ಬೆಂಗಳೂರು: ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ನನ್ನ ಮೇಲೆ ಒತ್ತಡವಿದೆ ಎಂದು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಂಸದ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒತ್ತಡದಲ್ಲಿ ನನ್ನ ನಿರ್ಧಾರವನ್ನು ನಾನು ಹಿಂಪಡೆಯಬಹುದೇ ಎಂಬುದು ಸದ್ಯಕ್ಕೆ ನನಗೆ ತಿಳಿದಿಲ್ಲ. ಚುನಾವಣಾ ರಾಜಕೀಯದಿಂದ ದೂರ ಉಳಿಯಲು ಪ್ರಯತ್ನಿಸಿದ್ದೆ. ಯುವ ಮುಖಗಳು ಬರಬೇಕು. ಈಗ ಚುನಾವಣೆಗೆ ಸ್ಪರ್ಧಿಸುವಂತೆ ಕಾಂಗ್ರೆಸ್ನ ಕೆಲವರು ಸೇರಿದಂತೆ ಹಲವರಿಂದ ಒತ್ತಡ ಬರುತ್ತಿದೆ ಎಂದರು.
'ನನ್ನ ಮೇಲೆ ಸಾಕಷ್ಟು ಒತ್ತಡವಿದೆ. ಈ ಹಂತದಲ್ಲಿ, ನಾನು ಒತ್ತಡವನ್ನು ನಿವಾರಿಸಬಹುದೇ ಮತ್ತು ನನ್ನ ಹಿಂದಿನ ನಿರ್ಧಾರಕ್ಕೆ ಅಂಟಿಕೊಳ್ಳಬಹುದೇ ಎಂದು ಈಗಲೇ ನಾನು ಹೇಳಲಾರೆ' ಎಂದು ತಿಳಿಸಿದರು.
ಇದನ್ನೂ ಓದಿ: 'ಚುನಾವಣೆಗೆ ಸ್ಪರ್ಧಿಸುವಂತೆ ತುಂಬಾ ಹಿಂಸೆ ಕೊಡ್ತಿದ್ದಾರೆ': ರಾಜಕೀಯ ನಿವೃತ್ತಿ ವಾಪಸ್ ಕುರಿತು ಸದಾನಂದಗೌಡ ಹೇಳಿಕೆ!
ಪಕ್ಷಾತೀತವಾಗಿ ಹಲವಾರು ಮುಖಂಡರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಉಪಮುಖ್ಯಮಂತ್ರಿಗಳು ತಮ್ಮನ್ನು ಭೇಟಿಯಾಗಿದ್ದಾರೆ. 'ಈ ಹಂತದಲ್ಲಿ ನಾನು ಯಾವುದಕ್ಕೂ ಉತ್ತರಿಸಲು ಸಾಧ್ಯವಿಲ್ಲ. ಪಕ್ಷದ ಹಿತಾಸಕ್ತಿ ಮತ್ತು ಕ್ಷೇತ್ರದ ಹಿತಾಸಕ್ತಿ ಬಂದಾಗ ಪಕ್ಷವೇ ಈ ಬಗ್ಗೆ ನಿರ್ಧರಿಸುತ್ತದೆ' ಎಂದು ಅವರು ಹೇಳಿದರು.