ಪಾಟ್ನಾ: ಕೃತಕ ಬುದ್ಧಿಮತ್ತೆ ಬಳಸಿ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಮತ್ತು ಮೊದಲ ಬಾರಿಗೆ ಶಾಸಕಿಯಾಗಿರುವ ಮೈಥಿಲಿ ಠಾಕೂರ್ ಅವರನ್ನು ಒಳಗೊಂಡ ಆಕ್ಷೇಪಾರ್ಹ ರೀಲ್ ಮಾಡಿದ ಯುವಕನನ್ನು ಬಂಧಿಸಲಾಗಿದೆ.
ಆಧ್ಯಾತ್ಮಿಕ ತಾಣವಾಗಿ ಜಾಗತಿಕವಾಗಿ ಖ್ಯಾತಿ ಪಡೆದಿರುವ ಗಯಾದ ಫತೇಪುರ್ ನಲ್ಲಿ ಈ ಘಟನೆ ನಡೆದಿದೆ. ಶಬ್ದೋ ಗ್ರಾಮದ ನಿವಾಸಿ ವಿಕಾಸ್ ಕುಮಾರ್ ಯಾದವ್ ಬಂಧಿತ ಆರೋಪಿಯಾಗಿದ್ದಾನೆ. ಫತೇಪುರ್ನಲ್ಲಿ ಓದುತ್ತಿದ್ದ ಈತ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧನಾಗುವ ಪ್ರಸಿದ್ಧನಾಗುವ ಗೀಳಿಗೆ ಬಿದಿದ್ದ. ಇದೇ ಹುಚ್ಚು ಆತನನ್ನು ಜೈಲಿಗೆ ತಳ್ಳಿದೆ.
ತನ್ನ ವಿಡಿಯೋಗಳು ವೈರಲ್ ಆಗಬೇಕು ಎಂಬ ಆಸೆಯಿಂದ ಆಗಾಗ ರೀಲ್ಗಳನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದೆ. ಆದಾಗ್ಯೂ, ಹೆಚ್ಚಿನ ರೀಲ್ಗಳಿಗೆ ಲೈಕ್, ಕಾಮೆಂಟ್ ಬರುತ್ತಿರಲಿಲ್ಲ, ಹೀಗಾಗಿ ಏನಾದರೂ ಮಾಡಬೇಕು ಅಂದುಕೊಂಡು ಈ ರೀಲ್ ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಇತ್ತೀಚೆಗೆ ಜೆಡಿಯುಗೆ ಸೇರ್ಪಡೆಗೊಂಡಾಗ ಒಂದು ಐಡಿಯಾ ಹೊಳೆದಿತ್ತು. ನಿಶಾಂತ್ ಕುಮಾರ್ ಮತ್ತು ಶಾಸಕಿ ಮೈಥಿಲಿ ಠಾಕೂರ್ ಅವರ ಫೋಟೋ ಬಳಸಿ AI ತಂತ್ರಜ್ಞಾನದೊಂದಿಗೆ ಆಕ್ಷೇಪಾರ್ಹ ರೀಲ್ ರಚಿಸಿ, ಆನ್ಲೈನ್ನಲ್ಲಿ ಪೋಸ್ಟ್ ಮಾಡಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ರೀಲ್ ಪೋಸ್ಟ್ ಮಾಡುತ್ತಿದ್ದಂತೆ ಲೈಕ್ಗಳು, ಕಾಮೆಂಟ್ಗಳು ಮತ್ತು ಶೇರ್ಗಳ ಸಂಖ್ಯೆ ಹೆಚ್ಚಾಗಿದೆ. ಹೀಗೆ ಆರೋಪಿ ಪ್ಲಾನ್ ಯಶಸ್ವಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗುತ್ತೇನೆ ಅಂದುಕೊಂಡಿದ್ದ. ಆದರೆ, ಅದು ಆತನ ಬಂಧನಕ್ಕೆ ಕಾರಣವಾಗಿದೆ.