ದಾವಣಗೆರೆ: ಒಡೆದ ಜನಾದೇಶ ರಾಜ್ಯದ ಪ್ರಗತಿಗೆ ನೆರವಾಗುವುದಿಲ್ಲ. ಹೀಗಾಗಿ 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಎಂದು ರಾಜ್ಯದ ಜನತೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದರು.
ದಾವಣಗೆರೆಯ ಹೊರವಲಯದ ಜಿಎಂಐಟಿ ಮೈದಾನದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ 2018ರ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಪ್ರಸ್ತಾಪಿಸಿದರು.
ಈ ವೇಳೆ ಸ್ಪಷ್ಟ ಬಹುಮತ ಬಾರದೆ ಹಿಂದೆ ಏನಾಯಿತು ಎಂಬುದನ್ನು ಸ್ಮರಿಸುವಂತೆ ಪಕ್ಷದ ಕಾರ್ಯಕರ್ತರು ಮತ್ತು ಜನತೆಯನ್ನು ಕೇಳಿದರು. ಅಲ್ಲದೆ, ನಮ್ಮ ಸರ್ಕಾರ ಬಲಿಷ್ಠವಾಗಿದ್ದು, ಉತ್ತಮ ಕರ್ನಾಟಕ್ಕಾಗಿ ಕೆಲಸ ಮಾಡಲಿದೆ. ಬಿಜೆಪಿಗೆ ಬಹುಮತ ನೀಡುವಂತೆ ಮನವಿ ಮಾಡಿಕೊಂಡರು.
ಬಳಿಕ ತಮ್ಮ ಆಡಳಿತದ ಅವಧಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಬೆಂಬಲ ನೀಡದ 2018ರ ಕಾಂಗ್ರೆಸ್-ಜೆಡಿ(ಎಸ್) ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಭಾರತೀಯ ಭಾಷೆಗಳನ್ನು ಅಭಿವೃದ್ಧಿಪಡಿಸಲು ರಾಜಕೀಯ ಪಕ್ಷಗಳು ಸರಿಯಾದ ಬೆಂಬಲ ನೀಡುತ್ತಿಲ್ಲ: ಪ್ರಧಾನಿ ನರೇಂದ್ರ ಮೋದಿ
ಕಿಸಾನ್ ಸಮ್ಮಾನ್ ಯೋಜನೆಯನ್ನು 2019ರಲ್ಲಿ ಆರಂಭಿಸಿದಾಗ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿತ್ತು. ಕಡಿಮೆ ಸಂಖ್ಯೆಯ ರೈತರು ಮಾತ್ರ ಯೋಜನೆ ಲಾಭ ಪಡೆಯುತ್ತಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ, ಈಗ 80 ಲಕ್ಷ ರೈತರಿಗೆ ಯೋಜನೆ ಲಾಭ ಸಿಗುವಂತೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯ ರೈತರಿಗೆ 350 ಕೋಟಿ ರೂ. ತಲುಪಿದೆ. ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರವೂ ಹಣ ಸೇರಿಸಿ, ರೈತರಿಗೆ ನೀಡುತ್ತಿದೆ. ಇದೇ ಡಬಲ್ ಇಂಜಿನ್ ಸರ್ಕಾರದ ಡಬಲ್ ಲಾಭ ಎಂದು ಹೇಳಿದರು.
ಮುಂದಿನ ಮೂರು ತಿಂಗಳ ಕಾಲ ಪಕ್ಷದ ಕಾರ್ಯಕರ್ತರು ಶ್ರಮಿಸಬೇಕು ಮತ್ತು ಬಿಜೆಪಿ ಬಹುಮತದೊಂದಿಗೆ ಸರ್ಕಾರ ರಚಿಸುವುದನ್ನು ಖಚಿತಪಡಿಸಿಕೊಳ್ಳಲು ಮೂಲೆ ಮೂಲೆಗಳಲ್ಲಿರುವ ಜನರನ್ನು ತಲುಪಬೇಕು. ನಾನು ಈ ರಾಜ್ಯದ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ಸೇವೆ ಸಲ್ಲಿಸಬೇಕೆಂದು ನೀವು ಬಯಸಿದರೆ, ನೀವು ಕರ್ನಾಟಕದಲ್ಲಿ ಬಲಿಷ್ಠ ಬಿಜೆಪಿ ಸರ್ಕಾರವನ್ನು ಸ್ಥಾಪಿಸಬೇಕು ಎಂದು ಕರೆ ನೀಡಿದರು.
ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಮತ್ತು ನಮ್ಮ ಕಾರ್ಯಗಳನ್ನು ಶ್ಲಾಘಿಸುತ್ತಿದೆ. ಇದು ನಿಮ್ಮ ಮತದ ಬಲದಿಂದ ಸಾಧ್ಯವಾಗಿದೆ. ಈಗ ನೀವು ನಿಮ್ಮ ಬೂತ್ಗಳಲ್ಲಿರುವ ಪ್ರತಿ ಮನೆಯನ್ನು ಸಂಪರ್ಕಿಸಿ. ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿ. 10 ದಿನಗಳಲ್ಲಿ ನಾನು ಮತ್ತೆ ಕರ್ನಾಟಕಕ್ಕೆ ಬರುತ್ತೇನೆ. ನಿಮ್ಮ ಕೆಲಸಗಳನ್ನು ಪರಿಶೀಲಿಸುತ್ತೇನೆ ಕಾರ್ಯಕರ್ತರಿಗೆ ತಿಳಿಸಿದರು.
ಇದನ್ನೂ ಓದಿ: ದಾವಣಗೆರೆಯಲ್ಲಿ ಮೋದಿ ಘರ್ಜನೆ: ಖರ್ಗೆ, ಸಿದ್ದರಾಮಯ್ಯ, ಕಾಂಗ್ರೆಸ್ ಗ್ಯಾರಂಟಿಗಳ ಗುರಿಯಾಗಿಸಿಕೊಂಡು ವಾಗ್ದಾಳಿ
ಕಳೆದ ಮೂರೂವರೆ ವರ್ಷಗಳಲ್ಲಿ ನಾವು ಉತ್ತಮ ಸರ್ಕಾರವನ್ನು ನೀಡಿದ್ದರಿಂದ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ ಮತ್ತು ಭಾರತವು ಕರ್ನಾಟಕದತ್ತ ನೋಡುತ್ತಿದೆ.
ದೇಶದ ಮೇಲೆ ಸಾಂಕ್ರಾಮಿಕ ರೋಗ ಹೊಡೆತ ನೀಡಿದರೂ ಕೂಡ ಎಫ್ಡಿಐ ಆಕರ್ಷಿಸುವಲ್ಲಿ ಮತ್ತು ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.
ಬಲಿಷ್ಠ ಸರ್ಕಾರವು ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರವನ್ನು ತೊಡೆದುಹಾಕುತ್ತದೆ, ಬಲಿಷ್ಠ ಸರ್ಕಾರದಿಂದ ಉತ್ತಮ ಅಭಿವೃದ್ಧಿ ಸಾಧ್ಯ. ಒಡೆದ ಜನಾದೇಶದಿಂದ ಪ್ರಗತಿಗೆ ದಕ್ಕೆಯಾಗಲಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯನ್ನು ಆಯ್ಕೆ ಮಾಡಿ ಎಂದು ಜನತೆಗೆ ಮನವಿ ಮಾಡಿದರು.
“ಕರ್ನಾಟಕವು ಹಲವು ವರ್ಷಗಳ ಕಾಲ ಅವಕಾಶವಾದಿ ಮತ್ತು ಸ್ವಾರ್ಥಿ ಸರ್ಕಾರಗಳನ್ನು ನೋಡಿದೆ, ಇದು ರಾಜ್ಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ರಾಜ್ಯದ ಅಭಿವೃದ್ಧಿಗೆ ಬಿಜೆಪಿಯ ಸ್ಥಿರ ಸರ್ಕಾರ ಅಗತ್ಯವಿದೆ. ಕಾಂಗ್ರೆಸ್ ‘ಮೋದಿ ತೇರಿ ಕಬರ್ ಖುದೇಗಿ’ ಎಂದು ಹೇಳುತ್ತದೆ. ಆದರೆ. ಕರ್ನಾಟಕದ ಜನರಿಗೆ ‘ಮೋದಿ ತೇರಾ ಕಮಲ್ ಖಿಲೇಗಾ ಎಂಬ ಕನಸು ಇದೆ ಎಂದು ಅವರಿಗೆ ತಿಳಿದಿಲ್ಲ. ಕಮಲವು ಸಮೃದ್ಧಿಯ ಸಂಕೇತವಾಗಿದೆ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವಂತೆ ನಾವು, ಕಾರ್ಯಕರ್ತರು ಪ್ರತಿಜ್ಞೆ ಮಾಡಬೇಕಿದೆ ಎಂದರು.