ರಾಜಕೀಯ

ಸಮುದಾಯಗಳ ಭಾವನೆ ಜೊತೆಗೆ ಆಟವಾಡುವ ಬಿಜೆಪಿಗೆ ಅದರ ನೀಚ ತಂತ್ರಗಳೇ ಮುಳುವಾಗಲಿದೆ: ಜೆಡಿಎಸ್ ಕಿಡಿ

Nagaraja AB

ಬೆಂಗಳೂರು: ಸಮುದಾಯಗಳ ಭಾವನೆ ಜೊತೆಗೆ ಆಟವಾಡುವ ಬಿಜೆಪಿಗೆ ಅದರ ನೀಚ ತಂತ್ರಗಳೇ ಮುಳುವಾಗಲಿದೆ ಎಂದು ಜೆಡಿಎಸ್ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್,  ಸುಳ್ಳಿನ ಬುರುಡೆ ಬಿಡುವುದನ್ನೇ ಕರಗತ ಮಾಡಿರುವ ರಾಜ್ಯ ಬಿಜೆಪಿ  ಸರ್ಕಾರ ಮೀಸಲಾತಿ ಹೆಸರಲ್ಲಿ ಲಿಂಗಾಯತ ಪಂಚಮಸಾಲಿ, ಒಕ್ಕಲಿಗ ಸಮುದಾಯಗಳ ಹಣೆಗೆ ತುಪ್ಪ ಹಚ್ಚಿದ್ದಾಯ್ತು. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಸಂಬಂಧ ಕೇಂದ್ರಕ್ಕೆ ಯಾವುದೇ ಪ್ರಸ್ತಾಪವನ್ನೂ ಕಳಿಸದೇ, ಅವರಿಗೂ ಮೋಸ ಮಾಡುತ್ತಿದೆ ಎಂದು ಆರೋಪಿಸಿದೆ. 

ಈ ಕುರಿತು ಲೋಕಸಭೆಯಲ್ಲಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಕೇಳಿದ ಪ್ರಶ್ನೆಗೆ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ  ಎ.ನಾರಾಯಣಸ್ವಾಮಿ ಲಿಖಿತ ಉತ್ತರ ನೀಡಿದ್ದಾರೆ. ಎಲ್ಲ ಸಮುದಾಯಗಳನ್ನು ಭ್ರಮೆಯಲ್ಲಿ ತೇಲಿಸಬಹುದು ಎಂದು ರಾಜ್ಯ   ಸರ್ಕಾರ ಭಾವಿಸಿದಂತಿದೆ. ಮೀಸಲು ಹೆಚ್ಚಳದ ನಿರ್ಣಯವನ್ನು ಸಂವಿಧಾನದ 9ನೇ ವಿಧಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಕಳಿಸಲು ಇನ್ನೂ ಮೀನ-ಮೇಷ ಎಣಿಸುತ್ತಿರುವುದು ಏಕೆ? ಫೆ. 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತಲ್ಲವೆ? ಎಂದು ಪ್ರಶ್ನಿಸಿದೆ. 

ಮೇಲ್ವರ್ಗದವರಿಗೆ ಕೇಂದ್ರ ಸರಕಾರ ನೀಡಿದ  ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿಯನ್ನು ಕೂಡ ರಾಜ್ಯ ಸರ್ಕಾರ ಜಾರಿಗೊಳಿಸದೆ ಇರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಆರೋಪಿಸಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಮುಂಚೆ ಮೀಸಲಾತಿ ಬಗ್ಗೆ ಸ್ಪಷ್ಟ ಆದೇಶ ನೀಡಬೇಕಾಗಿ ಮನವಿ ಮಾಡಿಕೊಂಡಿದೆ.

SCROLL FOR NEXT