ಲಖನೌ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಲಾದ ಅವಹೇಳನಕಾರಿ ಕಾಮೆಂಟ್ ಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ಖಂಡಿಸಿದ್ದಾರೆ ಮತ್ತು ಯಾವುದೇ ಪುತ್ರಿಯ ವಿರುದ್ಧ ಅಂತಹ ಕಾಮೆಂಟ್ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇಂದು ಅಜಮ್ಗಢದಲ್ಲಿ 955 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 39 ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಅಖಿಲೇಶ್ ಯಾದವ್ ಪುತ್ರಿ ವಿಷಯ ನನ್ನ ಗಮನಕ್ಕೆ ಬಂದ ತಕ್ಷಣ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ ಎಂದರು.
"ಇತ್ತೀಚೆಗೆ ಕೆಲವರು ಅಖಿಲೇಶ್ ಯಾದವ್ ಅವರ ಪುತ್ರಿಯ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುತ್ತಿರುವುದು ನನ್ನ ಗಮನಕ್ಕೆ ಬಂದ ತಕ್ಷಣ, ಪೊಲೀಸರಿಗೆ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಹೇಳಿದೆ" ಎಂದು ಅವರು ಹೇಳಿದರು.
ಯಾರೂ ಸಹ ಹೆಣ್ಣುಮಕ್ಕಳನ್ನು ಗುರಿಯಾಗಿಸಬಾರದು ಮತ್ತು ಸಮಾಜವು ಸಾರ್ವಜನಿಕ ಚರ್ಚೆಯಲ್ಲಿ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹೇಳಿದರು.
"ಒಬ್ಬ ಮಗಳು ಎಲ್ಲರಿಗೂ ಮಗಳೇ. ಹಳ್ಳಿಯಲ್ಲಿರುವ ಮಗಳು ಎಲ್ಲರ ಮಗಳು ಮತ್ತು ಹಳ್ಳಿಯಲ್ಲಿರುವ ಸಹೋದರಿ ಎಲ್ಲರ ಸಹೋದರಿ ಎಂಬ ಮೌಲ್ಯಗಳೊಂದಿಗೆ ನಾವು ಬೆಳೆದಿದ್ದೇವೆ. ನಾವು ಎಂದಿಗೂ ಯಾವುದೇ ತಾರತಮ್ಯ ಮಾಡಿಲ್ಲ" ಎಂದು ಅವರು ಹೇಳಿದರು.
ಸಮಾಜವಾದಿ ಪಕ್ಷದ ಮುಖ್ಯಸ್ಥರನ್ನು ಟೀಕಿಸಿದ ಆದಿತ್ಯನಾಥ್, "ಅಖಿಲೇಶ್ ಜಿ, ನೀವು ಇತರರಿಗೆ ಸಲಹೆ ನೀಡುತ್ತೀರಿ. ಆದರೆ ನಿಮ್ಮ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಸರಿಯಾದ ಭಾಷೆಯನ್ನು ಸಂಯಮದಿಂದ ಬಳಸುವಂತೆ ಸಲಹೆ ನೀಡಿ" ಎಂದು ತಿರುಗೇಟು ನೀಡಿದರು.
ಜನರು ಇತರರ ಬಗ್ಗೆ ಹೇಳಿಕೆ ನೀಡುವ ಮೊದಲು ಯೋಚಿಸಬೇಕು ಮತ್ತು ಮಹಿಳೆಯರು, ವೃದ್ಧರು, ಮೃತ ವ್ಯಕ್ತಿಗಳು ಮತ್ತು ಹಿರಿಯ ನಾಯಕರ ವಿರುದ್ಧ ಯಾವ ರೀತಿಯ ಭಾಷೆಯನ್ನು ಬಳಸಬೇಕು ಎಂಬುದರ ಬಗ್ಗೆ ಯೋಚಿಸಬೇಕು ಎಂದರು.
ಸಾಮಾಜಿಕ ಮಾಧ್ಯಮದಲ್ಲಿ ಅಖಿಲೇಶ್ ಯಾದವ್ ಅವರ ಪುತ್ರಿ ಆದಿತಿ ಯಾದವ್ ಅವರನ್ನು ಟ್ರೋಲಿಂಗ್ ಮಾಡಲಾಗಿದೆ ಮತ್ತು ಅವರ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್ಗಳನ್ನು ಮಾಡಲಾಗಿದ್ದು, ಇದರ ವಿರುದ್ಧ ಸಮಾಜವಾದಿ ಪಕ್ಷ ಪೊಲೀಸರಿಗೆ ದೂರು ನೀಡಿದೆ.
ಕಾನ್ಪುರ ಸೇರಿದಂತೆ ಕೆಲವು ಜಿಲ್ಲೆಗಳ ಪೊಲೀಸರು ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡು ಹಲವು ಪ್ರಕರಣಗಳನ್ನು ದಾಖಲಿಸಿದ್ದಾರೆ.