ಬೆಂಗಳೂರು: ಪ್ರಮುಖ ಜನಪರ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ನಾಯಕರು 'ಮುಸ್ಲಿಂ' ಮತ್ತು 'ಪಾಕಿಸ್ತಾನ' ಎಂಬ ಪದಗಳನ್ನು ರಾಜಕೀಯ ಅಸ್ತ್ರವಾಗಿ ಪದೇ ಪದೇ ಬಳಸುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಈ ಧೋರಣೆಯನ್ನು ಕೇವಲ ರಾಜಕೀಯ ಸ್ಟಂಟ್ ಎಂದು ಕರೆದಿದ್ದಾರೆ.
ರಾಜ್ಯ ಸರ್ಕಾರವು ಪ್ರಸ್ತುತ ಮುಸ್ಲಿಮರು, ರೈತರು, ಕನ್ನಡ ಕಾರ್ಯಕರ್ತರು ಸೇರಿದಂತೆ ಸಮಾಜದ ವಿವಿಧ ವರ್ಗಗಳಿಗೆ ಸಂಬಂಧಿಸಿದ ಸುಮಾರು 50 ರಿಂದ 60 ಪ್ರಮುಖ ಪ್ರಕರಣಗಳನ್ನು ನಿರ್ವಹಿಸುತ್ತಿದೆ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುತ್ತಿದೆ. ಆದರೆ, ಬಿಜೆಪಿ ನಾಯಕರಿಗೆ ಕೇವಲ 'ಮುಸ್ಲಿಂ' ಮತ್ತು 'ಪಾಕಿಸ್ತಾನ' ಎಂಬ ಹೆಸರುಗಳನ್ನು ಉಲ್ಲೇಖಿಸಿ ಜನರ ಭಾವನೆಗಳನ್ನು ಕೆರಳಿಸುವುದಷ್ಟೇ ಗೊತ್ತು ಎಂದು ಕಿಡಿಕಾರಿದರು.
ಈ ರೀತಿಯ ಪದಗಳನ್ನು ಬಳಸುವುದರಿಂದ ಮಾತ್ರ ಸಾರ್ವಜನಿಕರ ಗಮನವನ್ನು ತಮ್ಮತ್ತ ಸೆಳೆಯಬಹುದು ಎಂಬ ಭ್ರಮೆಯಲ್ಲಿ ಬಿಜೆಪಿ ನಾಯಕರಿದ್ದಾರೆ. ಇದು ಜನರ ದಾರಿ ತಪ್ಪಿಸುವ ಮತ್ತು ರಾಜಕೀಯ ಲಾಭ ಪಡೆಯುವ ಬಿಜೆಪಿಯ ತಂತ್ರಗಾರಿಕೆಯಾಗಿದೆ ಎಂದು ಟೀಕಿಸಿದ್ದಾರೆ.