ರಾಜಕೀಯ

ಚುನಾವಣಾ ಅಖಾಡದಲ್ಲಿ ಭರ್ಜರಿ ಗಿಫ್ಟ್ ಆಮಿಷ; ಮತದಾರರ ಓಲೈಕೆಗೆ ರಾಜಕೀಯ ಮುಖಂಡರ ಕಸರತ್ತು!

Nagaraja AB

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ, ರಾಜಕೀಯ ಪಕ್ಷಗಳ ಮುಖಂಡರು ಡಿನ್ನರ್ ಸೆಟ್, ಪ್ರೆಶರ್ ಕುಕ್ಕರ್, ಡಿಜಿಟಲ್ ಗಡಿಯಾರ ಮತ್ತಿತರ ಭರ್ಜರಿ ಗಿಫ್ಟಿನ ಆಮಿಷವೊಡ್ಡುವ ಮೂಲಕ ಮತದಾರರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ.

ಇನ್ನೂ ಕೆಲ ರಾಜಕಾರಣಿಗಳು ಮತದಾರನ್ನು ಆಂಧ್ರ ಪ್ರದೇಶದ ತಿರುಪತಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ, ಮಹಾರಾಷ್ಟ್ರದ ಶಿರಾಡಿಗೆ ಕರೆದೊಯ್ಯುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಪ್ರಮುಖ ರಾಜಕಾರಣಿಯೊಬ್ಬರು ಭಾವಚಿತ್ರವಿರುವ ಡಿಜಿಟಲ್ ಕ್ಲಾಕ್ ಗಳ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. 

ಬೆಂಗಳೂರಿನ ಕ್ಷೇತ್ರವೊಂದರಲ್ಲಿ ಮತದಾರರಿಗೆ ಡಿನ್ನರ್ ಸೆಟ್ ವಿತರಿಸಲಾಗುತ್ತಿದೆ ಎಂದು ನಿವಾಸಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಡಿನ್ನರ್ ಸೆಟ್ ಸಂಗ್ರಹಿಸಿಕೊಳ್ಳುವಂತೆ ಮಧ್ಯಾಹ್ನ ಕರೆ ಬಂದಿತ್ತು. ಆರಂಭದಲ್ಲಿ ಅದು ಪ್ರಾಂಕ್ ಅಂದುಕೊಂಡಿದ್ದೆ. ಆದರೆ, ಅಲ್ಲಿ ಹೋಗಿ ನೋಡಿದಾಗ ನಿಜವಾಗಿಯೂ ಡಿನ್ನರ್ ಸೆಟ್ ವಿತರಿಸಲಾಗುತಿತ್ತು ಎಂದು ಹೆಸರು ಹೇಳಲು ಇಚ್ಚಿಸದ ಮಹಿಳೆಯೊಬ್ಬರು ತಿಳಿಸಿದ್ದಾರೆ.

ನಗರದ ಮತ್ತೊಂದು ಕ್ಷೇತ್ರದಲ್ಲಿ ಮಾಜಿ ಸಚಿವರೊಬ್ಬರು ಕೆಲ ಮತದಾರರಿಗೆ ಎಲ್ ಐಸಿ ಪ್ರೀಮಿಯಂ ಪಾವತಿಸಿದ್ದಾರೆ ಎನ್ನಲಾಗಿದೆ. ಇತ್ತೀಚಿಗೆ ಟ್ರಕ್ ನಲ್ಲಿದ್ದ ಪ್ರೆಶರ್ ಕುಕ್ಕರ್ ಹಾಗೂ ಅಡುಗೆ ಮನೆ ಬಳಕೆ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. 

ಈ ಘಟನೆಗಳ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಚುನಾವಣಾ ದಿನಾಂಕ ಘೋಷಿಸಿದ ದಿನದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತದೆ ಆದರೆ ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುವ ಮೊದಲೇ ಇಂತಹ ಅಭ್ಯಾಸಗಳನ್ನು ತಡೆಯಲು ಮಾರ್ಗಗಳಿವೆ ಎಂದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಜಾರಿ ಸಂಸ್ಥೆಗಳ ಸಭೆ ಕರೆದು, ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ತಿಳಿಸಿದರು. 

ಮತದಾರರಿಗೆ ಆಮಿಷವೊಡ್ಡುವ ಜನರ ವಿರುದ್ಧ ಕ್ರಮ ಕೈಗೊಳ್ಳಬಹುದು ಹೇಳಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆ ಗೋಡೌನ್‌ಗಳ ಮೇಲೆ ದಾಳಿ ನಡೆಸಿ ಜಿಎಸ್‌ಟಿ ಕಾಯ್ದೆ ಉಲ್ಲಂಘನೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು ಎಂದು ಅವರು ಹೇಳಿದರು. 

ಚಿಕ್ಕಮಗಳೂರು ಮತ್ತು ತುಮಕೂರಿನ ಎರಡು ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಆ ಸರಕುಗಳು ಅನಧಿಕೃತವಾಗಿರುವುದು ಕಂಡುಬಂದಿದೆ. ಅದರಂತೆ ಗೋದಾಮುಗಳ ಮಾಲೀಕರಿಗೆ ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದರು. ಬಿಜೆಪಿ ಆಡಳಿತವಿರುವ ಕರ್ನಾಟಕದಲ್ಲಿ ಮೇ ತಿಂಗಳೊಳಗೆ ವಿಧಾನಸಭೆ ಚುನಾವಣೆ ನಡೆಯಲಿದೆ.

SCROLL FOR NEXT