ಮಮತಾ ಬ್ಯಾನರ್ಜಿ-ಋತಬ್ರತಾ ಬ್ಯಾನರ್ಜಿ ANI
ದೇಶ

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

TMC Split: ಪಶ್ಚಿಮ ಬಂಗಾಳದ ವಿಧಾನಸಭೆ ಉಪಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ತೃಣಮೂಲ ಕಾಂಗ್ರೆಸ್ ಪಕ್ಷದ ಎರಡೂ ಬಣಗಳಿಗೆ ಹೊಸ ಮಧ್ಯಂತರ ಹೆಸರು ಮತ್ತು ಗುರುತುಗಳನ್ನು ಮಂಜೂರು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಸೋಲಿನ ನಂತರ ಒಡೆದು ಎರಡು ಹೊಳಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಜೋಡಾ ಘಾಸ್ ಫೂಲ್' (ಹುಲ್ಲು ಮತ್ತು ಎರಡು ಹೂವುಗಳು) ಚಿಹ್ನೆಯನ್ನು ಕೇಂದ್ರ ಚುನಾವಣಾ ಆಯೋಗವು ತಾತ್ಕಾಲಿಕವಾಗಿ ಫ್ರೀಜ್ ಮಾಡಿದೆ. ಇದರ ಬೆನಲ್ಲೇ, ಮುಂಬರುವ ಅಕ್ಟೋಬರ್ 6 ರ ವಿಧಾನಸಭಾ ಉಪಚುನಾವಣೆಗಾಗಿ ಚುನಾವಣಾ ಆಯೋಗವು ಇಂದು ಎರಡೂ ಬಣಗಳಿಗೆ ಹೊಸ ಮಧ್ಯಂತರ ಹೆಸರು ಮತ್ತು ಗುರುತುಗಳನ್ನು ಮಂಜೂರು ಮಾಡಿದೆ. ಆ ಕುರಿತ ವರದಿ ಇಲ್ಲಿದೆ:

ಮಮತಾ ಬಣಕ್ಕೆ ಫುಟ್ಬಾಲ್, ಬಂಡಾಯ ಬಣಕ್ಕೆ ಲಕೋಟೆ

ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (Mamata All India Trinamool Congress) ಎಂದು ಹೆಸರಿಡಲಾಗಿದೆ. ಇದರೊಂದಿಗೆ, ಈ ಬಣಕ್ಕೆ ಆಯೋಗವು ಫುಟ್ಬಾಲ್ ಆಟಗಾರ ಗುರುತನ್ನು ನೀಡಿದೆ. ಅದರಲ್ಲೂ, ಮಮತಾ ಬ್ಯಾನರ್ಜಿ ಅವರ ಬಂಗಾಳದ ಜನಪ್ರಿಯ ಖೇಲಾ ಹೋಬೆ (ಆಟ ಶುರುವಾಗಲಿದೆ) ಎಂಬ ಘೋಷಣೆಗೆ ಪೂರಕವಾಗಿ ಈ ಗುರುತು ಸಿಕ್ಕಿರುವುದು ವಿಶೇಷ.

ಮತ್ತೊಂದೆಡೆ, ದೀದಿ ನೇತೃತ್ವದ ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಅರುಪ್ ರಾಯ್ ಮತ್ತು ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ (Democratic Trinamool Congress) ಎಂಬ ಹೆಸರನ್ನು ನೀಡಲಾಗಿದೆ. ಜೊತೆಗೆ ಈ ಬಂಡಾಯ ಬಣಕ್ಕೆ ಆಯೋಗವು ಲಕೋಟೆ ಗುರುತನ್ನು ಅಧಿಕೃತವಾಗಿ ಹಂಚಿಕೆ ಮಾಡಿದೆ.

ಈ ದಿಢೀರ್ ಬದಲಾವಣೆಗೆ ಕಾರಣವೇನು?

ಕಳೆದ ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನು ಅನುಭವಿಸಿದ ನಂತರ ಪಕ್ಷದಲ್ಲಿ ಆಂತರಿಕ ಕಲಹ ತೀವ್ರಗೊಂಡಿತ್ತು. ಈ ವೇಳೆ, ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಣವು ತಮಗೇ ಬಹುಸಂಖ್ಯಾತ ಶಾಸಕರ ಬೆಂಬಲವಿದೆ ಎಂದು ಹೇಳಿ ಪಕ್ಷದ ಅಧಿಕೃತ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗದ ಮೆಟ್ಟಿಲೇರಿತ್ತು.

ಇದರ ನಡುವೆ, ಅಕ್ಟೋಬರ್ 6, 2026 ರಂದು, ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಈ ವೇಳೆ, ಉಭಯ ಬಣಗಳು ತಾವೇ ನಿಜವಾದ ಟಿಎಂಸಿ ಎಂದು ಹಕ್ಕು ಮಂಡಿಸಿದ್ದರಿಂದ, ಆಯೋಗವು ಸೆಪ್ಟೆಂಬರ್ 17 ರಂದು ಟಿಎಂಸಿಯ ಮೂಲ ಹೆಸರನ್ನು ಹಾಗೂ ಅದರ ಪ್ರಸಿದ್ಧ ಜೋಡಿ ಹೂವು ಮತ್ತು ಹುಲ್ಲು ಗುರುತನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿತ್ತು. ಇದಾದ ನಂತರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಎರಡೂ ಬಣಗಳಿಗೆ ತಲಾ 3 ಹೆಸರು ಮತ್ತು ಗುರುತುಗಳ ಆಯ್ಕೆಯನ್ನು ನೀಡುವಂತೆ ಆಯೋಗ ಸೂಚಿಸಿತ್ತು. ಅದರ ಅನ್ವಯ ಈ ಹೊಸ ತೀರ್ಪನ್ನು ನೀಡಲಾಗಿದ್ದು, ಇವೆರಡೂ ಸದ್ಯಕ್ಕೆ ತಾತ್ಕಾಲಿಕ ಗುರುತುಗಳಾಗಿರಲಿವೆ.

ಒಟ್ಟಾರೆಯಾಗಿ, ಇದೀಗ ಎರಡೂ ಬಣಗಳಿಗೆ ಹೊಸದಾಗಿ ಸಿಕ್ಕಿರುವ ಈ 'ಫುಟ್‌ಬಾಲ್ ಆಟಗಾರ' ಮತ್ತು 'ಲಕೋಟೆ' ಚಿಹ್ನೆಗಳು ಮುಂಬರುವ ನಂದಿಗ್ರಾಮ್ ಮತ್ತು ರೆಜಿನಗರ ಉಪಚುನಾವಣೆಗಳಲ್ಲಿ ಪ್ರಮುಖ ಹಣಾಹಣಿಗೆ ಸಾಕ್ಷಿಯಾಗಲಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video

TMC ಹೆಸರು, ಚಿಹ್ನೆ ಮುಟ್ಟುಗೋಲು: 'Vote chori, govt chori ಆಯ್ತು, ಈಗ ಪಾರ್ಟಿ ಚೋರಿ': ಚುನಾವಣಾ ಆಯೋಗದ ವಿರುದ್ಧ ರಾಹುಲ್ ಗಾಂಧಿ ಕಿಡಿ