ಧರ್ಮಪುರಿ: ಬೆಂಗಳೂರು ಎಕ್ಸ್ಪ್ರೆಸ್ಗೆ ಎಕ್ಸ್ ಪ್ರೆಸ್ ರೈಲಿಗೆ ಬೃಹತ್ ಬಂಡೆಯೊಂದು ಅಪ್ಪಳಿಸಿದ್ದು ಈ ವೇಳೆ ಲೋಕೋ ಪೈಲಟ್ ಗಳ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಹೌದು.. ಭೂಕುಸಿತದಿಂದ ಬೃಹತ್ ಬಂಡೆಯೊಂದು ರೈಲು ಹಳಿಗೆ ಉರುಳಿ, ಚಲಿಸುತ್ತಿದ್ದ ಪ್ರಯಾಣಿಕ ರೈಲಿಗೆ ಬಡಿದ ಘಟನೆ ಭಾನುವಾರ ಬೆಳಗ್ಗೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಮುತ್ತಂಪಟ್ಟಿ ಬಳಿ ನಡೆದಿದೆ. ಲೋಕೋ ಪೈಲಟ್ಗಳ ಸಮಯಪ್ರಜ್ಞೆಯಿಂದ ರೈಲು ಹಳಿ ತಪ್ಪಿ ಸಂಭವಿಸಬಹುದಾಗಿದ್ದ ಭಾರಿ ದುರಂತ ತಪ್ಪಿದೆ.
ಈ ಘಟನೆ ನಾಗರ್ಕೋಯಿಲ್-ಬೆಂಗಳೂರು ಎಕ್ಸ್ಪ್ರೆಸ್ ರೈಲಿಗೆ ಬೃಹತ್ ಬಂಡೆ ಅಪ್ಪಳಿಸಿದ್ದು, ರೈಲು ಮುತ್ತಂಪಟ್ಟಿ ವಿಭಾಗದ ಮೂಲಕ ಸಾಗುತ್ತಿದ್ದ ವೇಳೆ, ಪಕ್ಕದ ಗುಡ್ಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಗುಡ್ಡದ ಮಣ್ಣು, ಕಲ್ಲುಗಳು ಹಾಗೂ ಬಂಡೆಗಳು ರೈಲು ಹಳಿಯತ್ತ ಉರುಳಿ ಬಂದಿವೆ.
ಈ ವೇಳೆ ಬೃಹತ್ ಬಂಡೆಯೊಂದು ಚಲಿಸುತ್ತಿದ್ದ ರೈಲಿಗೆ ಬಡಿದು, ರೈಲಿನ ಬದಿಗೆ ತಾಗಿಕೊಂಡು ಸಾಗಿರುವುದಾಗಿ ತಿಳಿದುಬಂದಿದೆ. ಬಂಡೆ ಹಳಿಗೆ ಬಿದ್ದಿರುವುದನ್ನು ಗಮನಿಸಿದ ಲೋಕೋ ಪೈಲಟ್ಗಳು ಕೂಡಲೇ ಎಚ್ಚೆತ್ತುಕೊಂಡಿದ್ದು, ಸಮಯಪ್ರಜ್ಞೆಯಿಂದ ರೈಲು ಹಳಿ ತಪ್ಪದಂತೆ ನಿಯಂತ್ರಿಸಿದ್ದಾರೆ.
ಘಟನೆಯ ಬಳಿಕ ಪ್ರಾಥಮಿಕ ಪರಿಶೀಲನೆ ನಡೆಸಿದ ಅಧಿಕಾರಿಗಳು ರೈಲನ್ನು ಅತ್ಯಂತ ಎಚ್ಚರಿಕೆಯಿಂದ ಕಡಿಮೆ ವೇಗದಲ್ಲಿ ಧರ್ಮಪುರಿ ರೈಲು ನಿಲ್ದಾಣಕ್ಕೆ ಒಯ್ದಿದ್ದಾರೆ. ಅಲ್ಲಿ ತಾಂತ್ರಿಕ ತಂಡಗಳು ತುರ್ತು ಪರಿಶೀಲನೆ ಹಾಗೂ ದುರಸ್ತಿ ಕಾರ್ಯಗಳನ್ನು ಕೈಗೊಂಡರು.
ರೈಲ್ವೆ ಸುರಕ್ಷತಾ ಅಧಿಕಾರಿಗಳು ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಪ್ರಮಾಣೀಕರಿಸಿದ ಬಳಿಕ, ನಾಗರ್ಕೋಯಿಲ್-ಬೆಂಗಳೂರು ಎಕ್ಸ್ಪ್ರೆಸ್ ತನ್ನ ಬೆಂಗಳೂರು ಪ್ರಯಾಣವನ್ನು ಪುನರಾರಂಭಿಸಿತು.