ಡಾ. ಮಂಜುನಾಥ್ ಮತ್ತು ಡಿ.ಕೆ ಸುರೇಶ್ 
ರಾಜಕೀಯ

ಸೇವೆ v/s ಸುಲಿಗೆ: ಕುಟುಂಬಗಳ ರಾಜಕೀಯ ಘರ್ಷಣೆಯಲ್ಲಿ ಮತದಾರನ ಹೃದಯ ಗೆಲ್ತಾರ ವೈದ್ಯರು ?

ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್, ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಬೆಂಗಳೂರು: ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್, ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಣಕ್ಕಿಳಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಸದ್ಯ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ದೇವೇಗೌಡ ಮತ್ತು ಡಿಕೆ ಶಿವಕುಮಾರ್ ಕುಟುಂಬಗಳ ರಾಜಕೀಯ ಘರ್ಷಣೆಗೆ ಬೆಂಗಳೂರು ಗ್ರಾಮಾಂತರ ಲೋಕಸಬಾ ಕ್ಷೇತ್ರ ಸಾಕ್ಷಿಯಾಗಲಿದೆ.

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾಗಿ ಡಾ ಮಂಜುನಾಥ್ ಬಡವರಿಗೆ ಸಹಾಯ ಮಾಡುವ ಸದ್ಭಾವನೆಯು ಚುನಾವಣೆಯಲ್ಲಿ ಪರಿಣಾಮ ಬೀರುವುದೇ ಎಂಬುದು ಸದ್ಯದ ಕುತೂಹಲವಾಗಿದೆ. ಇದದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಸಹಾಯ ಮಾಡಬಹುದು. ವೈದ್ಯರು ಗೆದ್ದರೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಬಹುದು ಎಂಬ ಮಾತುಗಳು ಅವರ ಬೆಂಬಲಿಗರಲ್ಲಿ ಕೇಳಿ ಬರುತ್ತಿವೆ.

ಸುರೇಶ್ ಅವರು ‘ಮಣ್ಣಿನ ಮಗ’ ಕಾರ್ಡ್ ಪ್ಲೇ ಮಾಡಲು ಆರಂಭಿಸಿದ್ದು, ಜೆಡಿಎಸ್ ಕಾರ್ಯಕರ್ತರಿಗೆ ತಮ್ಮೊಂದಿಗೆ ಕೈಜೋಡಿಸುವಂತೆ ಕರೆ ನೀಡಿದ್ದು, ಮಂಜುನಾಥ್ ಅವರನ್ನು ಹೊರಗಿನವರು ಎಂದು ಪರೋಕ್ಷವಾಗಿ ಬಣ್ಣಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ತನ್ನ ಮತ ನೆಲೆಯನ್ನು ಸುಧಾರಿಸಿಕೊಂಡಿದೆ. 2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ 8,78,258 ಮತಗಳನ್ನು ಪಡೆದ ಸುರೇಶ್ ವಿರುದ್ಧ ಅಶ್ವಥ್ ನಾರಾಯಣಗೌಡ 6,71,388 ಮತಗಳನ್ನು ಪಡೆದಿದ್ದರು.

ಸುರೇಶ್ ಅವರ ಬೆಂಬಲಿಗರು ಅವರಿಗೆ ಇದು ಭಾರೀ ಹೊಡೆತ ಎಂದು ಹೇಳಿಕೊಂಡರೂ, ಸಣ್ಣ ಪ್ರಮಾಣದಲ್ಲಿ ಗೆಲುವಿನ ಅಂತರವಿರುತ್ತದೆ ಎಂಬ ಮಾತುಗಳನ್ನು ತಳ್ಳಿ ಹಾಕುವಂತಿಲ್ಲ. ಡಾ. ಮಂಜುನಾಥ್ ದೇವೇಗೌಡರ ಕುಟುಂಬದಿಂದ ಬಂದವರು ಎಂಬುದನ್ನು ಹೊರತುಪಡಿಸಿದರೆ, ಪ್ರತಿಸ್ಪರ್ಧಿಗಳಿಗೆ ಅವರನ್ನು ಟೀಕಿಸಲು ಯಾವುದೇ ಅಸ್ತ್ರಗಳಿಲ್ಲ ಎಂಬುದು ಪ್ಲಸ್ ಪಾಯಿಂಟ್.

ಕನಕಪುರ ಹೊರತುಪಡಿಸಿ ಉಳಿದ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಹೇಳಿದ್ದಾರೆ. ರಾಜರಾಜೇಶ್ವರಿನಗರದ ಬಿಜೆಪಿ ಶಾಸಕ ಮುನಿರತ್ನ ಸೇರಿದಂತೆ ಡಿಕೆ ಸಹೋದರರ ವಿರೋಧಿಗಳು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಣಕ್ಕಿಳಿದಿದ್ದಾರೆ ಎಂದು ಹೇಳಲಾಗಿದೆ.

ಜೆಡಿಎಸ್‌ ಅವರಿಗೆ ಸೂಕ್ತವಲ್ಲ ಎಂಬ ಕಾರಣದಿಂದ ಗೌಡರ ‘ಬುದ್ಧಿವಂತ’ ಅಳಿಯ ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಡಿ.ಕೆ ಸುರೇಶ್ ಮಾತಿಗೆ ಜೆಡಿಎಸ್ ತಿರುಗೇಟು ನೀಡಿದೆ. ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಮಂಜುನಾಥ್ ಬುದ್ದಿವಂತರಿರಬಹುದು. ಡಿ.ಕೆ.ಸುರೇಶ್ ಅವರೇ ನೀವೇನು? ಡಾ.ಸಿ.ಎನ್.ಮಂಜುನಾಥ್ ಅವರೇನು? ಎನ್ನುವುದು ರಾಜ್ಯಕ್ಕಷ್ಟೇ ಅಲ್ಲ, ಇಡೀ ಭಾರತ ದೇಶಕ್ಕೇ ಗೊತ್ತಿದೆ. ಅನಗತ್ಯವಾಗಿ ನಾಲಿಗೆ ಜಾರಿ ಗುಣ ಹಾಳು ಮಾಡಿಕೊಳ್ಳಬೇಡಿ.

ತನಗೆ ಅಥವಾ ಶಿವಕುಮಾರ್‌ಗೆ ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ನಡೆಸುವುದು ಹೊಸದೇನಲ್ಲ ಎಂದು ಸುರೇಶ್ ಹೇಳಿದ್ದಾರೆ. 2013 ರ ಲೋಕಸಭಾ ಉಪಚುನಾವಣೆಯಲ್ಲಿ ಅವರು ಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿದರು. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಗೆದ್ದಿದ್ದರು. ಶಿವಕುಮಾರ್ 1989ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೌಡರನ್ನು ಸೋಲಿಸಿದ್ದರು.2002 ರ ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಗೌಡರು ಶಿವಕುಮಾರ್ ಅವರನ್ನು ಸೋಲಿಸಿದರು ಮತ್ತು 1999 ರಲ್ಲಿ ಜಿ ಪುಟ್ಟಸ್ವಾಮಿಗೌಡ ವಿರುದ್ಧ ಹಾಸನವನ್ನು ಕಳೆದುಕೊಂಡಿದ್ದರು.

ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಪ್ರಯತ್ನದಿಂದ ಮಂಜುನಾಥ್‌ಗೆ ಜೆಡಿಎಸ್ ಮತಗಳು ಪರಿವರ್ತನೆಯಾಗುವ ನಿರೀಕ್ಷೆ ಬಿಜೆಪಿಗಿದೆ. ನಗರ, ಗ್ರಾಮಾಂತರ ಮತ್ತು ಅರೆನಗರ ವಲಯಗಳ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ನಿಭಾಯಿಸಲು ಸುರೇಶ್ ಅವರು ಈಗಾಗಲೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿದ್ದಾರೆ. "ಕಾಕ್‌ಟೇಲ್‌ಗಳೊಂದಿಗೆ ಬಾಡೂಟದ ಪಾರ್ಟಿಗಳನ್ನು ಸಹ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT