ರಾಜಕೀಯ

ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿಯವರು ಪದೇಪದೇ ಮಾತನಾಡುವುದು ಯಾರನ್ನು ಮೆಚ್ಚಿಸೋಕೆ: ಸಿಎಂ ಬೊಮ್ಮಾಯಿ ಪ್ರಶ್ನೆ 

Sumana Upadhyaya

ಹಾವೇರಿ: ಹಾನಗಲ್‌ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಅಂದ್ರೆನೆ ಅಭಿವೃದ್ಧಿ. ಬಿಜೆಪಿ ಸರಕಾರದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಇಂದು ಹಾವೇರಿ ಜಿಲ್ಲೆಯ ಹಾನಗಲ್ ಗೆ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನರಿಗೆ ಯಾರ ಕಾಲದಲ್ಲಿ ಅಭಿವೃದ್ಧಿ ಕೆಲಸಗಳು ಆಗಿವೆ ಎಂಬುದು ಗೊತ್ತಿದೆ. ಮತದಾರರು ಖಂಡಿತವಾಗಿ ಬಿಜೆಪಿ ಅಭ್ಯರ್ಥಿ ಸಜ್ಜನರನ್ನ ಗೆಲ್ಲಿಸುತ್ತಾರೆ. ಕಾಂಗ್ರೆಸ್ ನವರು ಸುಳ್ಳುಗಳನ್ನ ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟೀಕಿಸಿದರು.

ಪದೇ ಪದೇ ಆರ್ ಎಸ್ ಎಸ್ ಪರವಾಗಿ ಟೀಕಿಸುವ, ಹೇಳಿಕೆ ನೀಡುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯಾರನ್ನು ಮೆಚ್ಚಿಸಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಗೊತ್ತಿಲ್ಲ. ಅವರ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದದ್ದು. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿಯವರ ಮಧ್ಯೆ ಆರ್ ಎಸ್ ಎಸ್ ಬಗ್ಗೆ ಹೇಳಿಕೆ ನೀಡುವುದರಲ್ಲಿ ಪೈಪೋಟಿಯಿದೆ. ಅಲ್ಪಸಂಖ್ಯಾತರ ಮತಗಳನ್ನು ಓಲೈಸುವ ಸಲುವಾಗಿ ಈ ಪೈಪೋಟಿ ಮಾಡುತ್ತಿದ್ದಾರೆ ಎಂದರು.

ಹಾನಗಲ್ ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಒಂದು ದೂರದೃಷ್ಟಿಯ ದಾಖಲೆಯನ್ನು ಇನ್ನೊಂದು ವಾರದಲ್ಲಿ ಬಿಡುಗಡೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ದಾಖಲೆ ಸಮೇತ ಸಿದ್ದರಾಮಯ್ಯನವರು ಮಾತನಾಡಲಿ ಎಂದು ಹೇಳಿದರು. 

SCROLL FOR NEXT