ಬೆಂಗಳೂರು: ಬೆಂಗಳೂರಿನ ಆಲೂರಿನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡಿರುವ ವಸತಿ ಯೋಜನೆ ವ್ಯಾಪ್ತಿಯ ಆವರಣದ ಭೂಮಿಯನ್ನು ಸ್ಥಳೀಯ ಬಿಜೆಪಿ ನಾಯಕರೊಬ್ಬರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೌದು.. ಬಿಡಿಎ ಆಲೂರ್ ವಸತಿ ಯೋಜನೆಯ (ಹಂತ-2) ಆವರಣದಲ್ಲಿ ಶನಿವಾರ ವ್ಯಕ್ತಿಯೊಬ್ಬರು ಅಲ್ಲಿದ್ದ ಜಮೀನಿಗೆ ಹಕ್ಕುಪತ್ರ ನೀಡಿ ಕಾಂಪೌಂಡ್ ಗೋಡೆ ನಿರ್ಮಿಸಿದ ಘಟನೆ ನಡೆದಿದೆ. ವಿವಾದದಲ್ಲಿರುವ ಭೂಮಿಯು ಸುಮಾರು 7,000 ಚದರ ಮೀಟರ್ಗಳಷ್ಟು ವ್ಯಾಪ್ತಿ ಹೊಂದಿದ್ದು, ಇದರ ಮೌಲ್ಯ ಸುಮಾರು 5 ಕೋಟಿ ರೂಗಳು ಎಂದು ಅಂದಾಜಿಸಲಾಗಿದೆ. ಬಿಡಿಎ 104 3-BHK ಮನೆಗಳು ಮತ್ತು 349 2-BHK ಮನೆಗಳನ್ನು ಹೊಂದಿರುವ ಬಿಡಿಎ ಆಲೂರ್ ವಸತಿ ಯೋಜನೆ ಹಂತ-2ಕ್ಕೆ ಭೂಮಿ ಸ್ವಾಧೀನಪಡಿಸಿಕೊಂಡ ಭೂಮಿ ಇದಾಗಿದೆ ಎನ್ನಲಾಗಿದೆ.
ಈ ಭೂಮಿಯನ್ನು ಕೊಳ್ಳುವಾಗ 2016 ರಲ್ಲಿ ಮಾಲೀಕತ್ವವನ್ನು BDA ಮತ್ತು ಸ್ಥಳೀಯ ಬಿಜೆಪಿ ನಾಯಕ ಗೋವಿಂದರಾಜು ಇಬ್ಬರು ತಮ್ಮದೇ ಎಂದು ಹೇಳಿಕೊಂಡಿದ್ದರು. ಆದರೆ ಇನ್ನೂ ಈ ಭೂಮಿಯ ಮಾಲೀಕತ್ವ ವಿವಾದ ಇತ್ಯರ್ಥವಾಗಿಲ್ಲ, ಅದಾಗಲೇ ಈ ವಿವಾದಿತ ಭೂಮಿಯಲ್ಲಿ ಬಿಜೆಪಿ ನಾಯಕ ಗೋವಿಂದರಾಜು ಕಾಂಪೌಂಡ್ ನಿರ್ಮಿಸಿದ್ದಾರೆ. 2BHK ಯೋಜನೆಯ ಸುತ್ತಲೂ ಕಾಂಪೌಂಡ್ ಗೋಡೆಯನ್ನು ನಿರ್ಮಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಬಿಡಿಎ ವಸತಿ ಯೋಜನೆಯಲ್ಲಿ ಮನೆ ಖರೀದಿ ಮಾಡಿರುವ ಮನೆ ಮಾಲೀಕರು (ಕೋರಿಕೆಯ ಮೇರೆಗೆ ಹೆಸರನ್ನು ತಡೆಹಿಡಿಯಲಾಗಿದೆ) TNIE ಗೆ ಈ ಬಗ್ಗೆ ಮಾಹಿತಿ ನೀಡಿದ್ದು, 'ವ್ಯಕ್ತಿಯು ಶುಕ್ರವಾರದಂದು ಸದ್ದಿಲ್ಲದೆ ಕಾಂಪೌಂಡ್ ಗೋಡೆಯ ಕೆಲಸವನ್ನು ಪ್ರಾರಂಭಿಸಿದನು ಮತ್ತು ವಾರಾಂತ್ಯದ ವೇಳೆಗೆ ಅದನ್ನು ಪೂರ್ಣಗೊಳಿಸಲು ತರಾತುರಿಯಲ್ಲಿ ಪ್ರಯತ್ನಿಸುತ್ತಿದ್ದನು. ಈ ಬಗ್ಗೆ ಬಿಡಿಎಗೆ ಮಾಹಿತಿ ನೀಡಿದ್ದೇವೆ. ನಮಗೆ ಇಲ್ಲಿ ದೇವಸ್ಥಾನ, ಆಟದ ಮೈದಾನ ಅಥವಾ ಉದ್ಯಾನವನ ಕಲ್ಪಿಸಲು ಬಿಡಿಎ ಯೋಜಿಸಿದೆ. ಆದರೆ ಇಲ್ಲಿ ಕಾಂಪೌಂಡ್ ನಿರ್ಮಾಣದ ಮೂಲಕ ಇಲ್ಲಿನ ಮನೆಗಳನ್ನು ಖರೀದಿಸಿರುವ ಎಲ್ಲಾ ನಿವಾಸಿಗಳಿಗೆ ಸಾಮಾನ್ಯ ಜಾಗವನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಸ್ಪಷ್ಟನೆ ನೀಡಿರುವ ಯೋಜನೆಯ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಭುಲಿಂಗ ಸ್ವಾಮಿ ಅವರು, ಪ್ರಸ್ತುತ ಕಾಂಪೌಂಡ್ ನಿರ್ಮಾಣದ ಕಾಮಗಾರಿಯನ್ನು ನಿಲ್ಲಿಸಿದ್ದೇವೆ. ಅಲ್ಲದೆ ಬುಧವಾರ ತಮ್ಮ ಮಾಲೀಕತ್ವವನ್ನು ಸಾಬೀತುಪಡಿಸುವ ದಾಖಲೆಗಳೊಂದಿಗೆ ಬಿಡಿಎ ಕೇಂದ್ರ ಕಚೇರಿಗೆ ಬರುವಂತೆ ಕಾಂಪೌಂಡ್ ನಿರ್ಮಿಸಿರುವ ಸ್ಥಳೀಯ ಬಿಜೆಪಿ ನಾಯಕ ಗೋವಿಂದರಾಜು ಅವರಿಗೆ ತಿಳಿಸಲಾಗಿದೆ. ಅವರು ಅದನ್ನು 1973 ರಲ್ಲಿ ಖರೀದಿಸಿದ ತಮ್ಮ ಪೂರ್ವಜರ ಆಸ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದಾಖಲೆ ಪರಿಶೀಲನೆ ಬಳಿಕ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ.
ಅಂತೆಯೇ ಬಿಡಿಎ ತನ್ನ ಮಾಲೀಕತ್ವವನ್ನು ಸ್ಥಾಪಿಸಲು ಈ ಸಂಬಂಧದಲ್ಲಿ ಯಾವುದೇ ದಾಖಲೆಗಳನ್ನು ಹಿಂಪಡೆಯುತ್ತದೆ ಎಂದು ಎಇಇ ಸ್ಪಷ್ಟಪಡಿಸಿದ್ದಾರೆ.
ಗೋವಿಂದರಾಜು ಬಿಡಿಎ ಅಧ್ಯಕ್ಷರ ನಿಕಟವರ್ತಿ: ಸ್ಥಳೀಯರ ಆರೋಪ
ಇನ್ನು ವಿವಾದಿತ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿರುವ ಗೋವಿಂದರಾಜು ಹಾಲಿ ಬಿಡಿಎ ಅಧ್ಯಕ್ಷ ಹಾಗೂ ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಅವರ ನಿಕಟವರ್ತಿ ಎನ್ನಲಾಗಿದೆ. ಇದೇ ಕಾರಣಕ್ಕೆ ಗೋವಿಂದರಾಜು ಬಿಡಿಎ ಜಾಗವನ್ನು ಒತ್ತುವರಿ ಮಾಡಿ ಕಾಂಪೌಂಡ್ ಗೋಡೆ ನಿರ್ಮಿಸುವ ಹಂತಕ್ಕೆ ಹೋಗಿದ್ದಾರೆ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಆರೋಪದ ಬಗ್ಗೆ ಸ್ಪಷ್ಟನೆ ನೀಡುವಂತೆ ಪದೇ ಪದೇ ಕರೆ, ಸಂದೇಶ ನೀಡಿದರೂ ವಿಶ್ವನಾಥ್ ಸಂಪರ್ಕಕ್ಕೆ ಸಿಗುತ್ತಿಲಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ.
Advertisement