

ಬೆಂಗಳೂರು: ಸಿನಿಪ್ರಿಯರಿಗೆ ಈ ವಾರ ಭರ್ಜರಿ ಸುದ್ದಿ ಇದ್ದು ಕಳೆದ ತಿಂಗಳು ಬಿಡುಗಡೆಯಾಗಿದ್ದ 5 ಬಹು ನಿರೀಕ್ಷಿತ ಚಿತ್ರಗಳು ಈ ವಾರ ಒಟಿಟಿಗೆ ಲಗ್ಗೆ ಇಡುತ್ತಿವೆ.
ಹೌದು.. ಕಳೆದ ತಿಂಗಳು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ 5 ಬಹು ನಿರೀಕ್ಷಿತ ಚಿತ್ರಗಳು ಈ ವಾರ ಓಟಿಟಿಯಲ್ಲಿ ಪ್ರದರ್ಶನ ಕಾಣುತ್ತಿವೆ. ಈ ಐದು ಚಿತ್ರಗಳ ಪೈಕಿ 4 ಚಿತ್ರಗಳು ಸೂಪರ್ ಹಿಟ್ ಪಟ್ಟಿಗೆ ಸೇರ್ಪಡೆಯಾಗಿರುವುದು ವಿಶೇಷ. ಇಷ್ಟಕ್ಕೂ ಯಾವುದು ಆ 5 ಚಿತ್ರಗಳು.. ಇಲ್ಲಿದೆ ಪಟ್ಟಿ!
1. ರಾಜಾ ಸಾಬ್
ನಟ ಪ್ರಭಾಸ್ ಅಭಿನಯದ ಮತ್ತು ನಿರ್ದೇಶಕ ಮಾರುತಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ರಾಜಾಸಾಬ್ ಚಿತ್ರ ಇದೇ ಫೆಬ್ರವರಿ 6ರಂದು ಒಟಿಟಿಯಲ್ಲಿ ತೆರೆ ಕಾಣುತ್ತಿದೆ. ಜಿಯೋ ಹಾಟ್ ಸ್ಟಾರ್ ನಲ್ಲಿ ರಾಜಾಸಾಬ್ ಚಿತ್ರ ತೆರೆಕಾಣುತ್ತಿದ್ದು, ಇದು ತೆಲುಗು ಫ್ಯಾಂಟಸಿ ಹಾರರ್-ಕಾಮಿಡಿ ಚಲನಚಿತ್ರವಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ನಿರ್ಮಿಸಿರುವ ಈ ಚಿತ್ರದಲ್ಲಿ ಮಾಳವಿಕ ಮೋಹನನ್ ಮತ್ತು ನಿಧಿ ಅಗರ್ವಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
2. ನಾರಿ ನಾರಿ ನಡುಮ ಮುರಾರಿ
ನಟ ಶರ್ವಾನಂದ್ ಅಭಿನಯದ ತೆಲುಗು ಚಿತ್ರ ನಾರಿ ನಾರಿ ನಡುಮ ಮುರಾರಿ ಕೂಡ ನಾಳೆ ಅಂದರೆ ಫೆಬ್ರವರಿ 4ರಂದು ಒಟಿಟಿಗೆ ಲಗ್ಗೆ ಇಡುತ್ತಿದ್ದು, ಅಮೇಜಾನ್ ಪ್ರೈಮ್ ನಲ್ಲಿ ಚಿತ್ರ ಪ್ರಸಾರವಾಗಲಿದೆ. ನಾರಿ ನಾರಿ ನಡುಮ ಮುರಾರಿ ಚಿತ್ರವನ್ನು ರಾಮ್ ಅಬ್ಬರಾಜು ನಿರ್ದೇಶಿಸಿದ್ದು, ಪ್ರಣಯ ಹಾಸ್ಯ ಕಥಾಹಂದರವನ್ನು ಹೊಂದಿರುವ ಈ ಚಿತ್ರವನ್ನು ಎಕೆ ಎಂಟರ್ಟೈನ್ಮೆಂಟ್ಸ್ ಮತ್ತು ಅಡ್ವೆಂಚರ್ಸ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಅನಿಲ್ ಸುಂಕರ ಮತ್ತು ರಾಮಬ್ರಹ್ಮ ಸುಂಕರ ನಿರ್ಮಿಸಿದ್ದಾರೆ.
3. ಪರಾಶಕ್ತಿ
ತಮಿಳು ಖ್ಯಾತನಟ ಶಿವಕಾರ್ತಿಕೇಯ ಅಭಿನಯದ ಬಹು ನಿರೀಕ್ಷಿತ ಚಿತ್ರ ಪರಾಶಕ್ತಿ ತಮಿಳುನಾಡಿನಲ್ಲಿ ಬಿಡುಗಡೆಯಾಗಿ ಭಾರಿ ಸದ್ದು ಮಾಡಿತ್ತು. ಪೊಲಿಟಿಕಲ್ ಆ್ಯಕ್ಷನ್ ಡ್ರಾಮಾ ಕಥಾ ಹಂದರವನ್ನು ಹೊಂದಿರುವ ಈ ಚಿತ್ರವನ್ನು ಸುಧಾ ಕೊಂಗರ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರ ಫೆಬ್ರವರಿ 7ರಂದು ಝೀ5ನಲ್ಲಿ ಬಿಡುಗಡೆಯಾಗುತ್ತಿದೆ.
4. ಮನ ಶಂಕರ ವರಪ್ರಸಾದ್ ಗಾರು
ನಟ ಚಿರಂಜೀವಿ ಅಭಿನಯದ ಸೂಪರ್ ಹಿಟ್ ತೆಲುಗು ಚಿತ್ರ ಮನ ಶಂಕರ ವರಪ್ರಸಾದ್ ಗಾರು ಕೂಡ ಇದೇ ವಾರ ಒಟಿಟಿಗೆ ಲಗ್ಗೆ ಇಡುತ್ತಿದ್ದು, ಈ ಚಿತ್ರವು ಫೆಬ್ರವರಿ 11ರಂದು ಝೀ5ನಲ್ಲಿ ಪ್ರಸಾರವಾಗುತ್ತಿದೆ. ಚಿತ್ರವನ್ನು ಅನಿಲ್ ರವಿಪುಡಿ ನಿರ್ದೇಶಿಸಿದ್ದು, ಚಿರಂಜೀವಿ ಪುತ್ರಿ ಸುಷ್ಮಿತಾ ಕೊನಿಡೆಲಾ ಅವರು ನಿರ್ಮಿಸಿದ್ದಾರೆ. ವಿಶೇಷವೆಂದರೆ ಈ ಚಿತ್ರ ಏಳು ಭಾಷೆಗಳಲ್ಲಿ ಅಂದರೆ ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬಂಗಾಳಿ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಹೇಳಲಾಗಿದೆ.
5. ಅನಗನಗಾ ಒಕ ರಾಜು
ಜಾತಿರತ್ನಾಲು ಖ್ಯಾತಿಯ ನಟ ನವೀನ್ ಪೋಲಿಶೆಟ್ಟಿ ಅಭಿನಯದ ಹಿಟ್ ಚಿತ್ರ 'ಅನಗನಗಾ ಒಕ ರಾಜು' ಕೂಡ ಇದೇ ವಾರ ಅಂದರೆ ಫೆಬ್ರವರಿ 13ರಂದು ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ. ಚಿತ್ರವನ್ನು ಮಾರಿ ನಿರ್ದೇಶಿಸಿದ್ದು, ಗ್ರಾಮೀಣ ಭಾಗದ ಪ್ರೇಮಕಥೆಯನ್ನು ಈ ಚಿತ್ರ ಹೊಂದಿದೆ. ನಟಿ ಮೀನಾಕ್ಷಿ ಚೌದರಿ ಚಿತ್ರದ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement