ಬೆಂಗಳೂರು: ಭಾರತೀಯ ಅಂಚೆ ಇಲಾಖೆ ಕನ್ನಡದ ಖ್ಯಾತ ಸಾಹಿತಿ-ಚಿಂತಕ ಕೆ ವಿ ಪುಟ್ಟಪ್ಪ ಅವರ ಸ್ಮಾರಕ ಅಂಚೆ ಚೀಟಿ ಬಿಡುಗಡೆ ಮಾಡಿದೆ. ಖ್ಯಾತ ಲೇಖಕರ ಈ ಸರಣಿಯಲ್ಲಿ ಕುವೆಂಪು ಅವರನ್ನು ಸೇರಿದಂತೆ ಒಟ್ಟು ಐವರು ಲೇಖಕರ ಅಂಚೆ ಚೀಟಿಗಳು ಬಿಡುಗಡೆಯಾಗಿರುವದು ವಿಶೇಷ.
ಹಿಂದಿ ಲೇಖಕ-ನಾಟಕಕಾರ 'ತಮಸ್' ಖ್ಯಾತಿಯ ಭೀಷ್ಮ ಸಹನಿ, ಪಂಜಾಬಿ ನಾಟಕಕಾರ ಬಲವಂತ್ ಗಾರ್ಗಿ, ಹಿಂದಿ ಲೇಖಕ ಶ್ರೀಲಾಲ್ ಶುಕ್ಲ, ಉರ್ದು-ಹಿಂದಿ ಬರಹಗಾರ ಕೃಶನ್ ಚಂದರ್ ಅವರ ಸ್ಮಾರಕ ಅಂಚೆ ಚೀಟಿಗಳು ಕೂಡ ಈಗ ಲಭ್ಯವಿವೆ.
೧೯, ನವೆಂಬರ್ ೧೯೦೪ರಲ್ಲಿ ಜನಿಸಿದ್ದ ಕುವೆಂಪು ಕರ್ನಾಟಕದ ಮನೆಮಾತು. ಕುವೆಂಪು ಅವರ ಶ್ರೀರಾಮಾಯಣದರ್ಶನಂ ಮಹಾಕಾವ್ಯ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿತ್ತು. ಕಾನೂರು ಹೆಗ್ಗಡತಿ ಮತ್ತು ಮಲೆಗಳಲ್ಲಿ ಮದುಮಗಳು ಮಹಾ ಕಾದಂಬರಿಗಳು ಕುವೆಂಪುರವರ ಸುಪ್ರಸಿದ್ಧ ಕೃತಿಗಳು. ಕಾನೂರು ಹೆಗ್ಗಡತಿ ಸಿನೆಮಾವಾಗಿ ಕೂಡ ಮೂಡಿಬಂದಿರುವುದು ವಿಶೇಷ. ಕುವೆಂಪು ಅವರ ಕಾವ್ಯ ಮತ್ತು ನಾಟಕಗಳು ಕೂಡ ಕನ್ನಡಿಗರಿಗೆ ಚಿರಪರಿಚಿತ. ಕುವೆಂಪು ವಿರಚಿತ 'ಜೈ ಭಾರತ ಜನನಿಯ ತನುಜಾತೆ' ಕರ್ನಾಟಕದ ನಾಡಗೀತೆಯಾಗಿ ಕೂಡ ಕನ್ನಡಿಗರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದೆ. ಹಲವು ವೈಚಾರಿಕ ಲೇಖಕನಗಳನ್ನು ಬರೆದಿರುವ ಕುವೆಂಪು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಅಕಾಡಮಿ, ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೂ ಕುವೆಂಪು ಭಾಜನರಾಗಿದ್ದಾರೆ.
ಭೀಷ್ಮ ಸಹನಿ ಅವರಿಂದ ರಚಿತವಾದ 'ಸಂತೆಯಲ್ಲಿ ನಿಂತ ಕಬೀರ' ಇತ್ತೀಚಿಗೆ ಶಿವರಾಜ್ ಕುಮಾರ್ ಅಭಿನಯದಲ್ಲಿ ಸಿನೆಮಾವಾಗಿ ಮೂಡಿ ಬಂದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos