ರಾಜಕೀಯ

ವಕ್ಫ್ ಸಚಿವರ ಬೆವರಿಳಿಸಿದ ಪ್ರತಿಪಕ್ಷಗಳು, ಸಭಾತ್ಯಾಗ

Rashmi Kasaragodu

ವಿಧಾನ ಪರಿಷತ್ತು: ತಮ್ಮ ಪ್ರಶ್ನೆಗಳಿಗೆ ಉತ್ತರ ನೀಡಿದ ವಕ್ಫ್ ಸಚಿವರನ್ನು ಪ್ರತಿಪಕ್ಷ ಸದಸ್ಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಸಭಾತ್ಯಾಗ ನಡೆಸಿದ ಪ್ರಸಂಗಕ್ಕೆ ಮೇಲ್ಮನೆ ಸಾಕ್ಷಿಯಾಯಿತು. ಬೀದರ್ ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತು ರಘುನಾಥ ರಾವ್ ಮಲ್ಕಾಪುರೆ ಪ್ರಶ್ನೆ ಕೇಳಿದ್ದರು. ಇದಕ್ಕೆ ವಕ್ಫ್ ಸಚಿವ ಖಮರುಲ್ ಇಸ್ಲಾಂ ಉತ್ತರಿಸಬೇಕಿತ್ತು. ಆದರೆ, ಸದ್ಯ ಉತ್ತರ ಲಭ್ಯವಿಲ್ಲ. ನಂತರ ನೀಡಲಾಗುತ್ತದೆ, ಮನೆಗೆ ಕಳುಹಿಸಲಾಗುತ್ತದೆ ಎಂದುಹೇಳಿದರು. ಇದರಿಂದ ಕೆರಳಿದ ಪ್ರತಿಪಕ್ಷ ಸದಸ್ಯರು, ಬೀದರ್ ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ ಒಟ್ಟು ಆಸ್ತಿ ಎಷ್ಟಿದೆ ಎಷ್ಟು ಅತಿಕ್ರಮಣವಾಗಿದೆ ಎಂಬ ಬಗ್ಗೆ ಸಚಿವರ ಬಳಿ ಉತ್ತರವಿಲ್ಲವೇಎಂದು ಪ್ರಶ್ನಿಸಿದರಲ್ಲದೇ, ಉದ್ದೇಶಪೂರ್ವಕವಾಗಿಯೇ  ಉತ್ತರ
ನೀಡದೇ ಮಾಹಿತಿ ಮುಚ್ಚಿಡಲಾಗುತ್ತದೆ ಎಂದು ಆರೋಪಿಸಿದರು. ಈ ಪ್ರಶ್ನೆಯನ್ನು ಕಳೆದ ಅಧಿವೇಶನದಲ್ಲೂ ಕೇಳಲಾಗಿತ್ತು, ಸಚಿವರಿಂದ ಉತ್ತರ ಬರಲಿಲ್ಲ. ಅವರಿಗೆ ಕೆಲಸ ಮಾಡಲು ಸಾಧ್ಯ ವಾಗದೇ ಹೋದರೆ ಮನೆಗೆ ಹೋಗಲಿ ಎಂದು ಮಲ್ಕಾಪುರೆ ಚಾಟಿ ಬೀಸಿದರೆ, ಉತ್ತರವನ್ನು ಮನೆಗೆ ಕಳುಹಿಸಿದರೆ ಸದನಕ್ಕೆ ನಾವೇಕೆ ಬರಬೇಕು ಎಂದು ಬಸವರಾಜ ಹೊರಟ್ಟಿ ಗುಡುಗಿದರು.
ಈ ಹಂತದಲ್ಲಿ ಉತ್ತರ ನೀಡಲು ಪ್ರಯತ್ನಿಸಿದ ಸಚಿವರು, ವಕ್ಫ್ ಆಸ್ತಿ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ. ಈಗ ಉತ್ತರ ನೀಡಿದರೆ ಅದು ತಪ್ಪಾಗುತ್ತದೆ ಎಂದು ಹೇಳಿದರಾದರೂ
ಹೇಳುವ ವಿಧಾನದಲ್ಲಿ ಸಾಕಷ್ಟು ತಡವರಿಸಿದ್ದರಿಂದ ಸದಸ್ಯರು ಮತ್ತಷ್ಟು ರೇಗಿಹೋದರು. ವಕ್ಫ್  ಸ ಚಿವರು ಜಪಾನಿನಿಂದ ಬಂದಿದ್ದಾರೆ, ಹೀಗಾಗಿ ನಮಗೊಬ್ಬ ಭಾಷಾ ಮಧ್ಯಸ್ಥಿಕೆಕಾರರನ್ನು ಕೊಡಿ ಎಂದು ಕೆ.ಎಸ್.ಈಶ್ವರಪ್ಪ ಕಿಚಾಯಿಸಿದರು. ಪ್ರತಿಪಕ್ಷ ನಾಯಕ ಈಶ್ವರಪ್ಪ, ಸದಸ್ಯರಾದ ನಾರಾಯಣಸ್ವಾಮಿ, ಶಾಣಪ್ಪ, ಬಸವರಾಜ್ ಹೊರಟ್ಟಿ, ಮಲ್ಕಾಪುರೆ, ಪಟೇಲ್ ಶಿವರಾಂ ಸೇರಿದಂತೆ ಅನೇಕರು ಒಟ್ಟಾಗಿ ಸಚಿವರ ಮೇಲೆ ದಾಳಿನಡೆಸಿದ್ದರಿಂದ ಅವಕ್ಕಾಗಿ ಕುಳಿತ ಸಚಿವರ ನೆರವಿಗೆ ಡಿಕೆ ಶಿವಕುಮಾರ್ ಬಂದರು. ನೀವೇ ವಕ್ಫ್ ಖಾತೆಯನ್ನೂ ವಹಿಸಿ ಕೊಳ್ಳಿ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಪ್ರತಿಪಕ್ಷ ಸದಸ್ಯರು ಹೇಳಿದಾಗ, ಡಿ.ಕೆ.ಶಿವಕುಮಾರ್ ಕೈಮುಗಿದು ಕುಳಿತುಕೊಂಡರು. ಅಂತಿಮವಾಗಿ ಸಚಿವರು ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ನಡೆಸಿದರು.

SCROLL FOR NEXT