ಬೆಂಗಳೂರು: ಸದಾ ಕಾಲ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಸ್ಯಾಂಡಲ್ ವುಡ್ ಇದೀಗ ಮತ್ತೊಂದು ವಿವಾದದ ಮೂಲಕ ಸುದ್ದಿಯಾಗುತ್ತಿದ್ದು, "ಸೂಪರ್ ಸ್ಟಾರ್"ಗಾಗಿ ನಾಯಕ ನಟರಿಬ್ಬರ ಅಭಿಮಾನಿಗಳ ಪರಸ್ಪರ ಹಗ್ಗ-ಜಗ್ಗಾಟಕ್ಕಿಳಿದಿದ್ದಾರೆ.
ಈ ವಿವಾದಕ್ಕೆ ಕಾರಣವಾಗಿದ್ದು, ದುನಿಯಾ ವಿಜಿ ಅಭಿನಯದ ಮಾಸ್ತಿಗುಡಿ ಚಿತ್ರದ ಟ್ರೈಲರ್... ಕಳ ನಟರಾದ ಉದಯ್ ಮತ್ತು ಅನಿಲ್ ಅವರ ಸಾವಿನಿಂದಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮಾಸ್ತಿಗುಡಿ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಆದರೀಗ ಈ ಚಿತ್ರ ಟ್ರೈಲರ್ ನಟ ಉಪೇಂದ್ರ ಅವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣವೇನು ಎಂದು ಕೆದಕಿದಾಗ ಟ್ರೈಲರ್ ನಲ್ಲಿ ನಡ ದುನಿಯಾ ವಿಜಯ್ ಗೆ "ಸ್ಯಾಂಡಲ್ ವುಡ್ ಸೂಪರ್ ಸ್ಟಾರ್" ಎಂಬ ಟ್ಯಾಗ್ ಹಾಕಿರುವುದೇ ಉಪ್ಪಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್ ಎಂಬ ಟ್ಯಾಗ್ ನಟ ಉಪೇಂದ್ರ ಅವರಿಗಿದ್ದು, ಅದನ್ನು ಕಾನೂನು ಬಾಹಿರವಾಗಿ ದುನಿಯಾ ವಿಜಯ್ ಅವರಿಗೆ ನೀಡಲಾಗಿದೆ ಎಂದು ನಟ ಉಪೇಂದ್ರ ಅವರ ಅಭಿಮಾನಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಬಗ್ಗೆ ವಾಣಿಜ್ಯ ಮಂಡಳಿಗೆ ದೂರು ಕೂಡ ನೀಡಿರುವ ಅಭಿಮಾನಿಗಳು, ಮಾಸ್ತಿಗುಡಿ ಚಿತ್ರದ ಟ್ರೈಲರ್ ನಿಂದ ಆ ಟ್ಯಾಗ್ ಅನ್ನು ತೆಗೆಯುವಂತೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಅವರು, ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ ಎಂಬ ಬಿರುದು ನಾವು ನೀಡಿದ್ದಲ್ಲ. ಅದು ಅಭಿಮಾನಿಗಳು ವಿಜಯ್ ಅವರಿಗೆ ನೀಡಿದ್ದು. ಹೀಗಾಗಿ ಆ ಬಿರುದನ್ನು ಟ್ರೈಲರ್ ನಲ್ಲಿ ಬಳಸಿಕೊಳ್ಳಲಾಗಿದೆ. ಇದರಲ್ಲಿ ನನ್ನ ಪಾತ್ರವಾಗಲಿ ಅಥವಾ ಚಿತ್ರದ ನಿರ್ದೇಶಕ ನಾಗಶೇಖರ್ ಅವರ ಪಾತ್ರವಾಗಲಿ ಇಲ್ಲ. ಅಭಿಮಾನಿಗಳ ಕೋರಿಕೆಯಂತೆ ಟ್ಯಾಗ್ ನೀಡಲಾಗಿದೆ ಅಷ್ಟೇ. ನಟ ಉಪೇಂದ್ರ ಅವರ ಅಭಿಮಾನಿಗಳ ದೂರಿನ ಕುರಿತಂತೆ ನಾನು ಕೂಡ ಕೇಳಿದ್ದೇನೆ. ನಟ ದುನಿಯಾ ವಿಜಯ್ ಕೂಡ ಈ ಬಗ್ಗೆ ಮಾತನಾಡಿದ್ದು, ಉಪೇಂದ್ರ ಅಭಿಮಾನಿಗಳಿಗೆ ನೋವಾಗಿದ್ದರೆ ಟ್ಯಾಗ್ ತೆಗೆಯುವಂತೆಯೂ ಹೇಳಿದ್ದಾರೆ ಎಂದು ಸುಂದರ್ ಗೌಡ ಹೇಳಿದ್ದಾರೆ.
"ಸೂಪರ್ ಸ್ಟಾರ್ ಎಂಬ ಬಿರುದು ಮೊದಲು ಬಾಲಿವುಡ್ ನ ರಾಜ್ ಕುಮಾರ್ ಅವರಿಗೆ ನೀಡಲಾಗಿತ್ತು. ಬಳಿಕ ಅದನ್ನು ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ ನೀಡಲಾಗಿತ್ತು. ಆದರೆ ಅವರು ಆ ಬಿರುದು ನಿರಾಕರಿಸಿದ್ದರು. ಪ್ರಸ್ತುತ ತಮಿಳುನಾಡಿನಲ್ಲಿ ಸೂಪರ್ ಸ್ಟಾರ್ ಎಂಬ ಬಿರುದು ರಜಿನಿಕಾಂತ್ ಅವರಿಗಿದೆ. ಸ್ಯಾಂಡಲ್ ವುಡ್ ನಲ್ಲಿ ಉಪೇಂದ್ರ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯಲಾಗುತ್ತಿದೆ. ಈ ಟ್ಯಾಗ್ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂಬುದು ನನ್ನ ಭಾವನೆ ಎಂದು ನಿರ್ಮಾಪಕ ಸುಂದರ್ ಗೌಡ ಹೇಳಿದ್ದಾರೆ.
Advertisement