ಬೆಂಗಳೂರು; ವಿಶ್ವಾಸಮತ ಸಾಬೀತುಪಡಿಸಲು ವಿಫಲರಾದ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ಬಿಜೆಪಿ ಶಾಸಕರು ಮತ್ತು ಹಂಗಾಮಿ ಸ್ಪೀಕರ್ ಬೋಪಯ್ಯ ಅವರು ರಾಷ್ಟ್ರಗೀತೆಗೂ ಗೌವರ ನೀಡದೆ ಸದನದಿಂದ ನಿರ್ಗಮಿಸಿದರು.
ಬಿ.ಎಸ್.ಯಡಿಯೂರಪ್ಪ ವಿದಾಯ ಭಾಷಣ ಮುಗಿರಿ ರಾಜ್ಯಪಾಲರನ್ನು ಭೇಟಿ ಮಾಡಲು ಹೊರಡುತ್ತಿದ್ದಂತೆಯೇ ಅವರ ಹಿಂದೆಯೇ ಬಿಜೆಪಿ ಶಾಸಕರು ಜೆಡಿಎಸ್-ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿ ಹೊರ ನಡೆದರು.
ಈ ವೇಳೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ ಕೆ.ಜಿ.ಬೋಪಯ್ಯ ಅವರು ರಾಷ್ಟ್ರಗೀತೆ ಮೊಳಗುವ ಮೊದಲೇ ಪೀಠದಿಂದ ನಿರ್ಗಮಿಸಿದರು. ಎಂ.ಬಿ.ಪಾಟೀಲ್ ಅವರು ಕನಿಷ್ಠ ಪಕ್ಷ ರಾಷ್ಟ್ರಗೀತೆಗಾದರೂ ಗೌರವ ಕೊಡಿ ಎಂದರೂ ಕಿವಿ ಮೇಲೆ ಹಾಕಿಕೊಳ್ಳದ ಶಾಸಕರು ಹೊರ ನಡೆದರು. ರಾಷ್ಟ್ರಗೀತೆ ಮುಗಿಯುವವರೆಗೂ ಬಿಜೆಪಿಯ ಬೆರಳೆಣಿಕೆಯಷ್ಟು ಶಾಸಕರು ಮಾತ್ರವೇ ಸದನದಲ್ಲಿ ನಿಂತಿದ್ದರು.
ರಾಷ್ಟ್ರಗೀತೆ ಮೊಳಗುತ್ತಿರುವಾಗಲೇ ಮಾರ್ಷಲ್ ಗಳು ಬೋಪಯ್ಯ ಅವರನ್ನು ವಾಪಸ್ ಕರೆದುಕೊಂಡು ಬಂದರು. ಪೀಠದ ಹಿಂದೆಯೇ ನಿಂತುಕೊಂಡ ಬೋಪಯ್ಯ ಅವರು, ರಾಷ್ಟ್ರಗೀತೆ ಮುಂದಿನ ನಂತರ ಅಲ್ಲಿಂದ ಹೊರ ನಡೆದರು.
ಹಂಗಾಮಿ ಸ್ಪೀಕರ್ ಹಾಗೂ ಬಿಜೆಪಿ ಶಾಸಕರ ಈ ನಡೆಗೆ ಇದೀಗ ಸಾಕಷ್ಟು ವಿರೋಧಗಳು ವ್ಯಕ್ತವಾಗತೊಡಗಿದ್ದು, ಸದನವನ್ನು ಸಭಾಪತಿಗಳು ಮುಂದೂಡುವ ಘೋಷಣೆ ಮಾಡಿದ ಬಳಿಕ ರಾಷ್ಟ್ರಗೀತೆ ನುಡಿಸಲು ಆರಂಭಿಸಲಾಯಿತು. ಆದರೆ, ಇದಕ್ಕೂ ಮುನ್ನವೇ ಬಿಜೆಪಿ ಶಾಸಕರು ಹಾಗೂ ಹಂಗಾಮಿ ಸ್ಪೀಕರ್ ಸಿ.ಜೆ.ಬೋಪಯ್ಯ ಎದ್ದು ಹೊರಟು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆಂದು ತೀವ್ರವಾಗಿ ಕಿಡಿಕಾರುತ್ತಿದ್ದಾರೆ.