ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರ ಇಂಧನ ಉಳಿತಾಯ ಮನವಿಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗುರುವಾರ ವಿಧಾನ ಪರಿಷತ್ತಿನ ಹೊಸ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಬುಲೆಟ್ ಏರಿ ವಿಧಾನ ಭವನಕ್ಕೆ ಆಗಮಿಸಿದರು.
ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದ ಹಿನ್ನೆಲೆಯಲ್ಲಿ ಮಹಾ ಸಿಎಂ ಫಡ್ನವೀಸ್ ಅವರು, ಹತ್ತಾರು ಕಾರುಗಳ ಬೆಂಗಾವಲು ಪಡೆಯನ್ನು ತ್ಯಜಿಸಿ ಬೈಕ್ ಏರಿ ವಿಧಾನ ಭವನಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು.
ಫಡ್ನವೀಸ್ ಅವರು ತಮ್ಮ ನಿವಾಸ 'ವರ್ಷ'ದಿಂದ ಇಂದು ಬುಲೆಟ್ ನಲ್ಲಿ ದಕ್ಷಿಣ ಮುಂಬೈನ ವಿಧಾನ ಭವನಕ್ಕೆ ಆಗಮಿಸಿದರು. ಅವರೊಂದಿಗೆ ಬಿಜೆಪಿ ನಾಯಕ ಮತ್ತು ಸಚಿವ ಆಶಿಶ್ ಶೇಲಾರ್ ಕೂಡ ಇದ್ದರು.
ಇಂಧನ ಉಳಿಸಲು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಅವರು ಸಂಪುಟ ಸಭೆಯಲ್ಲಿ ಭಾಗವಹಿಸಲು 'ಮಂತ್ರಾಲಯ'(ಸಚಿವಾಲಯ)ಗೆ ನಡೆದುಕೊಂಡೇ ಬಂದರು.
ಬುಧವಾರ, ಸಿಎಂ ಫಡ್ನವೀಸ್ ಅವರು ತಮ್ಮ ಸಂಪುಟ ಸಹೋದ್ಯೋಗಿಗಳ ಬೆಂಗಾವಲು ಪಡೆಗಳ ವಾಹನಗಳ ಸಂಖ್ಯೆಯನ್ನು ಅರ್ಧಕ್ಕೆ ಇಳಿಸಿದ್ದು, ಸಚಿವರು ಮತ್ತು ಅಧಿಕಾರಿಗಳ ವಿದೇಶ ಪ್ರವಾಸಗಳನ್ನು ರದ್ದುಗೊಳಿಸುವುದು ಸೇರಿದಂತೆ ಹಲವಾರು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಜಾಗತಿಕ ಇಂಧನ ಪೂರೈಕೆಗೆ ಅಡ್ಡಿಪಡಿಸಿರುವ ಪಶ್ಚಿಮ ಏಷ್ಯಾ ಸಂಘರ್ಷದ ಹಿನ್ನೆಲೆಯಲ್ಲಿ ಇಂಧನ ಮತ್ತು ವಿದೇಶಿ ವಿನಿಮಯವನ್ನು ಉಳಿಸಲು ಪ್ರಧಾನಿ ಮೋದಿ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ.