ಬೆಂಗಳೂರು: ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕಾಳಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆ ಪಡೆಯುವ ಮಹಾತ್ವಕಾಂಕ್ಷೆಗೆ ಪೆಟ್ಟು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಿದಾಗ ಇನ್ನೂ ಎರಡು ಡಿಸಿಎಂ ಹುದ್ದೆಗಳ ರಚನೆಯ ಬಗ್ಗೆ ಪ್ರಸ್ತಾಪಿಸಲು ತಂತ್ರ ರೂಪಿಸಿದ್ದಾರೆ ಎಂದು ವರದಿಯಾಗಿದೆ.
ಬಿಹಾರ ಚುನಾವಣಾ ಫಲಿತಾಂಶ ಹೊರಬಂದ ನಂತರ ಅಂದರೆ ನವೆಂಬರ್ 14 ರಂದು ಮೂರು ದಿನಗಳು ನವದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಅವರು ಸಂಪುಟ ಪುನರ್ರಚನೆ ಅಂತಿಮಗೊಳಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಹಿಂದ ನಾಯಕನ ಬದಲಿಗೆ, ಲಿಂಗಾಯತ ಮುಖಂಡ ಅಥವಾ ಪಿಡಬ್ಲ್ಯೂಡಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರನ್ನು ಪ್ರಸ್ತಾಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ, ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರಿಗೆ ಆಪ್ತವಾಗಿದ್ದಾರೆ. ನವೆಂಬರ್ 20 ರಂದು ಸರ್ಕಾರಕ್ಕೆ ಎರಡೂವರೆ ವರ್ಷ ತುಂಬವ ಹಿನ್ನೆಲೆಯಲ್ಲಿ ಅಧಿಕಾರ ಹಂಚಿಕೆ ಒಪ್ಪಂದವನ್ನು ನೆನಪಿಸಲು ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಶಿವಕುಮಾರ್ ಒತ್ತಡ ತಂತ್ರಗಳಿಗೆ ಹೈಕಮಾಂಡ್ ಒಪ್ಪಿಕೊಳ್ಳುವ ಸಾಧ್ಯತೆಯಿಲ್ಲಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ, ಸಿದ್ದರಾಮಯ್ಯ ಮತ್ತು ಪಕ್ಷದ ನಾಯಕರು ನಾಯಕತ್ವ ಬದಲಾವಣೆಗೆ ಕರೆ ನೀಡುತ್ತಾರೆ ಹಾಗೂ ಪರಿವರ್ತನೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಮಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, "ಪ್ರಜಾಪ್ರಭುತ್ವದಲ್ಲಿ, ಎಲ್ಲರಿಗೂ ಮುಖ್ಯಮಂತ್ರಿ ಹುದ್ದೆಗೆ ಆಕಾಂಕ್ಷಿಯಾಗುವ ಹಕ್ಕಿದೆ. ಆದಾಗ್ಯೂ, ಅಂತಿಮ ನಿರ್ಧಾರವು ಪಕ್ಷದ ಹೈಕಮಾಂಡ್ಗೆ ಬಿಟ್ಟದ್ದು, ನನ್ನ ಅಧಿಕಾರ ಮುಂದುವರಿಕೆಯೂ ಹೈಕಮಾಂಡ್ನ ಮೇಲೆ ಅವಲಂಬಿತವಾಗಿರುತ್ತದೆ" ಎಂದು ಹೇಳಿದರು.
ನವೆಂಬರ್ನಲ್ಲಿ ಅಧಿಕಾರ ವರ್ಗಾವಣೆ ಆಗದಿದ್ದರೂ, ಅದು ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಸಿಎಂ ಅವರ ಆಪ್ತರು ಭಾವಿಸಿದ್ದಾರೆ. ಏಕೆಂದರೆ ಶಿವಕುಮಾರ್ ಅವರನ್ನು ಯಾವುದೇ ತಂತ್ರಗಾರಿಕೆ ಮೂಲಕ ಎದುರಿಸುವುದು ಅಸಂಭವವಾಗಿದೆ. ಹಾಗೂ ಹೈಕಮಾಂಡ್ ಸ್ವತಃ ಸಿದ್ದರಾಮಯ್ಯ ಅವರನ್ನು ಬದಲಾಯಿಸುವ ಸಾಧ್ಯತೆಯಿಲ್ಲ,
"ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲು ಆಕಾಂಕ್ಷಿಯಾಗುವುದರಲ್ಲಿ ತಪ್ಪಿಲ್ಲ. ಆದರೆ ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಬದಲಾವಣೆಗೆ ಯಾವುದೇ ಕಾರಣ ಕಾಣುತ್ತಿಲ್ಲ" ಎಂದು ಸತೀಶ್ ಜಾರಕಿಹೊಳಿ ಸೋಮವಾರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕೆಂಬ ಆಕಾಂಕ್ಷೆ ಇದೆ, ಆದರೆ ನಾವು ಕಾಯಬೇಕು. ಹೈಕಮಾಂಡ್ ಅದಕ್ಕೆ ಅವಕಾಶ ನೀಡದ ಕಾರಣ 'ನವೆಂಬರ್ ಕ್ರಾಂತಿ' ಇರುವುದಿಲ್ಲ ಎಂದಿದ್ದಾರೆ.
ಶಿವಕುಮಾರ್ ಅವರು ಹೈಕಮಾಂಡ್ ಬಳಿ ಸಿಎಂ ಹುದ್ದೆ ಪಡೆಯಲು ಮೇಲುಗೈ ಸಾಧಿಸಿದರೆ, ಸಿದ್ದರಾಮಯ್ಯ ಅವರು 'ದಲಿತ ಸಿಎಂ' ಕಾರ್ಡ್ ಪ್ಲೇ ಮಾಡಲು ಯೋಜಿಸಿದ್ದಾರೆ, ಸತೀಶ್ ಜಾರಕಿಹೊಳಿ, ಡಾ. ಜಿ. ಪರಮೇಶ್ವರ ಮತ್ತು ಡಾ. ಎಚ್.ಸಿ. ಮಹದೇವಪ್ಪ ಅವರು ಈ ಹುದ್ದೆಗೆ ಹಕ್ಕು ಮಂಡಿಸುವ ಲಕ್ಷಣಗಳು ಕಂಡುಬರುತ್ತಿವೆ. ದಲಿತ ಮುಖ್ಯಮಂತ್ರಿ ವಿಷಯ ಬಂದರೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಕೂಡ ಕಣಕ್ಕೆ ಇಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಭಾನುವಾರ ದೆಹಲಿಯಲ್ಲಿದ್ದ ಶಿವಕುಮಾರ್, ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರ ಅಪ್ತೆ ಮತ್ತು ಹಿರಿಯ ನಾಯಕಿ ಅಂಬಿಕಾ ಸೋನಿ ಅವರನ್ನು ಸೋಮವಾರ ಭೇಟಿಯಾಗಿದ್ದರು, ಅಂಬಿಕಾ ಸೋನಿ ಪತಿ ಉದಯ್ ಸೋನಿ ಕಳೆದ ವಾರ ನಿಧನರಾದ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದರು. ಬಿಹಾರ ಚುನಾವಣೆ ಮುಗಿದ ನವೆಂಬರ್ 11 ರಂದು ಮತ್ತು ನವೆಂಬರ್ 14 ರಂದು ಸಿದ್ದರಾಮಯ್ಯ ಭೇಟಿಗೂ ಮುನ್ನ ರಾಹುಲ್ ಗಾಂಧಿಯವರ ಭೇಟಿಗೆ ಅವರು ಅವಕಾಶ ಕೋರಿದ್ದಾರೆ ಎಂದು ವರದಿಯಾಗಿದೆ.
ಸಂಪುಟ ಪುನರ್ರಚನೆ ಕುರಿತು ಮಾತನಾಡಿದ ಪರಮೇಶ್ವರ, ಈ ವಿಷಯ ಹೈಕಮಾಂಡ್ ಮುಂದಿದ್ದು, ಕಾದು ನೋಡುವ ಪರಿಸ್ಥಿತಿ ಎಂದು ಹೇಳಿದರು. "ಇಲ್ಲಿಯವರೆಗೆ ಹೈಕಮಾಂಡ್ನಿಂದ ಯಾವುದೇ ಸಂದೇಶ ಬಂದಿಲ್ಲ. ಮಾಧ್ಯಮಗಳು ವರದಿ ಮಾಡಿರುವುದಷ್ಟೇ, ಸಂಪುಟ ಪುನರ್ರಚನೆ ಅಥವಾ ಸಿಎಂ ಬದಲಾವಣೆಯ ಬಗ್ಗೆ ಯಾವುದೇ ನಿರ್ದಿಷ್ಟ ಮಾಹಿತಿ ಇಲ್ಲ" ಎಂದು ಅವರು ಹೇಳಿದರು.
ಸರ್ಕಾರವು 2.5 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಿಎಂ ಬದಲಾವಣೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಪರಮೇಶ್ವರ ಹೇಳಿದರು. "ಪ್ರತಿದಿನ ಇಂತಹ ಹೇಳಿಕೆಗಳು ಮತ್ತು ಗೊಂದಲಗಳು ಬರುತ್ತಿದ್ದರೆ, ಅದು ಆಡಳಿತದ ಮೇಲೆ ಪರಿಣಾಮ ಬೀರುವುದಿಲ್ಲವೇ? ಆಡಳಿತವು ಉತ್ತಮವಾಗಿರಬೇಕಾದರೇ, ಅಂತಹ ಹೇಳಿಕೆಗಳು ನಿಲ್ಲಬೇಕು. ಪ್ರವಾಹ ಉಂಟಾಗಿದೆ, ರಸ್ತೆಗಳು ಹಾನಿಗೊಳಗಾಗಿವೆ, ನಾವು ಇದರ ಬಗ್ಗೆ ಗಮನಹರಿಸಬೇಕು" ಎಂದು ಅವರು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಬೇಡಿಕೆಯ ಕುರಿತು ಮಾತನಾಡಿದ ಪರಮೇಶ್ವರ, ಮುನಿಯಪ್ಪ ಅವರು ಅವಧಿಗೆ ಸಂಸದರಾಗಿದ್ದಾರೆ ಮತ್ತು ಅವರು ಸಮರ್ಥರಾಗಿದ್ದಾರೆ ಎಂದು ಹೇಳಿದರು. "ಅವರು ಮುಖ್ಯಮಂತ್ರಿಯಾದರೆ, ನಾನು ಹೆಚ್ಚು ಸಂತೋಷಪಡುತ್ತೇನೆ" ಎಂದು ಅವರು ಹೇಳಿದರು. ಒಟ್ಟಾರೆ ಅಧಿಕಾರ ಬಿಟ್ಟುಕೊಡಲು ಮನಸ್ಸಿಲ್ಲದ ಸಿದ್ದರಾಮಯ್ಯ ದಲಿತ ಸಿಎಂ ಕಾರ್ಡ್ ಪ್ಲೇ ಮಾಡುವ ಮೂಲಕ ಹಿರಿಯ ದಲಿತ ನಾಯಕರೊಬ್ಬರಿಗೆ ಪಟ್ಟ ಕಟ್ಟಲು ಚಿಂತಿಸುತ್ತಿದ್ದಾರೆ.