ಭಾರತದಲ್ಲಿ ಮತ್ತೆ 14 ಮಂದಿಯಲ್ಲಿ ಪತ್ತೆಯಾದ ಕೊರೋನಾ ವೈರಸ್: ಸೋಂಕಿತರ ಸಂಖ್ಯೆ 62ಕ್ಕೆ ಏರಿಕೆ, ಕೇರಳದಲ್ಲಿ ಓರ್ವನ ಸ್ಥಿತಿ ಚಿಂತಾಜನಕ

ಭಾರತದಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದ್ದು, ಮತ್ತೆ 14 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 8 ಪ್ರಕರಣಗಳು ಕೇರಳದಲ್ಲಿ, ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

3 ಮೂರು ವರ್ಷದ ಮಗುವಿನ ಪೋಷಕರಲ್ಲೂ ದೃಢಪಟ್ಟ ವೈರಸ್: ಮಿಲನ್ ಏರ್'ಪೋರ್ಟ್'ನಲ್ಲಿ ಸಿಲುಕಿಕೊಂಡಿರುವ 300 ಮಂದಿ ಭಾರತೀಯರು
ನವದೆಹಲಿ:
ಭಾರತದಲ್ಲಿ ದಿನೇ ದಿನೇ ಕೊರೋನಾ ಭೀತಿ ಹೆಚ್ಚಾಗುತ್ತಲೇ ಇದ್ದು, ಮತ್ತೆ 14 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 8 ಪ್ರಕರಣಗಳು ಕೇರಳದಲ್ಲಿ, ಕರ್ನಾಟಕದಲ್ಲಿ 3 ಹಾಗೂ ಮಹಾರಾಷ್ಟ್ರದ ಪುಣೆಯಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 62ಕ್ಕೆ ಏರಿಕೆಯಾಗಿದೆ. 

ಒಂದೇ ದಿನ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಸಹಜವಾಗಿಯೇ ದೇಶದಾದ್ಯಂತ, ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳಲ್ಲಿ ಆತಂಕವನ್ನು ಹುಟ್ಟುಹಾಕಿದೆ. 

ಮಂಗಳವಾರ 8 ಹೊಸ ಪ್ರಕರಣ ಬೆಳಕಿಗೆ ಬರುವುದರೊಂದಿಗೆ ಕೇರಳದಲ್ಲಿ ಈ ವರೆಗೆ ಒಟ್ಟು 14 ಪ್ರಕರಣಗಳು ಬೆಳಕಿಗೆ ಬಂದಂತೆ ಆಗಿದೆ. ಈ ಪೈಕಿ ಮೊದಲ ಮೂರು ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದು, ಉಳಿದವರು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಹಲವು ನಿಯಂತ್ರಣ ಕ್ರಮಗಳನ್ನು ಘೋಷಿಸಿದೆ. 

ಕಳೆದ ಶನಿವಾರವಷ್ಟೇ ಇಟಲಿಯಿಂದ ಮರಳಿದ್ದ ದಂಪತಿ ಮತ್ತು ಪುತ್ರನಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅಂದು ಸೋಂಕಿಗೆ ತುತ್ತಾದ ದಂಪತಿಯ ಪೋಷಕರು ಮತ್ತು ನಾಲ್ವರು ಸಂಬಂಧಿಗಳಿಗೂ ಸೋಂಕು  ತಗುಲಿರುವುದು ಖಚಿತಪಟ್ಟಿದೆ. ಈ ಪೈಕಿ ಸೋಂಕಿಗೆ ತುತ್ತಾಗಿರುವ ವಯೋವೃದ್ಧ ಪೋಷಕರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. 

ಮತ್ತೊಂದೆಡೆ ಸೋಮವಾರ 3 ವರ್ಷದ ಮಗುವಿಗೂ ಸೋಂಕು ತಗುಲಿದ್ದು ಖಚಿತಗೊಂಡಿತ್ತು. ಇದೀಗ ಅವರ ಪೋಷಕರಿಗೂ ಸೋಂಕು ತಗುಲಿರುವುದು ಖಚಿತವಾಗಿದೆ. ಇನ್ನು ಬೆಂಗಳೂರು ಮತ್ತು ಪುಣೆಯಲ್ಲಿ ಮಂಗಳವಾರ ತಲಾ ಮೂವರಿಗೆ ಸೋಂಕು ತಗುಲಿರುವುದು ಖಚಿತಗೊಂಡಿದೆ. 

ಈ ನಡುವೆ ವೈರಸ್ ಪೀಡಿತ ಇರಾನ್ ರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ 58 ಮಂದಿ ಭಾರತೀಯರನ್ನು ಭಾರತೀಯ ವಾಯುಪಡೆಗಳು ತವರಿಗೆ ಕರೆ ತಂದಿದೆ. ಇರಾನ್ ನಲ್ಲಿ ವೈರಸ್ ಎಡೆಬಿಡದೆ ಕಾಡುತ್ತಿದ್ದು, ಈ ರಾಷ್ಟ್ರದಲ್ಲಿ  ಒಟ್ಟು 2,000 ಭಾರತೀಯರು ನೆಲೆಯೂರಿದ್ದಾರೆಂದು ವರದಿಗಳು ತಿಳಿಸಿವೆ. 

ಈಗಾಗಲೇ ಇರಾನ್ ರಾಷ್ಟ್ರದಲ್ಲಿ ಇಳಿದಿರುವ ಭಾರತೀಯ ಪಡೆಯ ವಿಮಾನಗಳು ಭಾರತೀಯರನ್ನು ಕರೆತರುವ ಕಾರ್ಯದಲ್ಲಿ ತೊಡಗಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಹೇಳಿದ್ದಾರೆ. 

ಬುಧವಾರ ಕೂಡ ಜೈಪುರದಲ್ಲಿ 85 ವರ್ಷದ ವೃದ್ಧ ವ್ಯಕ್ತಿಯಲ್ಲಿ ವೈರಸ್ ಪತ್ತಯಾಗಿದ್ದು, ವಿಶೇಷ ಕೊಠಡಿಯಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. 

ದುಬೈನಿಂದ ಕೆಲ ದಿನಗಳ ಹಿಂದಷ್ಟೇ ವ್ಯಕ್ತಿ ಜೈಪುರಕ್ಕೆ ಬಂದಿದ್ದು, ಇದೀಗ ವ್ಯಕ್ತಿಯಲ್ಲಿ ವೈರಸ್ ಇರುವುದು ದೃಢಪಟ್ಟಿದೆ. ಇದೀಗ ವ್ಯಕ್ತಿಯೊಂದಿಗೆ ಸಂಪರ್ಕ ಇರುವ ಜನರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ. 

ಇನ್ನು ಕೇರಳದಲ್ಲಿ ವೈರಸ್ ಪೀಡಿತರ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಸೋಂಕು ತಗುಲಿದ್ದ 85 ವರ್ಷದ ವೃದ್ಧೆ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ. 

ಪಥನಾಮ್ತಿಟ್ಟ ಮೂಲದ ಈ ವೃದ್ಧ ಮಹಿಳೆ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮಾರ್ಚ್ 9 ರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಗೆ ಈಗಾಗಲೇ ವೈದ್ಯರು ಗರಿಷ್ಠ ಮಟ್ಟದಲ್ಲಿ ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ. ಇಟಲಿಯಿಂದ ಕೇರಳಗೆ ಬಂದಿದ್ದ ವ್ಯಕ್ತಿಯ ತಾಯಿ ಇವರಾಗಿದ್ದು, ಮಗನಿಗೆ ಸೋಂಕು ತಗುಲಿದ ಬಳಿಕ ತಾಯಿಯಲ್ಲೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com