ಡೆಹ್ರಾಡೂನ್: ಉತ್ತರಾಖಂಡದ ರುದ್ರಪ್ರಯಾಗದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಬಂಡೆಗಳು ಬಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರಲಾಗಿ ಗಾಯಗೊಂಡಿದ್ದಾರೆ.
ರುದ್ರಪ್ರಯಾಗ್ ಜಿಲ್ಲೆಯ ಸೋನಪ್ರಯಾಗ ಪ್ರದೇಶದ ಹನುಮಾನ್ ಬ್ಯಾರಿಯರ್ ಸಮೀಪ ಶುಕ್ರವಾರ ಬೆಳಿಗ್ಗೆ ಈ ದುರ್ಘಟನೆ ಸಂಭವಿಸಿದ್ದು, ಬೆಟ್ಟದ ಅಂಚಿನ ಭಾಗ ಏಕಾಏಕಿ ತುಂಡಾಗಿದೆ.
ಮೇಲ್ಭಾಗದಿಂದ ಏಕಾಏಕಿ ಬಂಡೆಗಳು ಮತ್ತು ಕಲ್ಲುಗಳು ಜಾರಿಬಿದ್ದ ಪರಿಣಾಮ ಕೆಳಗಿದ್ದವರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಈ ದುರಂತದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
SDRF ಮತ್ತು ಪೊಲೀಸರಿಂದ ರಕ್ಷಣಾ ಕಾರ್ಯಾಚರಣೆ
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ SDRF ಮತ್ತು ಪೊಲೀಸರು ತುರ್ತು ಕಾರ್ಯಾಚರಣೆ ನಡೆಸಿದ್ದು ಈ ವೇಳೆ ಇಬ್ಬರನ್ನು ರಕ್ಷಿಸಿದ್ದಾರೆ. ಆದರೆ ಅವಶೇಷಗಳಡಿ ಸಿಲುಕಿದ್ದ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಸ್ಥಳೀಯ ಪ್ರಜೆ ಎಂದು ಗುರುತಿಸಲಾಗಿದೆ. ಗಾಯಾಳುಗಳು ನೇಪಾಳ ಪ್ರಜೆಗಳು ಎನ್ನಲಾಗಿದೆ.
ಅಂತೆಯೇ ಗಾಯಾಳುಗಳನ್ನು ಚಿಕಿತ್ಸೆಗಾಗಿ MRP ಸೋನಪ್ರಯಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್ ಸಿಂಗ್ ರಜ್ವಾರ್ (Nandan Singh Rajwar) ಮಾಹಿತಿ ನೀಡುತ್ತಾ, “ಸುಮಾರು ಬೆಳಿಗ್ಗೆ 8 ಗಂಟೆಯ ವೇಳೆಗೆ ಬೆಟ್ಟದಿಂದ ಏಕಾಏಕಿ ಮಣ್ಣು ಮತ್ತು ಕಲ್ಲು ಜಾರಿಬಿದ್ದವು. ಅದರಡಿ ಇಬ್ಬರು ಸಿಲುಕಿಕೊಂಡರು. ಅವರಲ್ಲಿ ಒಬ್ಬ ಸ್ಥಳೀಯ ನಿವಾಸಿಯಾಗಿದ್ದು, ಇನ್ನೊಬ್ಬ ನೇಪಾಳಿ ಮೂಲದ ವ್ಯಕ್ತಿಯಾಗಿದ್ದರು. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಸ್ಥಳೀಯ ನಿವಾಸಿಯನ್ನು ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು ಎಂದು ಹೇಳಿದರು.
ಈ ಘಟನೆ ಬಳಿಕ ಸೋನಪ್ರಯಾಗ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಳೆಗಾಲದ ಮುನ್ನವೇ ಬೆಟ್ಟ ಕುಸಿತದ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆ, ಸ್ಥಳೀಯ ಆಡಳಿತ ಅಪಾಯ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಲು ಸೂಚಿಸಿದೆ. ಪೊಲೀಸರು ಮತ್ತು ವಿಪತ್ತು ನಿರ್ವಹಣಾ ತಂಡಗಳು ಪ್ರದೇಶದಲ್ಲಿ ನಿಗಾವಹಿಸಿದ್ದು, ಮುಂದಿನ ಜಾರಿಕೆ ಸಂಭವಿಸುವ ಸಾಧ್ಯತೆ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.