ತಮಿಳಿಗ ವೆಟ್ರಿ ಕಳಗಂ ಅಧ್ಯಕ್ಷ ಸಿ ಜೋಸೆಫ್ ವಿಜಯ್ ಅವರು ಇಂದು ಭಾನುವಾರ (ಮೇ 10, 2026) ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರೊಂದಿಗೆ ರಾಜ್ಯದ ಎರಡು ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸುಮಾರು ಆರು ದಶಕಗಳ ಪರ್ಯಾಯ ಆಡಳಿತ ಅಂತ್ಯವಾಗಲಿದೆ.
ತಮಿಳುನಾಡು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರು ನಿನ್ನೆ 234 ಸದಸ್ಯರ ವಿಧಾನಸಭೆಯಲ್ಲಿ 120 ಶಾಸಕರ ಬೆಂಬಲ ಪಡೆದ ನಂತರ ವಿಜಯ್ ಅವರನ್ನು ಮುಖ್ಯಮಂತ್ರಿ-ನಿಯುಕ್ತರಾಗಿ ಘೋಷಿಸಿದರು.
ವಿಜಯ್ ಅವರು ಇಂದು ಬೆಳಗ್ಗೆ 10 ಗಂಟೆಗೆ ಚೆನ್ನೈನ ಜವಹರಲಾಲ್ ನೆಹರೂ ಸ್ಟೇಡಿಯಂನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರೊಂದಿಗೆ ಟಿವಿಕೆಯ ಕೆಲ ಹಿರಿಯ ನಾಯಕರನ್ನು ಒಳಗೊಂಡಂತೆ ಇನ್ನೂ ಒಂಬತ್ತು ಸಚಿವರೂ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶಿವಕಾಶಿಯ 29 ವರ್ಷದ ಶಾಸಕಿ ಕೀರ್ತನಾ ಅವರು ವಿಜಯ್ ಸಂಪುಟದಲ್ಲಿ ಅತ್ಯಂಕ ಕಿರಿಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.
ಸಮಾರಂಭ ಕಾರ್ಯಕ್ರಮ ಸುತ್ತ ಭದ್ರತೆ
ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ವಿಜಯ್ ಅವರು ಭದ್ರತಾ ವಾಹನಗಳ ಮಧ್ಯೆ ತಮ್ಮ ನಿವಾಸದಿಂದ ಸಮಾರಂಭದ ಸ್ಥಳದತ್ತ ಆಗಮಿಸಿದ್ದಾರೆ. ಗಣ್ಯರು ಮತ್ತು ಸಾರ್ವಜನಿಕರು ಈಗಾಗಲೇ ಆಸನಗಳನ್ನು ಪಡೆದು ಈ ಐತಿಹಾಸಿಕ ಕ್ಷಣವನ್ನು ಕಾದಿದ್ದಾರೆ.
ವಿಜಯ್ ಅವರು ಕಾಂಗ್ರೆಸ್ ಪಕ್ಷದ ಜೊತೆಯ ಮೈತ್ರಿ ಸರ್ಕಾರವನ್ನು ಮುನ್ನಡೆಸಲಿದ್ದಾರೆ. ಇದೇ ವೇಳೆ, ರಾಜ್ಯಪಾಲರು ಮೇ 13ರೊಳಗೆ ವಿಧಾನಸಭೆಯಲ್ಲಿ ವಿಶ್ವಾಸ ಮತವನ್ನು ಸಾಬೀತುಪಡಿಸುವಂತೆ ವಿಜಯ್ ಅವರಿಗೆ ಸೂಚಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಮುಂದುವರಿದಿದ್ದ ರಾಜಕೀಯ ಅನಿಶ್ಚಿತತೆಗೆ ನಿನ್ನೆ ಸಂಜೆ ತೆರೆ ಬಿದ್ದಿತು. ವಿಸಿಕೆ ಮತ್ತು ಐಯುಎಂಎಲ್ ತಮ್ಮ ಬೆಂಬಲ ಘೋಷಿಸಿದ ನಂತರ ಟಿವಿಕೆಯ ಬಲ 120ಕ್ಕೆ ಏರಿಕೆಯಾಯಿತು.
ನಂತರ ವಿಜಯ್ ಅವರು ಚೆನ್ನೈನ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಕಾಂಗ್ರೆಸ್, ಸಿಪಿಐ, ಸಿಪಿಎಂ, ವಿಸಿಕೆ ಮತ್ತು ಐಯುಎಂಎಲ್ ಪಕ್ಷಗಳ ಬೆಂಬಲ ಪತ್ರಗಳನ್ನು ಸಲ್ಲಿಸಿದರು.
ಲೋಕಭವನ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಸಿ. ಜೋಸೆಫ್ ವಿಜಯ್ ಸೇರಿದಂತೆ ಟಿವಿಕೆಯ ಒಂಬತ್ತು ಶಾಸಕರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆದರೆ ಕಾಂಗ್ರೆಸ್ನ ಯಾವುದೇ ಶಾಸಕ ಇಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವುದಿಲ್ಲ. ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತ ಸಂಖ್ಯೆಯನ್ನು ತಲುಪಲು ಕಾಂಗ್ರೆಸ್ನ ಐದು ಶಾಸಕರ ಬೆಂಬಲ ಪ್ರಮುಖ ಪಾತ್ರವಹಿಸಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.
ಪ್ರಮಾಣವಚನ ಸಮಾರಂಭಕ್ಕೂ ಮುನ್ನ ಪನಯ್ಯೂರಿನ ಟಿವಿಕೆ ಪಕ್ಷ ಕಚೇರಿಯಲ್ಲಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಸೇರಿರುವ ದೃಶ್ಯಗಳು ಕಂಡುಬಂದಿವೆ.
ಪ್ರಮಾಣವಚನ ಸಮಾರಂಭ ನಡೆಯಲಿರುವ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಇದನ್ನು ಅಧಿಕೃತವಾಗಿ ಮುಂಚಿತವಾಗಿ ಪ್ರಕಟಿಸದಿದ್ದರೂ, ಕ್ರೀಡಾಂಗಣದತ್ತ ಹೋಗುವ ಬಹುತೇಕ ರಸ್ತೆಗಳು ಸಾರ್ವಜನಿಕರಿಗೆ ಮುಚ್ಚಲ್ಪಟ್ಟಿವೆ. ಕೇವಲ ಅನುಮತಿ ಪಡೆದ ವಾಹನಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ನಟಿ ತೃಶಾ ಕೂಡ ಕಾರ್ಯಕ್ರಮಕ್ಕೆ ಆಗಮಿಸಿ ವಿಜಯ್ ಅವರ ಸೋದರಿ ಮತ್ತು ತಂದೆ-ತಾಯಿಗೆ ಶುಭಾಶಯ ತಿಳಿಸಿದರು.