ಮಗಳ ಸಾವಿನ ಸುದ್ದಿ ತಿಳಿದೂ ಕರ್ತವ್ಯಪ್ರಜ್ಞೆ ಮೆರೆದ ಪೋಲೀಸ್ ಅಧಿಕಾರಿ
ಮೀರತ್(ಉತ್ತರ ಪ್ರದೇಶ): ತನ್ನ ಮಗಳೇ ಮೃತಪಟ್ಟಿದ್ದಾಳೆ ಎಂದು ತಿಳಿದರೂ ಪೋಲೀಸ್ ಅಧಿಕಾರಿಯೊಬ್ಬರು ಸಾಯುವ ಸ್ಥಿತಿಯಲ್ಲಿದ್ದ ಅಪರಿಚಿತನನ್ನು ರಕ್ಷಿಸಿ ಕತ್ಯವ್ಯ ಪ್ರಜ್ಞೆ ಮೆರೆದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಸಹರಾನ್ ಪುರದಲ್ಲಿನ ಪೋಲೀಸ್ ಠಾಣೆ ಮುಖ್ಯ ಪೇದೆ ಭೂಪೇಂದ್ರ ತೊಮರ್ ಈ ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾಗಿದ್ದಾರೆ.
ಫೆ.23ರ ರಾತ್ರಿ ಒಂಭತ್ತರ ಸುಮಾರಿಗೆ ಭೂಪೇಂದ್ರ ಅವರು ಎಂದಿನಂತೆ ತುರ್ತು ಸ್ಪಂದನ ವಾಹನದಲ್ಲಿ ಗಸ್ತು ತಿರುಗುತ್ತಿದ್ದರು. ಹಾಗೆ ಗಸ್ತು ತಿರುಗುತ್ತಿದ್ದಾಗ ಬಡ್ಲಾಂವ್ ಎನ್ನುವಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆಗೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾನೆ ಎನ್ನುವ ಸುದ್ದಿ ದೊರೆಯುತ್ತದೆ. ಅದಾದ ಕೆಲ ಕ್ಷಣಗಲಲ್ಲಿ ಅವರ ಮೊಬೈಲ್ ಗೆ ಕರೆ ಮಾಡಿದ್ದ ವ್ಯಕ್ತಿಯೊಬ್ಬರು ಭೂಪೇಂದ್ರ ಅವರ ಇಪ್ಪತ್ತೇಳು ವರ್ಷದ ಮಗಳು ಆಕಸ್ಮಿಕವಾಗಿ ಸಾವಿಗೀಡಾಗಿದ್ದಾಳೆ ಎಂದು ತಿಳಿಸುತ್ತಾರೆ.
ಈ ಸುದ್ದಿ ತಿಳಿದು ಕ್ಷಣ ಕಾಲ ಕಂಗಾಲಾದ ಭೂಪೇಂದ್ರ ತಾವು ತಕ್ಷಣ ಸಾವರಿಸಿಕೊಂಡು ತಾನು ಕರ್ತವ್ಯದ ಮೇಲಿದ್ದೇನೆ ಎನ್ನುವುದು ಸ್ಮರಿಸಿಕೊಳ್ಳುತ್ಟಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತನನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಾರೆ. ಆವೇಳೆಗ ಅವರ ಸಹೋದ್ಯೋಗಿಗಳು ಮಗಳ ಸಾವಿನಿಂದ ನೊಂದ ಪೇದೆಗೆ ಮನೆಗೆ ತೆರಳುವಂತೆ ಸೂಚಿಸಿದ್ದರು. ಆದರೆ ಭೂಪೇಂದ್ರ ತಾನು ಆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ನಂತರವೇ ಮನೆಗೆ ತೆರಳಿ ಮಗಳನ್ನು ಕಾಣುವುದಾಗಿ ಹೇಳುತ್ತಾರೆ.
ಹಾಗೆ ಹೇಳಿದ ಬಳಿಕ ಭೂಪೇಂದ್ರ ತಾವು ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಮರಳಿದ್ದು ಹಾಗೆ ಪೋಲೀಸ್ ಪೇದೆಯೊಬ್ಬರ ಕರ್ತವ್ಯ .ಪ್ರಜ್ಞೆ ಪಶುವೈದ್ಯರಾಗಿದ್ದ ವ್ಯಕ್ತಿಯ ಪ್ರಾಣ ರಕ್ಷಣೆ ಮಾಡಿದೆ.
"ಸತ್ತವರನ್ನು ಬಿಡಿ, ಏನೂ ಮಾಡಲಾಗುವುದಿಲ್ಲ, ಬದುಕುಳಿದವರನ್ನು ರಕ್ಷಿಸಬೇಕು, ಇದು ನನ್ನ ದ್ಯೇಯ. ನಾನೇನೂ ವಿಶೇಷ ಕಾರ್ಯ ಮಾಡಿದ್ದೇನೆನ್ ಎನ್ನುವ ಭಾವನೆ ನನಗಿಲ್ಲ" ಭೂಪೇಂದ್ರ ಹೇಳಿದ್ದಾರೆ.
ಭೂಪೇಂದ್ರ ಅವರ ಮಗಳು ಜ್ಯೋತಿ ಬಕ್ಸಾರ್ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಕೆಗೆ ಕಳೆದ ವರ್ಷವಷ್ಟೇ ವಿವಾಹ ಆಗಿತ್ತು. ಫೆ.23ರ ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಜ್ಯೋತಿ ಅಲ್ಲಿಯೇ ಪ್ರಜ್ಞಾಶೂನ್ಯಳಾಗಿ ಬಿದ್ದಿದ್ದು ಸಾವನ್ನಪ್ಪಿದ್ದಳು. ಮಗಳ ಸಾವಿನ ಕಾರಣ ಮನೆ ಮಂದಿಯೆಲ್ಲಾ ದುಃಖದ ಮಡುವಿನಲ್ಲಿ ಮುಳುಗಿದ್ದರೂ ಭೂಪೇಂದ್ರ ಮಾತ್ರ ಕರ್ತವ್ಯ ನಿಷ್ಠೆ ಮೆರೆದು ಓರ್ವ ವ್ಯಕ್ತಿಯ ಜೀವ ಕಾಪಾಡಿರುವುದು ಉತ್ತರ ಪ್ರದೇಶ ಪೋಲೀಸ್ ಇಲಾಖೆ ಹೆಮ್ಮೆ ಪಡುವಂತೆ ಮಾಡಿದೆ.
ಪೋಲೀಸ್ ಇಲಾಖೆಯ ಹಲವು ಅಧಿಕಾರಿಗಳು ಭೂಪೇಂದ್ರ ಅವರನ್ನು ಪ್ರಶಂಸಿಸಿದ್ದಾರೆ, ಪೋಲೀಸ್ ಮಹಾ ನಿರ್ದೇಶಕರಾದ ಒಪಿ ಸಿಂಗ್ ಭೂಪೇಂದ್ರ ಅವರ ನೊಂದ ಕುಟುಂಬಕ್ಕೆ ಸಕಲ ನೆರವು ನೀಡುವುದಾಗಿ ಭರವಸೆ ಇತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos