ಕಠ್ಮಂಡು: ಭಾರತದ ನೆರೆರಾಷ್ಟ್ರ ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ವಿನಾಶಕಾರಿ ಪ್ರವಾಹದಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಇದುವರೆಗೆ 626 ಶವಗಳನ್ನು ಪತ್ತೆಹಚ್ಚಲಾಗಿದೆ ಮತ್ತು ದುರಂತದ ನಂತರ ಸುಮಾರು 2,000 ಜನ ಇನ್ನೂ ಕಾಣೆಯಾಗಿದ್ದಾರೆ.
ಹಿಮಾಲಯ ರಾಷ್ಟ್ರದ ಎಂಟು ಜಿಲ್ಲೆಗಳಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಅಪಾಯ ಕಡಿತ ಹಾಗೂ ನಿರ್ವಹಣಾ ಪ್ರಾಧಿಕಾರ(ಎನ್ಡಿಆರ್ಆರ್ಎಂಎ) ಶನಿವಾರ ತಿಳಿಸಿದೆ.
ಎನ್ಡಿಆರ್ಆರ್ಎಂಎ ಪ್ರಕಾರ, ಚಿತ್ವಾನ್ನಿಂದ 233, ನವಲ್ಪರಾಸಿ ಪೂರ್ವದಿಂದ 158, ನುವಕೋಟ್ನಿಂದ 51, ಗೂರ್ಖಾದಿಂದ 48, ನವಲ್ಪರಾಸಿ ಪಶ್ಚಿಮದಿಂದ 47, ಧಾಡಿಂಗ್ನಿಂದ 45, ತನಾಹುದಿಂದ 31 ಮತ್ತು ರಸುವಾದಿಂದ 13 ಶವಗಳನ್ನು ಹೊರತೆಗೆಯಲಾಗಿದೆ.
ಹಿಮನದಿ ಕುಸಿದು ಲ್ಹೆಂಡೆ ಖೋಲಾ ನದಿಗೆ ಭಾರಿ ಪ್ರಮಾಣದ ಮಂಜುಗಡ್ಡೆ, ಬಂಡೆಗಳು ಹರಿದು ಬಂದು ಭೋಟೆ ಕೋಶಿ ನದಿಗೆ ನೀರು ನುಗ್ಗಿದೆ. ಪರಿಣಾಮ ರಸುವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಹಾನಿಯನ್ನುಂಟು ಮಾಡಿದೆ. ಈವರೆಗೂ ದುರಂತದಲ್ಲಿ 626 ಮಂದಿ ಸಾವನ್ನಪ್ಪಿದ್ದಾರೆ ಎಂದು ನೇಪಾಳ ಪೊಲೀಸರು ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡಗಳು, ಪ್ರವಾಹದಲ್ಲಿ ಸಿಲುಕಿದ್ದ ಸುಮಾರು 2,500 ಜನರನ್ನು ಸ್ಥಳಾಂತರಿಸಿದ್ದು, ಇಂದು ನಾಲ್ಕನೇ ದಿನವೂ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
ಪ್ರವಾಹದ ಸ್ಥಳದಲ್ಲಿ ಶುಕ್ರವಾರ ಹಠಾತ್ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಆ ಪ್ರದೇಶದಲ್ಲಿ ಮತ್ತೊಂದು ಪ್ರವಾಹದ ಅಪಾಯವನ್ನು ಹೆಚ್ಚಿಸಿದೆ ಎಂದು NDRRMA ತಿಳಿಸಿದೆ.
ಇನ್ನೂ ಇದೇ ಪ್ರವಾಹದಿಂದಾಗಿ ಚೀನಾದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಇದಲ್ಲದೇ ಟಿಬೆಟ್ ಹಾಗೂ ನೇಪಾಳದಲ್ಲಿ ಸುಮಾರು 2,500ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ.