ಚಂಡೀಗಢ: ಚಂಡೀಗಢದ ಪಂಜಾಬ್ ವಿಶ್ವವಿದ್ಯಾಲಯದ 28 ವರ್ಷದ ವಿದ್ಯಾರ್ಥಿನಿಯೊಬ್ಬರು ಮಂಗಳವಾರ ಕ್ಯಾಂಪಸ್ನಲ್ಲೇ ವಿದ್ಯುತ್ ತಗುಲಿ ಮೃತಪಟ್ಟಿರುವ ಘೋರ ದುರಂತ ಸಂಭವಿಸಿದೆ. ವಿದ್ಯುತ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು.
ಮೃತ ವಿದ್ಯಾರ್ಥಿನಿಯನ್ನು ಹರಿಯಾಣದ ರೇವಾರಿಯ ನಿವಾಸಿ ಜ್ಯೋತಿ ಎಂದು ಗುರುತಿಸಲಾಗಿದ್ದು, ಅವರು ಸೂಕ್ಷ್ಮ ಜೀವವಿಜ್ಞಾನ ವಿಭಾಗದಲ್ಲಿ ಪಿಎಚ್ಡಿ ಮಾಡುತ್ತಿದ್ದರು.
ಜ್ಯೋತಿ ಅವರು ತಮ್ಮ ಹಾಸ್ಟೆಲ್ನಿಂದ ವಿಭಾಗಕ್ಕೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮಳೆಯಿಂದಾಗಿ ಇಡೀ ಪ್ರದೇಶ ನೀರಿನಿಂದ ತುಂಬಿ ಹೋಗಿದ್ದರಿಂದ ಅವರು ಡಾಂಬರು ಹಾಕದ ಮತ್ತೊಂದು ದಾರಿಯ ಹೋಗಿದ್ದಾರೆ. ಈ ವೇಳೆ ಹತ್ತಿರದ ವಿದ್ಯುತ್ ಜಂಕ್ಷನ್ ಬಾಕ್ಸ್ ಸಮೀಪ ಹೋಗಿರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯುತ್ ಜಂಕ್ಷನ್ ಬಾಕ್ಸ್ ಬಳಿ ವಿದ್ಯುತ್ ತಗುಲಿ ಜ್ಯೋತಿ ಕುಸಿದು ಬಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಅವಳು ಮೃತಪಟ್ಟಿರುವುದಾಗಿ ಘೋಷಿಸಿದರು.
ನಂತರ ನೂರಾರು ವಿದ್ಯಾರ್ಥಿಗಳು ಕುಲಪತಿ ಪ್ರೊ. ರೇಣು ವಿಗ್ ಅವರ ಕಚೇರಿಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕ್ಯಾಂಪಸ್ ನಿರ್ವಹಣೆ ಮತ್ತು ವಿದ್ಯುತ್ ದುರಂತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಅಲ್ಲದೆ ಜ್ಯೋತಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮಂಗಳವಾರ ತಡರಾತ್ರಿ ಜ್ಯೋತಿಯವರ ಕುಟುಂಬ ಸದಸ್ಯರೊಂದಿಗೆ ನಡೆದ ಸಭೆಯ ನಂತರ, ಪಂಜಾಬ್ ವಿಶ್ವವಿದ್ಯಾಲಯದ ಅಧಿಕಾರಿಗಳು 16 ಲಕ್ಷ ರೂಪಾಯಿ ಪರಿಹಾರ ಮತ್ತು ಅವರ ಸಹೋದರನಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದೆ.
ಜ್ಯೋತಿ ಅವರ ಸಹೋದರ 10+2 ಪಾಸಾಗಿದ್ದು, ಐಟಿಐ(ಎಲೆಕ್ಟ್ರಿಕಲ್) ಪದವಿ ಪಡೆದಿದ್ದು, ಪಂಜಾಬ್ ಸರ್ಕಾರದ ನಿಯಮಗಳ ಪ್ರಕಾರ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಷಿಯನ್ ಆಗಿ ಉದ್ಯೋಗ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜ್ಯೋತಿ ಅವರ ತಂದೆ ರೈತನಾಗಿದ್ದು, ಹರಿಯಾಣದ ಖಾಸಗಿ ಶಾಲೆಯಲ್ಲಿ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ ಮತ್ತು ಅವರ ತಾಯಿ ಗೃಹಿಣಿಯಾಗಿದ್ದಾರೆ.