ನವದೆಹಲಿ: ಕಾಂಗ್ರೆಸ್, ಡಿಎಂಕೆ, ಎಸ್ಪಿ ಮತ್ತು ಎಡಪಂಥೀಯ ಪಕ್ಷಗಳನ್ನು ಒಳಗೊಂಡ ವಿರೋಧ ಪಕ್ಷಗಳು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರ ಏರಿಕೆ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದನ್ನು ಚುನಾವಣಾ ಬಿಲ್ ಎಂದು ಹೇಳಿದ್ದು, ಮುಂದಿನ ಪ್ರಹಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿರಲಿದೆ ಎಂದು ಹೇಳಿದ್ದಾರೆ.
ನಿನ್ನೆ ಶುಕ್ರವಾರ 19 ಕೆ.ಜಿ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗೆ 993ರೂಪಾಯಿಗಳಷ್ಟು ಭಾರೀ ಏರಿಕೆ ಮಾಡಲಾಗಿದೆ. ಇದುವರೆಗೆ ಮಾಡಲಾದ ಅತಿ ದೊಡ್ಡ ಏರಿಕೆಯಾಗಿದೆ. ಪಶ್ಚಿಮ ಏಷ್ಯಾದ ಸಂಘರ್ಷದ ಹಿನ್ನೆಲೆ ಯುದ್ಧ ಆರಂಭವಾದಾಗಿನಿಂದ ಜಾಗತಿಕ ಇಂಧನ ದರ ಏರಿಕೆಯಿಂದ ಇದು ಮೂರನೇ ಸತತ ತಿಂಗಳ ಏರಿಕೆಯಾಗಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಬಳಸುವ 19 ಕೆ.ಜಿ. ಸಿಲಿಂಡರ್ ದರ ದೆಹಲಿಯಲ್ಲಿ ಈಗ 3,071.50ರೂಪಾಯಿಗೆ ಏರಿಕೆಯಾಗಿದೆ (ಹಿಂದೆ ರೂ. 2,078.50 ಇತ್ತು).
ರಾಹುಲ್ ಗಾಂಧಿ ಅವರು ಚುನಾವಣೆಯ ನಂತರ ದರ ಏರಿಕೆಯ ಬಾಧೆ ಎದುರಾಗಲಿದೆ ಎಂದು ತಾವು ಮುಂಚಿತವಾಗಿ ಎಚ್ಚರಿಸಿದ್ದಾಗಿ ಹೇಳಿದ್ದಾರೆ. ಇಂದು ವಾಣಿಜ್ಯ ಗ್ಯಾಸ್ ಸಿಲಿಂಡರ್ ದರ 993 ರೂಗಳಷ್ಟು ಹೆಚ್ಚಾಗಿದೆ. ಇದು ಒಂದೇ ದಿನದಲ್ಲಿ ನಡೆದ ಅತಿ ದೊಡ್ಡ ಏರಿಕೆ. ಇದು ಚುನಾವಣಾ ಬಿಲ್ ಎಂದು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಫೆಬ್ರವರಿಯಿಂದ ನೋಡಿದರೆ: 1,380ರೂಪಾಯಿ ಏರಿಕೆ, ಅಂದರೆ ಕೇವಲ ಮೂರು ತಿಂಗಳಲ್ಲಿ 81 ಶೇಕಡಾ ಆಗಿದೆ. ಟೀ ಅಂಗಡಿ, ಡಾಬಾ, ಹೊಟೇಲ್, ಬೇಕರಿ, ಸಣ್ಣ ಅಂಗಡಿ—ಪ್ರತಿ ಅಡುಗೆಮನೆಗೂ ದರ ಭಾರವಾಗಿದೆ. ಇದರ ಪರಿಣಾಮ ನಿಮ್ಮ ಊಟದ ಮೇಲೂ ಬೀಳಲಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಮೊದಲ ಪ್ರಹಾರ ಗ್ಯಾಸ್ ಮೇಲೆ ಆಗಿದೆ; ಮುಂದಿನದು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಆಗಲಿದೆ ಎಂದು ಹೇಳಿದ್ದಾರೆ.
ಸಾಮಾನ್ಯ ಜನರ ಸಂಕಷ್ಟದ ಬಗ್ಗೆ ಆಡಳಿತ ಪಕ್ಷದ ಗಮನವು ಕೇವಲ ಚುನಾವಣಾ ಸ್ಟಂಟ್ಗಳಿಗೆ ಸೀಮಿತವಾಗಿದೆ, ಜನರ ಸಂಕಷ್ಟ ಸರ್ಕಾರ ಕೇಳಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧ ಟೀಕೆ ನಡೆಸಿ, ಇದು ಸಾಮಾನ್ಯ ಜನರಿಗೆ ಆಹಾರ ದುಬಾರಿಯಾಗುವಂತೆ ಮಾಡಲಿದೆ ಎಂದು ಹೇಳಿದರು.
ಜನಸಾಮಾನ್ಯರ ಆಹಾರ ದುಬಾರಿಯಾಗುತ್ತದೆ. ಅದನ್ನು ಸ್ವತಃ ಖರೀದಿ ಮಾಡಿ ತಿನ್ನುವವರಿಗೆ ಮಾತ್ರ ಗೊತ್ತಾಗುತ್ತದೆ; ಇತರರ ಮನೆಗೆ ಹೋಗಿ ತಿನ್ನುವವರಿಗೆ ಅಥವಾ ಇತರರ ತಟ್ಟೆಯಿಂದ ಕದಿಯುವವರಿಗೆ ಗೊತ್ತಾಗುವುದಿಲ್ಲ ಎಂದು ಅಖಿಲೇಶ್ ಯಾದವ್ ಟೀಕಿಸಿದರು.
ದರ ಏರಿಕೆ, ನಿರುದ್ಯೋಗ ಬಗ್ಗೆ ಬಿಜೆಪಿ ಯಾವಾಗ ಖಂಡನಾ ನಿರ್ಣಯ ತರುತ್ತದೆ ಎಂದು ಪ್ರಶ್ನಿಸಿದರು.
ಇದರ ನಡುವೆ, ಜನರ ಜೀವನೋಪಾಯವನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎಲ್ಪಿಜಿ ದರ ಏರಿಕೆಯನ್ನು ತಕ್ಷಣ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ಚುನಾವಣೆಗೆ ಮುನ್ನವೇ ಹೇಳಿದಂತೆ, ಚುನಾವಣೆ ಮುಗಿದ ತಕ್ಷಣ ಬಿಜೆಪಿ ನೇತೃತ್ವದ ಸರ್ಕಾರ ದರಗಳನ್ನು ಹೆಚ್ಚಿಸಿದೆ ಎಂದು ಅವರು ಎಕ್ಸ್ನಲ್ಲಿ ಆರೋಪಿಸಿದರು.
ಜಾಗತಿಕ ಕಚ್ಚಾ ತೈಲದ ದರ ಇಳಿದಾಗ ಅದರ ಲಾಭವನ್ನು ಜನರಿಗೆ ನೀಡಲಿಲ್ಲ. ಜನರ ಕಲ್ಯಾಣವನ್ನು ಕಡೆಗಣಿಸಿ ಪಶ್ಚಿಮ ಏಷ್ಯಾ ಯುದ್ಧವನ್ನು ಕಾರಣವಾಗಿ ಬಳಸಿಕೊಂಡು ದರಗಳನ್ನು ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.