ಅವುಗಳನ್ನು ಮುಂದುವರಿಸದಿರಲು ನಿರ್ಧರಿಸುವ ಅಧಿಕಾರವನ್ನು ಕಾರ್ಯಾಂಗವು ಇನ್ನೂ ಉಳಿಸಿಕೊಂಡಿದೆ ಮತ್ತು ತನ್ನ ಬದ್ಧತೆಗಳನ್ನು ಉಲ್ಲಂಘಿಸಲು ಆದೇಶವನ್ನು ಕಾರಣವೆಂದು ಉಲ್ಲೇಖಿಸಬಾರದು ಎಂದು ಕೇಂದ್ರವನ್ನು ಒತ್ತಾಯಿಸಿದರು.

"ಈ ದೇಶದ ಯುವಕರಿಗೆ ಈಗಾಗಲೇ ನೀಡಿರುವ ಬದ್ಧತೆಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರುವಂತೆ" ಕೇಂದ್ರ ಮತ್ತು ಸಂಬಂಧಪಟ್ಟ ಬಿಜೆಪಿ/ಎನ್‌ಡಿಎ ಆಡಳಿತದ ರಾಜ್ಯ ಸರ್ಕಾರಗಳು ಜುಲೈ 25 ರ ಭರವಸೆಯ ನಿಯಮಗಳನ್ನು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಇರುವ ವಿಚಾರಣೆಗಳಲ್ಲಿ ಇಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸಲು ನೀಡಿದ್ದ ಗಡುವು ಮಂಗಳವಾರ ಮುಕ್ತಾಯಗೊಂಡಿದೆ. ಎಫ್‌ಐಆರ್‌ಗಳನ್ನು ಹಿಂಪಡೆಯುವುದು, ಭವಿಷ್ಯದ ದಂಡನಾತ್ಮಕ ಕ್ರಮಗಳ ವಿರುದ್ಧ ರಕ್ಷಣೆ ಮತ್ತು ಭರವಸೆಗಳನ್ನು ಅನುಷ್ಠಾನಗೊಳಿಸುವ ಸಿಜೆಪಿಯ ಬೇಡಿಕೆಗಳನ್ನು ಪುನರುಚ್ಚರಿಸಿದ್ದಾರೆ. ಒಂದು ವೇಳೆ ಹೀಗಾಗದಿದ್ದರೆ, ವಿದ್ಯಾರ್ಥಿಗಳು ಮತ್ತು ಯುವ ಪ್ರತಿಭಟನಾಕಾರರನ್ನು ರಕ್ಷಿಸಲು ದೇಶಾದ್ಯಂತ ಪ್ರತಿಭಟನೆಯನ್ನು ಪುನರಾರಂಭಿಸುವುದನ್ನು ಬಿಟ್ಟು 'ಕಾಕ್ರೋಚ್ ಜನತಾ ಪಾರ್ಟಿ'ಗೆ ಬೇರೆ ದಾರಿಯೇ ಇರುವುದಿಲ್ಲ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಹ್ಲಾದ್ ಜೋಶಿ ಕೊಳಕು ಮನುಷ್ಯ; ಅತ್ಯಾಚಾರಿಯನ್ನು ರಕ್ಷಿಸುವವರು ನೂತನ ಶಿಕ್ಷಣ ಸಚಿವರಾಗಿದ್ದಾರೆ: ರಾಹುಲ್ ಗಂಭೀರ ಆರೋಪ, Video

ದೆಹಲಿಗೆ ಬಂದು ನಾಟಕವಾಡುವ ನಿಮಗೆ KPSC ಹಗರಣ ಅನ್ಯಾಯ ಅನಿಸಲಿಲ್ಲವೇ?: ಲೋಕಸಭೆಯಲ್ಲಿ ಸಿಎಂ ಶಿವಕುಮಾರ್ ವಿರುದ್ಧ ತೇಜಸ್ವಿ ವಾಗ್ದಾಳಿ!

ಕಾಕಿನಾಡ ಯುವಕನಿಗೆ ₹1 ಕೋಟಿ ಸಂಬಳದ AI ಉದ್ಯೋಗ: ವಿಶೇಷಚೇತನ ಟೇಲರ್ ಪುತ್ರನಿಗೆ ಬಂಪರ್ ಆಫರ್!

ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನ ಆಗಸ್ಟ್ 13 ರಿಂದ ಆರಂಭ; ಟಾಪ್‌ 10 ಚರ್ಚಾ ವಿಷಯಗಳಿವು

ಪಾಕ್ ತನ್ನ ಅತಿಕ್ರಮಣವನ್ನು ಮುಚ್ಚಿಹಾಕಲು PoKನಲ್ಲಿ ಚುನಾವಣೆ ನಡೆಸುವ ಪ್ರಯತ್ನ: ಭಾರತ ತೀವ್ರ ಖಂಡನೆ