ಚೆನ್ನೈ: ತಮಿಳುನಾಡಿನ ನೂತನ ಸಿಎಂ ಆಗಿ ಆಯ್ಕೆಯಾಗಿರುವ ನಟ ವಿಜಯ್ ಗೆ ಮೊದಲ ದಿನವೇ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ್ದು, Tamilaga Vettri Kazhagam ಪಕ್ಷದ ಶಾಸಕರೊಬ್ಬರು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ತಡೆ ಹಾಕಿದೆ.
ಹೌದು.. ಮಹತ್ವದ ಬೆಳವಣಿಗೆಯಲ್ಲಿ ಮದ್ರಾಸ್ ಹೈಕೋರ್ಟ್ ಮಂಗಳವಾರ ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ದೊಡ್ಡ ಹಿನ್ನಡೆಯನ್ನು ನೀಡಿದ್ದು, ತಿರುಪತ್ತೂರು ಶಾಸಕ R ಶ್ರೀನಿವಾಸ ಸೇತುಪತಿ ಅವರನ್ನು ವಿಧಾನಸಭೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ತಾತ್ಕಾಲಿಕವಾಗಿ ನಿರ್ಬಂಧಿಸಿದೆ.
ಇದರಲ್ಲಿ ನಟ-ರಾಜಕಾರಣಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರ ಎದುರಿಸಲಿರುವ ವಿಶ್ವಾಸಮತ ಯಾಚನೆ ಪರೀಕ್ಷೆಯೂ ಸೇರಿದೆ.
ನ್ಯಾಯಮೂರ್ತಿಗಳಾದ ಎಲ್. ವಿಕ್ಟೋರಿಯಾ ಗೌರಿ ಮತ್ತು ಎನ್. ಸೆಂಥಿಲ್ ಕುಮಾರ್ ಒಳಗೊಂಡ ವಿಭಾಗೀಯ ಪೀಠವು ಈ ಸೀಮಿತ ಮಧ್ಯಂತರ ತಡೆ ಆದೇಶವನ್ನು ನೀಡಿದೆ. ಈ ಅರ್ಜಿಯನ್ನು ಡಿಎಂಕೆ ಹಿರಿಯ ನಾಯಕ ಹಾಗೂ ಮಾಜಿ ಸಚಿವ KR ಪೆರಿಯಕರುಪ್ಪನ್ ಸಲ್ಲಿಸಿದ್ದರು. ಅವರು ತಿರುಪತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಸೋತಿದ್ದರು.
ಆರೋಪವೇನು?
ಪೆರಿಯಕರುಪ್ಪನ್ ಅವರು, ಶಿವಗಂಗೈ ಜಿಲ್ಲೆಯ ತಿರುಪತ್ತೂರು ಕ್ಷೇತ್ರಕ್ಕೆ ಸೇರಿದ ಅಂಚೆ ಮತಪತ್ರವನ್ನು ತಪ್ಪಾಗಿ ತಿರುಪತ್ತೂರು ಜಿಲ್ಲೆಯ ಮತ್ತೊಂದು ತಿರುಪತ್ತೂರು ಕ್ಷೇತ್ರಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಿದರು. ಅರ್ಜಿಯ ಪ್ರಕಾರ, ಆ ಮತಪತ್ರವನ್ನು ಸರಿಯಾದ ಕ್ಷೇತ್ರಕ್ಕೆ ಮರುಕಳುಹಿಸಿ ಎಣಿಸುವ ಬದಲು ತಿರಸ್ಕರಿಸಲಾಗಿದೆ ಎಂದು ಆರೋಪಿಸಿದ್ದರು.
ಅರ್ಜಿದಾರರು ಪ್ರಾಥಮಿಕ ದೃಷ್ಟಿಯಲ್ಲಿ ಬಲವಾದ ಪ್ರಕರಣವನ್ನು ಸ್ಥಾಪಿಸಿದ್ದಾರೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿತು ಮತ್ತು ಮುಂದಿನ ಆದೇಶದವರೆಗೆ ಶ್ರೀನಿವಾಸ ಸೇತುಪತಿ ಅವರು ವಿಶ್ವಾಸ ಮತ, ಅವಿಶ್ವಾಸ ಮತ, ಟ್ರಸ್ಟ್ ಮತ ಸೇರಿದಂತೆ ವಿಧಾನಸಭೆಯ ಸಂಖ್ಯಾಬಲ ಪರೀಕ್ಷೆಯಾಗುವ ಯಾವುದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬಾರದು ಎಂದು ಆದೇಶಿಸಿದೆ.
ಆದರೆ, ಈ ಮಧ್ಯಂತರ ಆದೇಶವು ಸೇತುಪತಿಯವರ ಚುನಾವಣೆಯನ್ನು ರದ್ದುಗೊಳಿಸುವುದಾಗಿ ಪರಿಗಣಿಸಲಾಗುವುದಿಲ್ಲ ಮತ್ತು ಪೆರಿಯಕರುಪ್ಪನ್ ಅವರನ್ನು ಸ್ವಯಂಚಾಲಿತವಾಗಿ ವಿಜೇತರಾಗಿ ಘೋಷಿಸುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿತು. ವಾದದ ವೇಳೆ ಪೆರಿಯಕರುಪ್ಪನ್ ಪರ ವಕೀಲರಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹ್ಟಗಿ (Mukul Rohatgi), ಒಂದು ಕ್ಷೇತ್ರದ ಅಂಚೆ ಮತಪತ್ರ ಮತ್ತೊಂದು ಕ್ಷೇತ್ರಕ್ಕೆ ಹೋಗಿರುವುದು “ವಿಶಿಷ್ಟ” ಹಾಗೂ “ವಿಚಿತ್ರ” ಪರಿಸ್ಥಿತಿ ಎಂದು ವಿವರಿಸಿದರು. ಗೆಲುವಿನ ಅಂತರ ಕೇವಲ ಒಂದು ಮತವಾಗಿದ್ದರಿಂದ, ಆ ಮತವನ್ನು ಎಣಿಸಿದ್ದರೆ ಚುನಾವಣಾ ಫಲಿತಾಂಶ ಬದಲಾಗಬಹುದಿತ್ತು ಎಂದು ಅವರು ವಾದಿಸಿದರು.
ಇನ್ನೊಂದೆಡೆ, ಸೇತುಪತಿ ಪರ ವಾದಿಸಿದ ಹಿರಿಯ ವಕೀಲರಾದ ಅಭಿಶೇಕ್ ಮನು ಸಿಂಘ್ವಿ ಮತ್ತು ವಿ ರಾಘವ ಆಚಾರಿ, ಚುನಾವಣಾ ವಿವಾದಗಳನ್ನು ಕೇವಲ ಚುನಾವಣಾ ಅರ್ಜಿಯ ಮೂಲಕವೇ ಪ್ರಶ್ನಿಸಬಹುದು, ರಿಟ್ ಅರ್ಜಿಯ ಮೂಲಕ ಅಲ್ಲ ಎಂದು ವಾದಿಸಿದರು.
ನ್ಯಾಯಾಲಯವು ಚುನಾವಣಾ ಆಯೋಗದ ನಿಲುವನ್ನು ಪ್ರಶ್ನಿಸಿ, ಒಂದು ಕ್ಷೇತ್ರದ ಮತಪತ್ರ ಮತ್ತೊಂದು ಕ್ಷೇತ್ರಕ್ಕೆ ಹೋಗಿರುವ ಗಂಭೀರ ವಿಷಯವಿರುವಾಗ ಆಯೋಗವು ತನ್ನ ಅಧಿಕಾರ ಮುಗಿದಿದೆ ಎಂದು ಹೇಗೆ ಹೇಳಬಹುದು ಎಂದು ಕೇಳಿತು. ತಮ್ಮ ಪ್ರತಿಜ್ಞಾಪತ್ರದಲ್ಲಿ ಚುನಾವಣಾ ಆಯೋಗವು, ಸಂವಿಧಾನದ ವಿಧಿ 329(b) ಪ್ರಕಾರ ಚುನಾವಣಾ ವಿವಾದಗಳಲ್ಲಿ ನ್ಯಾಯಾಲಯದ ಹಸ್ತಕ್ಷೇಪ ನಿಷೇಧಿಸಲಾಗಿದೆ ಮತ್ತು ಜನಪ್ರತಿನಿಧಿತ್ವ ಕಾಯ್ದೆ 1951ರ ಸೆಕ್ಷನ್ 80 ಅಡಿಯಲ್ಲಿ ಮಾತ್ರ ಚುನಾವಣಾ ಅರ್ಜಿಯ ಮೂಲಕ ಪ್ರಶ್ನಿಸಬಹುದು ಎಂದು ತಿಳಿಸಿತು.
ಈ ತೀರ್ಪು ವಿಜಯ್ ನೇತೃತ್ವದ ಸರ್ಕಾರದ ಸ್ಥಿರತೆಯನ್ನು ನಿರ್ಧರಿಸಬಹುದಾದ ವಿಶ್ವಾಸ ಪರೀಕ್ಷೆಗೆ ಮುನ್ನವೇ ತಮಿಳುನಾಡಿನ ರಾಜಕೀಯ ವಾತಾವರಣವನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.