ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರು ಗುರುವಾರ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 21 ಟಿವಿಕೆ ಶಾಸಕರು ಹಾಗೂ ಇಬ್ಬರು ಕಾಂಗ್ರೆಸ್ ಶಾಸಕರು ಸೇರಿದಂತೆ ಒಟ್ಟು 23 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಕಾಂಗ್ರೆಸ್, ಸುಮಾರು ಆರು ದಶಕಗಳ ನಂತರ ತಮಿಳುನಾಡಿನಲ್ಲಿ ಅಧಿಕಾರ ಹಂಚಿಕೊಳ್ಳುತ್ತಿದೆ.
ಇಂದು ಬೆಳಗ್ಗೆ 10 ಗಂಟೆಗೆ ಲೋಕ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ವಿಜಯ್ ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಈ ಸಂಪುಟ ವಿಸ್ತರಣೆಯೊಂದಿಗೆ, ವಿಜಯ್ ನೇತೃತ್ವದ ಸಚಿವ ಸಂಪುಟದ ಬಲ 33ಕ್ಕೆ ಏರಿದೆ. ಆದರೆ ವಿಜಯ್ ಸಚಿವ ಸಂಪುಟದ ಒಟ್ಟು ಅನುಮೋದಿತ ಬಲ 35 ಆಗಿದ್ದು, ಇನ್ನೂ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಅವಕಾಶ ಇದೆ. ಆದರೆ ವಿಜಯ್ ಅವರು ತಮ್ಮ ಸರ್ಕಾರಕ್ಕೆ ಬೆಂಬಲ ನೀಡಿದ ಎಐಎಡಿಎಂಕೆ ಬಂಡಾಯ ಬಣವನ್ನು ಸರ್ಕಾರದಿಂದ ಹೊರಗಿಟ್ಟಿದ್ದಾರೆ.
ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡವರಲ್ಲಿ ಶ್ರೀನಾಥ್(ತೂತುಕುಡಿ), ಕಮಲಿ ಎಸ್.(ಅವಿನಾಶಿ), ಸಿ.ವಿಜಯಲಕ್ಷ್ಮಿ(ಕುಮಾರಪಾಳ್ಯಂ), ಆರ್.ವಿ. ರಂಜಿತ್ಕುಮಾರ್ (ಕಾಂಚಿಪುರಂ), ವಿನೋತ್ (ಕುಂಭಕೋಣಂ), ರಾಜೀವ್ (ತಿರುವಡನೈ), ಬಿ. ರಾಜ್ಕುಮಾರ್ (ಕಡಲೂರು), ವಿ. ಗಾಂಧಿರಾಜ್ (ಅರಕ್ಕೋಣಂ), ಮಥನ್ ರಾಜಾ ಪಿ. (ಒಟ್ಟಪಿಡಾರಂ), ಜೆಗದೇಶ್ವರಿ ಕೆ. (ರಾಜಪಾಳ್ಯಂ), ಮತ್ತು ಎಂ. ವಿಜಯ್ ಬಾಲಾಜಿ(ಈರೋಡ್ ಪೂರ್ವ) ಸೇರಿದ್ದಾರೆ.
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ, ಕಾಂಗ್ರೆಸ್ ಶಾಸಕರಾದ ಎಸ್. ರಾಜೇಶ್ ಕುಮಾರ್(ಕಿಳಿಯೂರು) ಮತ್ತು ಪಿ. ವಿಶ್ವನಾಥನ್(ಮೇಲೂರು) ಕೂಡ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಏತನ್ಮಧ್ಯೆ, ಭಾರತೀಯ ಯೂನಿಯನ್ ಮುಸ್ಲಿಂ ಲೀಗ್ ಸರ್ಕಾರವನ್ನು ಸೇರಲು ಒಪ್ಪಿಕೊಂಡಿದೆ. ಆದರೆ ಸಚಿವ ಸ್ಥಾನಕ್ಕೆ ತನ್ನ ನಾಮನಿರ್ದೇಶಿತರನ್ನು ಇನ್ನೂ ಅಂತಿಮಗೊಳಿಸಿಲ್ಲ. ಇನ್ನು ಸರ್ಕಾರದ ಭಾಗವಾಗಬೇಕೆ ಬೇಡವೇ ಎಂಬುದರ ಕುರಿತು ವಿದುತಲೈ ಚಿರುತೈಗಲ್ ಕಚ್ಚಿ ಇನ್ನೂ ಚರ್ಚಿಸುತ್ತಿದೆ.