ರಾಜಕೀಯ

ಯಾವುದೂ ಶಾಶ್ವತವಲ್ಲ, ನಾವೇನು ಶಾಶ್ವತವಾಗಿ ಮಂತ್ರಿಗಳಾಗಿ ಇರುವುದಿಲ್ಲ, ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಲಾರೆ: ಸಿ.ಪಿ. ಯೋಗೇಶ್ವರ್

Sumana Upadhyaya

ನಂದಿಬೆಟ್ಟ(ಚಿಕ್ಕಬಳ್ಳಾಪುರ): ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬದಲಾವಣೆ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಜುಲೈ 26ಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿದ್ದು ಅಂದೇ ಬಿಎಸ್ ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ವದಂತಿ ದಟ್ಟವಾಗಿದೆ.

ಈ ಮಧ್ಯೆ ಇಂದು ನಂದಿಬೆಟ್ಟದ ತಪ್ಪಲಿನಲ್ಲಿ ಹೇಳಿಕೆ ನೀಡಿರುವ ಸಚಿವ ಸಿ ಪಿ ಯೋಗೇಶ್ವರ್, ಯಾರಿಗೆ ಯಾವುದೂ ಶಾಶ್ವತವಲ್ಲ, ನಾವು ಕೂಡ ಶಾಶ್ವತವಾಗಿ ಮಂತ್ರಿಗಳಾಗಿ ಇರುವುದಿಲ್ಲ, ಸಾರ್ವಜನಿಕ ಜೀವನದಲ್ಲಿ ಅವಕಾಶಗಳು ಸಿಕ್ಕಿದಾಗ ಬಳಸಿಕೊಂಡು ಹೋಗಬೇಕಷ್ಟೆ. ನಿನ್ನೆ ಸ್ವತಃ ಮುಖ್ಯಮಂತ್ರಿಗಳೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗೆ ನನ್ನದೇನು ಅಭಿಪ್ರಾಯವಿಲ್ಲ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸಲಿದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಹಿರಿಯರಿದ್ದಾರೆ, ಅವರು ನೀಡುವ ಹೇಳಿಕೆಗೆ ಅನುಗುಣವಾಗಿ ತೀರ್ಮಾನ ತೆಗೆದುಕೊಳ್ಳುತ್ತಾರೆ, ಅವರೇ ಸ್ಪಷ್ಟಪಡಿಸುತ್ತಾರೆ, ಈ ಬಗ್ಗೆ ನನಗೇನು ಮಾಹಿತಿಯಿಲ್ಲ, ನಾನೇನು ಹೇಳುವುದಿಲ್ಲ ಎಂದರು.

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಿ ಸಚಿವ ಸಿ ಪಿ ಯೋಗೇಶ್ವರ್ ಸುದ್ದಿಯಾಗಿದ್ದರು. ಇದೀಗ ಪೂರಕ ವಾತಾವರಣ ನಿರ್ಮಾಣವಾಗಿದೆ ಎನಿಸುತ್ತಿದೆಯೇ ಎಂದು ಕೇಳಿದಾಗ ಅಂದು ನನ್ನ ಸಮಸ್ಯೆ ಬಗ್ಗೆ ನಾನು ಹೇಳಿಕೊಂಡಿದ್ದೆ ಅಷ್ಟೆ, ನಾಯಕತ್ವ ಬದಲಾವಣೆ ಬಗ್ಗೆ ನನಗೇನು ಸ್ಪಷ್ಟ ಮಾಹಿತಿಯಿಲ್ಲ, ಮಾಹಿತಿಯಿಲ್ಲದೆ ನಾನು ಏನೂ ಮಾತನಾಡುವುದಿಲ್ಲ ಎಂದರು.

SCROLL FOR NEXT