ಕಾಂತಾರ ಚಿತ್ರ ವೀಕ್ಷಣೆ ವೇಳೆ ಗಲಾಟೆ: ಪೊಲೀಸ್ ಮೊರೆ ಹೋದ ಸಂಗೀತ ನಿರ್ದೇಶಕ ವಾಸುಕಿ ವೈಭವ್!

ಕನ್ನಡದ ಕಾಂತಾರ ಚಿತ್ರ ವೀಕ್ಷಣೆಗೆಂದು ತೆರಳಿದ್ದ  ಖ್ಯಾತ, ಉದಯೋನ್ಮುಖ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರೊಂದಿಗೆ ಯುವಕರ ಗುಂಪೊಂದು ಗಲಾಟೆ ಮಾಡಿದ್ದು, ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.
ವಾಸುಕಿ ವೈಭವ್
ವಾಸುಕಿ ವೈಭವ್

ಬೆಂಗಳೂರು: ಕನ್ನಡದ ಕಾಂತಾರ ಚಿತ್ರ ವೀಕ್ಷಣೆಗೆಂದು ತೆರಳಿದ್ದ  ಖ್ಯಾತ, ಉದಯೋನ್ಮುಖ ಸಂಗೀತ ನಿರ್ದೇಶಕ ವಾಸುಕಿ ವೈಭವ್ ರೊಂದಿಗೆ ಯುವಕರ ಗುಂಪೊಂದು ಗಲಾಟೆ ಮಾಡಿದ್ದು, ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಗಿದೆ.

ಹೌದು.. ಗಾಯಕ ವಾಸುಕಿ ವೈಭವ್ ಹಾಗೂ ಯುವಕರ ನಡುವೆ ಥಿಯೇಟರ್​​ನಲ್ಲಿ ಗಲಾಟೆಯಾಗಿದ್ದು,  ಬೆಂಗಳೂರಿನ ಊರ್ವಶಿ ಥಿಯೇಟರ್​ನಲ್ಲಿ ಘಟನೆ ನಡೆದಿದೆ. ವಾಸುಕಿ ವೈಭವ್ ತಮ್ಮ ಸ್ನೇಹಿತರ ಜೊತೆ ಕಾಂತಾರ ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ ಥಿಯೇಟರ್ ನಲ್ಲಿ ಸೀಟಿನಲ್ಲಿ ಕೂರುವ ವಿಚಾರಕ್ಕೆ ಗಲಾಟೆ ಆಗಿದೆ ಎನ್ನಲಾಗಿದೆ. 

ತಡವಾಗಿ ಬಂದ ಯುವಕರು ವಾಸುಕಿ ಕುಳಿತಿದ್ದ ಆಸನಗಳ ಮುಂದೆ ಹಾದುಹೋಗುವಾಗ ವಾಸುಕಿ ಬೇಗ ಹೋಗುವಂತೆ ಸೌಮ್ಯವಾಗಿಯೇ ಹೇಳಿದ್ದಾರೆ. ಈ ವೇಳೆ ಯುವಕರ ಗುಂಪು ಗಲಾಟೆ ತೆಗೆದು ಏರು ದನಿಯಲ್ಲಿ ಮಾತನಾಡಿದ್ದಾರೆ. ನಾಲ್ಕೈದು ಮಂದಿಯ ಯುವಕರ ಗುಂಪು ವಾಸುಕಿ ಮತ್ತು ಸ್ನೇಹಿತರ ಜೊತೆ ಗಲಾಟೆ ಮಾಡುವುದಲ್ಲದೇ ಅಸಭ್ಯವಾಗಿ ವರ್ತಿಸಿದ್ದಾರೆ.  ಇದು ಅಷ್ಟಕ್ಕೇ ನಿಲ್ಲದೇ ಚಿತ್ರದ ಇಂಟರ್ವಲ್ ವೇಳೆಯಲ್ಲೂ ಯುವಕರು ಗುಂಪು ವಾಸುಕಿ ತಂಡವನ್ನು ಗುರಿಯಾಗಿಸಿಕೊಂಡು ಕೀಟಲೆ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣ ತಪ್ಪಿದಾಗ ವಾಸುಕಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಅಲ್ಲದೆ ಕಲಾಸಿಪಾಳ್ಯ ಪೊಲೀಸ್ ಸ್ಟೇಷನ್​ನಲ್ಲಿ ದೂರು ನೀಡಲು ಮುಂದಾಗಿದ್ದಾರೆ. ಈ ವೇಳೆ ವಿಚಾರಣೆ ನಡೆಸಿದ ಕಲಾಸಿಪಾಳ್ಯ ಪೊಲೀಸರು ಸ್ಟೇಷನ್​ನಲ್ಲಿ ರಾಜಿ ಸಂಧಾನ ನಡೆಸಿದ್ದಾರೆ ಎನ್ನಲಾಗಿದೆ. 

ಯುವಕರು ಮತ್ತು ವಾಸುಕಿ ವೈಭವ್ ನಡುವೆ ಪೊಲೀಸರು ಸಂಧಾನ ನಡೆಸಿದ್ದು, ಕೇಸ್ ದಾಖಲಿಸೋದು ಬೇಡ ಕ್ಷಮೆ ಕೇಳಿದರೆ ಸಾಕು ಎಂದು ವಾಸುಕಿ ಹೇಳಿದ್ದಾರೆ. ಅದರಂತೆ ಯುವಕರು ಕ್ಷಮೆ ಕೇಳಿದ ಬಳಿಕ ಎಲ್ಲರನ್ನೂ ಪೊಲೀಸರು ಬಿಟ್ಟು ಕಳುಸಿದ್ದಾರೆ. ರಾಜಿ ಸಂಧಾನದ ಬಳಿಕ ಪೊಲೀಸ್ ಠಾಣೆಯಿಂದ ವಾಸುಕಿ ವೈಭವ್ ಹೊರಬರುತ್ತಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಘಟನೆ ಸಂಬಂಧ ವಾಸುಕಿ ವೈಭವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ವಾಸುಕಿ ವೈಭವ್ ರಂಗಭೂಮಿ ಕಲಾವಿದ, ಗೀತ ರಚನಕಾರ, ಸಂಗೀತ ನಿರ್ದೇಶಕ ಮತ್ತು ಗಾಯಕರಾಗಿ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಕಾಗದದ ದೋಣಿಯಲಿ ಹಾಡು ವಾಸುಕಿ ವೈಭವ್​ಗೆ ದೊಡ್ಡ ಬ್ರೇಕ್ ನೀಡಿತ್ತು. 2016ರಲ್ಲಿ ತೆರೆಕಂಡ ರಾಮಾ ರಾಮಾ ರೇ ಚಿತ್ರದ ಸಂಗೀತ ನಿರ್ದೇಶನ ಇವರಿಗೆ ಹೆಸರು ತಂದುಕೊಟ್ಟಿತ್ತು. ಬಿಗ್​ಬಾಸ್-7ರಲ್ಲಿ ಸ್ಪರ್ಧಿಯಾಗಿದ್ದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com