ಕೊಲ್ಕೋತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಪರಾಧಿಗಳ ವಿರುದ್ಧ ಉತ್ತರ ಪ್ರದೇಶ ಶೈಲಿಯ ಎನ್-ಕೌಂಟರ್ ನಡೆಸಲಾಗುತ್ತದೆ ಎಂದು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ವಿವಾದಾತ್ಮಕ ಪೊಲೀಸ್ ಎನ್ಕೌಂಟರ್ ಮಾದರಿಯಿಂದ ಹೆಚ್ಚು ಆಕ್ರೋಶಕ್ಕೆ ಗುರಿಯಾಗುತ್ತದೆ. ಅದೇ ಎನ್ಕೌಂಟರ್ ಮಾದರಿಯನ್ನು ಬಂಗಾಳದಲ್ಲಿಯೂ ಬಿಜೆಪಿ ಜಾರಿಗೊಳಿಸುತ್ತದೆ ಎಂದು ಘೋಷ್ ಹೇಳಿಕೊಂಡಿದ್ದಾರೆ.
ಬಂಗಾಳದ ಖರಗ್ಪುರ ಕ್ಷೇತ್ರದ ಅಭ್ಯರ್ಥಿಯಾಗಿರುವ ಘೋಷ್, ತಮ್ಮ ಚುನಾವಣಾ ಪ್ರಚಾರದಲ್ಲಿ ಪಶ್ಚಿಮ ಬಂಗಾಳದ ಪೊಲೀಸರು ಪ್ರಸ್ತುತ ಆಡಳಿತಾರೂಢ ಟಿಎಂಸಿ ಆದೇಶದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಪರಾಧಿಗಳು ಮತ್ತು ಮಾಫಿಯಾಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮೇ 4ರ ನಂತರ ಎಲ್ಲವೂ ಬದಲಾಗಲಿದೆ. ಇಂದು ನೀವು ಮಾಫಿಯಾಗಳೊಂದಿಗೆ ಕುಳಿತು ಚಹಾ ಕುಡಿಯುತ್ತಾ ಮತ್ತು ಭ್ರಷ್ಟ ನಾಯಕರ ಚಮಚಾಗಳಂತೆ ವರ್ತಿಸುತ್ತಿರುವುದನ್ನು ನೋಡುತ್ತಿರುವ ಪೊಲೀಸರು ತಮ್ಮ ಕಾರ್ಯ ವೈಖರಿಯನ್ನು ಬದಲಾಯಿಸಿಕೊಳ್ಳಲಿದ್ದಾರೆ. ಇದೇ ಪೊಲೀಸರು ಉತ್ತರ ಪ್ರದೇಶದ ಶೈಲಿಯಲ್ಲಿ ಎನ್-ಕೌಂಟರ್ಗಳನ್ನು ನಡೆಸಲಿದ್ದಾರೆ ಮತ್ತು ಅಪರಾಧಿಗಳನ್ನು ಜೈಲಿಗಟ್ಟಲಿದ್ದಾರೆ ಎಂದು ದಿಲೀಪ್ ಘೋಷ್ ಹೇಳಿದ್ದಾರೆ.
ಇನ್ನೂ ದಿಲೀಪ್ ಘೋಷ್ ಹೇಳಿಕೆಗೆ ತಿರುಗೇಟು ನೀಡಿರುವ ಟಿಎಂಸಿ, ಬಿಜೆಪಿ ಬಹಿರಂಗವಾಗಿ ಕಾನೂನುಬಾಹಿರ ಹಿಂಸಾಚಾರವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ. ಎನ್ಕೌಂಟರ್ ಸಂಸ್ಕೃತಿಯು ಉತ್ತರ ಪ್ರದೇಶದಲ್ಲಿ ನಡೆಯುತ್ತದೆ, ಬಂಗಾಳದಲ್ಲಲ್ಲ. ಚುನಾವಣಾ ಆಯೋಗವು ಅವರ ಭಾಷಣವನ್ನು ಗಮನಿಸಬೇಕು ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ.
ಕಾನೂನು ಕ್ರಮಕ್ಕೆ ಆಗ್ರಹ: ದಿಲೀಪ್ ಘೋಷ್ ಅವರಿಗೆ ನಿರ್ಬಂಧ ಹೇರಬೇಕು ಮತ್ತು ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಟಿಎಂಕೆ ಒತ್ತಾಯಿಸಿದೆ. ಈ ಹಿಂದೆಯೂ ಕಾಳೀಘಾಟ್ ಮತ್ತು ಚೇತ್ಲಾ ಪ್ರದೇಶಗಳಲ್ಲಿ ಟಿಎಂಕೆ ಕಾರ್ಯಕರ್ತರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಾರ್ಚ್ 16 ರಂದು ಘೋಷ್ ವಿರುದ್ಧ ದೂರು ದಾಖಲಾಗಿತ್ತು.