ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೀನಾದಿಂದ ಬೆಂಗಳೂರಿಗೆ ಬಂದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ಪತ್ತೆ; ಹೆಚ್ಚಿದ ಆತಂಕ

ದೇಶದಲ್ಲಿ ಕೊರೋನಾ ರೂಪಾಂತರಿ ಬಿಎಫ್7 ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ವಿದೇಶಗಳಿಂದ ಬರುತ್ತಿರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಈ ಬೆಳವಣಿಗೆ ನಡುವಲ್ಲೇ ಚೀನಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
Published on

ಬೆಂಗಳೂರು: ದೇಶದಲ್ಲಿ ಕೊರೋನಾ ರೂಪಾಂತರಿ ಬಿಎಫ್7 ಪತ್ತೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ವಿದೇಶಗಳಿಂದ ಬರುತ್ತಿರುವವರ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಈ ಬೆಳವಣಿಗೆ ನಡುವಲ್ಲೇ ಚೀನಾದಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇದು ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ನಿನ್ನೆ ಚೀನಾದಿಂದ ಬೆಂಗಳೂರಿಗೆ ಬಂದಿದ್ದ 35 ವರ್ಷದ ವ್ಯಕ್ತಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿತ್ತು. ಪರೀಕ್ಷೆ ವೇಳೆ ಕೊರೋನಾ‌ ಪಾಸಿಟಿವ್ ಇರುವುದು ಕಂಡು ಬಂದಿದೆ.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ವ್ಯಕ್ತಿಯನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಐಸೋಲೇಷನ್​ಗೆ ಒಳಪಡಿಸಲಾಗಿದೆ.

ಇದೀಗ ವ್ಯಕ್ತಿಯಲ್ಲಿ ಪತ್ತೆಯಾಗಿರುವುದು ಕೊರೋನಾ ರೂಪಾಂತರಿ ಬಿಎಫ್7 ಅಥವಾ ಕೇವಲ ಕೋವಿಡ್ ಸೋಂಕೇ ಎಂಬುದನ್ನು ತಿಳಿದುಕೊಳ್ಳಲು ಸೋಂಕಿತ ವ್ಯಕ್ತಿಯ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್'ಗೆ ರವಾನಿಸಲಾಗಿದೆ.

ಈ ನಡುವೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿರುವ ಸಚಿವ ಸುಧಾಕರ್ ಅವರು ಮಾತನಾಡಿ, ಚೀನಾದಿಂದ ಬಂದಿದ್ದ ವ್ಯಕ್ತಿಗೆ ಕೋವಿಡ್​ ದೃಢಪಟ್ಟಿದೆ. ಆದ್ರೆ ಆತನಿಗೆ ದೃಢಪಟ್ಟಿರುವ ಕೋವಿಡ್​ ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಕೊರೋನಾ ಪಾಸಿಟಿವ್ ಬಂದ ತಕ್ಷಣ ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಸದ್ಯ ನಮ್ಮ ದೇಶದಲ್ಲಿ ಆತಂಕ ಪಡುವಂತ ಸ್ಥಿತಿ ಬಂದಿಲ್ಲಾ. ಚೀನಾಗೆ ಹೋಲಿಕೆ ಮಾಡೋದು ಬೇಡ. ಯಾರು ಆತಂಕ ಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮ ತಗೆದುಕೊಂಡರೆ ಸಾಕು. ನಮ್ಮ ವ್ಯಾಕ್ಸಿನೇಷನ್‌ ಚನ್ನಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆಂದು ತಿಳಿಸಿದರು.

ನಮ್ಮ ದೇಶದಲ್ಲಿ ಎರಡುಪಟ್ಟು ನಾವು ಚನ್ನಾಗಿದೇವೆ. ಸ್ವಾಭಾವಿಕವಾಗಿ ನಮ್ಮಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇದೆ. ಇವತ್ತು ಕಂದಾಯ ಸಚಿವರ ಜೊತೆ ಸಭೆ ನಡೆಸಿ ಯಾವ ರೀತಿ ಮಾರ್ಗಸೂಚಿ ಕೊಡಬೇಕು ಮತ್ತು ಆಸ್ಪತ್ರೆಯ ವ್ಯವಸ್ಥೆ ಬಗ್ಗೆ ಚರ್ಚೆ ಮಾಡುತ್ತೇವೆಂದರು.

ತಜ್ಞರ ಜೊತೆ ಸಭೆಯ ಬಳಿಕ ಮಾರ್ಗಸೂಚಿ ಹೊರಡಿಸುವಂತೆ ಸಲಹೆ ಬಂದಿದ್ದೇ ಆದರೆ, ಸಿಎಂ ಜೊತೆ ಚರ್ಚೆ ಮಾಡಿ ಮಾರ್ಗಸೂಚಿ ಹೊರಡಿಸುತ್ತೇವೆ. ಚೀನಾದಿಂದ ಬಂದ ವ್ಯಕ್ತಿಗೆ ಕೊರೋನಾ ಪಾಸಿಟಿಟ್​ ಬಂದಿದೆ. ಆದರೆ, ಯಾವ ತಳಿ ಎಂಬುದು ಇನ್ನೂ ಪತ್ತೆಯಾಗಿಲ್ಲ. ಜೀನೋಮಿಕ್ ಸ್ವೀಕ್ವೆನ್ಸ್ ವರದಿಗಾಗಿ ಕಾಯುತ್ತಿದ್ದೇವೆ‌ ಎಂದು ಹೇಳಿದರು.

ಕಳೆದ ಮೂರು ದಿನಗಳಲ್ಲಿ ವಿದೇಶಗಳಿಂದ ಬಂದ 9 ಮಂದಿಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. 9 ಮಂದಿಯಲ್ಲಿ ಐವರನ್ನು ಹೋಂ ಕ್ವಾರಂಟೀನ್​ಗೆ ಒಳಪಡಿಸಲಾಗಿದೆ. ಉಳಿದಂತೆ ನಾಲ್ವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com