ನವದೆಹಲಿ: ಕೇಂದ್ರ ಸರ್ಕಾರವು ಪಾಕಿಸ್ತಾನ ಮೂಲದ, ಐಎಸ್ಐ ಬೆಂಬಲಿತ ಶಹಜಾದ್ ಭಟ್ಟಿ ನೆಟ್ವರ್ಕ್ ಅನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಯೋತ್ಪಾದನೆ ವಿರುದ್ಧದ ಶೂನ್ಯ ಸಹಿಷ್ಣುತೆ ನೀತಿಯ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಈ ಪ್ರಮುಖ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಯುಎಪಿಎ ಕಾಯ್ದೆಯ ಮೊದಲ ಅನುಸೂಚಿಗೆ ಸೇರ್ಪಡೆಗೊಳ್ಳುವ ಮೂಲಕ ಈ ಸಂಘಟನೆಯು ಭಾರತದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಪಟ್ಟಿಯಲ್ಲಿ 46ನೇ ಸ್ಥಾನ ಪಡೆದಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಶಹಜಾದ್ ಭಟ್ಟಿ ನೆಟ್ವರ್ಕ್?
ಶಹಜಾದ್ ಭಟ್ಟಿ ನೆಟ್ವರ್ಕ್ ಎಂಬುದು ಪಾಕಿಸ್ತಾನ ಮೂಲದ, ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲದೊಂದಿಗೆ ಭಾರತದ ವಿರುದ್ಧ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಒಂದು ಹೈಬ್ರಿಡ್ ಭಯೋತ್ಪಾದಕ ಸಿಂಡಿಕೇಟ್ ಆಗಿದೆ. ಗ್ಯಾಂಗ್ಸ್ಟರ್ನಿಂದ ಉಗ್ರನಾಗಿ ಬದಲಾಗಿರುವ ಶಹಜಾದ್ ಭಟ್ಟಿ ಎಂಬಾತ ಈ ಜಾಲದ ಮುಖ್ಯಸ್ಥನಾಗಿದ್ದು, ಪ್ರಸ್ತುತ ಮೂರನೇ ದೇಶದಿಂದ (ದುಬೈ ಎನ್ನಲಾದ ಜಾಗದಿಂದ ಮೊರಾಕೊ ಪಾಸ್ಪೋರ್ಟ್ ಬಳಸಿ) ಕಾರ್ಯಾಚರಣೆ ನಡೆಸುತ್ತಿದ್ದಾನೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ನಿಷೇಧಕ್ಕೆ ಕಾರಣಗಳೇನು?
ಗಡಿಯಾಚೆಗಿನ ಜಾಲ: ಈ ಸಂಘಟನೆಯು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಭಾರತದೊಳಗೆ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಮಾದಕ ದ್ರವ್ಯಗಳನ್ನು ಅಕ್ರಮವಾಗಿ ಸಾಗಿಸುವ ಜಾಲವನ್ನು ನಡೆಸುತ್ತಿದೆ.
ಯುವಕರ ದಾರಿ ತಪ್ಪಿಸುವುದು: ಆಮಿಷಗಳನ್ನು ಒಡ್ಡುವ ಮೂಲಕ ಭಾರತದ ಮುಗ್ಧ ಯುವಕರನ್ನು ಮತ್ತು ಸಣ್ಣಪುಟ್ಟ ಅಪರಾಧಿಗಳನ್ನು ಆಕರ್ಷಿಸಿ, ಅವರನ್ನು ದೇಶವಿರೋಧಿ ಕೃತ್ಯಗಳಿಗೆ ಬಳಸಿಕೊಳ್ಳುತ್ತಿತ್ತು.
ಕೋಮು ಸೌಹಾರ್ದತೆಗೆ ಧಕ್ಕೆ: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಕೋಮು ಸೌಹಾರ್ದತೆಯನ್ನು ಕೆಡಿಸುವ ಉದ್ದೇಶದಿಂದ ಈ ಸಿಂಡಿಕೇಟ್ ವಿವಿಧ ಡಿಜಿಟಲ್ ಸಂವಹನ ವೇದಿಕೆಗಳ ಮೂಲಕ ಪ್ರಚೋದನಾತ್ಮಕ ಮತ್ತು ದ್ವೇಷಪೂರಿತ ಸಂದೇಶಗಳನ್ನು ಹರಡುತ್ತಿತ್ತು.
ಭಾರತದಲ್ಲಿ ನಡೆಸಿದ ಪ್ರಮುಖ ದಾಳಿಗಳು:
ಪಂಜಾಬ್ನ ಜಲಂಧರ್ನಲ್ಲಿ ನಡೆದ ಗ್ರೆನೇಡ್ ದಾಳಿ.
ಹರಿಯಾಣದ ಅಂಬಾಲಾ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ನಡೆದ ಬಾಂಬ್ ಸ್ಫೋಟ.
ಬಿಎಸ್ಎಫ್ ಪ್ರಧಾನ ಕಚೇರಿಗಳ ಬಳಿ ನಡೆದ ಲಘು ತೀವ್ರತೆಯ ಸ್ಫೋಟಗಳು.
ದೇಶದ ವಿವಿಧೆಡೆ ನಡೆದ ಉದ್ದೇಶಿತ ಕೊಲೆಗಳು ಮತ್ತು ಪೆಟ್ರೋಲ್ ಬಾಂಬ್ ದಾಳಿಗಳು
ಮುಂದುವರೆದು, ಕಳೆದ ಆಗಸ್ಟ್ ತಿಂಗಳಲ್ಲಿ ಭಾರತೀಯ ಭದ್ರತಾ ಏಜೆನ್ಸಿಗಳು ಈ ಜಾಲದ ವಿರುದ್ಧ ದೇಶದ 14 ರಾಜ್ಯಗಳಲ್ಲಿ ಏಕಕಾಲಕ್ಕೆ ಬೃಹತ್ ಕಾರ್ಯಾಚರಣೆ ನಡೆಸಿ 200 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದು, 253 ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದವು. ಇವರಿಂದ ಭಾರಿ ಪ್ರಮಾಣದ ಐಇಡಿ, ಗ್ರೆನೇಡ್ಗಳು ಮತ್ತು ಪಿಸ್ತೂಲ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.