ಬೆಂಗಳೂರು: 23 ವರ್ಷದ ರಾಮನಗರ ಜಿಲ್ಲೆಯ ಯುವತಿಗೆ ಅಂದು ಫೇಸ್ ಬುಕ್ ನಲ್ಲಿ ಆಘಾತಕಾರಿ ಸಂದೇಶವೊಂದು ಕಾದಿತ್ತು. ಆಕೆ 6 ವರ್ಷಗಳಿಂದ ಪ್ರೀತಿಸುತ್ತಿದ್ದ ವ್ಯಕ್ತಿ ಬೇರೊಬ್ಬಾಕೆಯನ್ನು ವಿವಾಹವಾಗಿದ್ದ ವಿಷಯ ಫೇಸ್ ಬುಕ್ ನೋಟಿಫಿಕೇಷನ್ ನಿಂದ ತಿಳಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
29 ವರ್ಷದ ಶಶಾಂಕ್ ಮತ್ತು ಜೆಸ್ಸಿಕಾ(ಹೆಸರು ಬದಲಿಸಲಾಗಿದೆ) ನಡುವೆ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಇಬ್ಬರೂ ಬೆಂಗಳೂರಿನಲ್ಲಿ ಬಿಪಿಒ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಲಬುರಗಿಯ ಶಶಾಂಕ್ ತನ್ನ ಪ್ರೇಯಸಿ ಜೆಸ್ಸಿಕಾಗೆ ತನ್ನ ಸೋದರನ ಮದುವೆಯಿದೆ ಎಂದು ಹೇಳಿ ಊರಿಗೆ ಹೋಗಿದ್ದ. ಜೆಸ್ಸಿಕಾ ಆತನ ಮಾತನ್ನು ಸಂಪೂರ್ಣವಾಗಿ ನಂಬಿದ್ದಳು.
ಅಂದು ಜೆಸ್ಸಿಕಾ ಆಫೀಸಿಗೆ ಬರುವಾಗ ದಾರಿ ಮಧ್ಯದಲ್ಲಿ ಫೇಸ್ ಬುಕ್ ತೆರೆದು ನೋಡಿದಾಗ ಶಶಾಂಕ್ ನಿಂದ ಬಂದ ಸಂದೇಶ ಓದುತ್ತಾಳೆ. ಅದರಲ್ಲಿ ಶಶಾಂಕ್ ತಾನು ಮದುವೆಯಾಗಿರುವುದಾಗಿ ಹೇಳಿದ್ದಾನೆ.
ಆಘಾತಗೊಂಡ ಜೆಸ್ಸಿಕಾ ಶಶಾಂಕ್ ಗೆ ಫೋನ್ ಮಾಡಲು ಯತ್ನಿಸಿದಾಗ ಸ್ವಿಚ್ ಆಫ್ ಬಂದಿತ್ತು. ತೀವ್ರ ಬೇಸರ, ಹತಾಶೆಯಿಂದ ಜೆಸ್ಸಿಕಾ ಆತ್ಮಹತ್ಯೆಗೆ ಯತ್ನಿಸಿದಳು. ಆಗ ಆಕೆಯ ಕೆಲ ಸ್ನೇಹಿತರು ಪೊಲೀಸರಿಗೆ ದೂರು ನೀಡುವಂತೆ ಸಲಹೆ ನೀಡಿದರು. ಅದರಂತೆ ಜೆಸ್ಸಿಕಾ, ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸಹಾಯವಾಣಿ ಪರಿಹಾರಕ್ಕೆ ಕರೆ ಮಾಡಿ ದೂರು ನೀಡಿದಳು. ಅದರಂತೆ ಶಶಾಂಕ್ ನ ಕುಟುಂಬದವರಿಗೆ ನೊಟೀಸ್ ಕಳುಹಿಸಿರುವ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು.
ಬಂಧನದ ಭೀತಿಯಿಂದ ಶಶಾಂಕ್ ತಾಯಿ ಜೆಸ್ಸಿಕಾಳನ್ನು ಕೂಡ ಮದುವೆಯಾಗುವಂತೆ ಶಶಾಂಕ್ ಗೆ ಸೂಚಿಸಿ ಎರಡನೇ ಸೊಸೆಯಾಗಿ ಸ್ವೀಕರಿಸುವುದಕ್ಕೆ ಹೇಳಿದರು. ಅದಕ್ಕೆ ಪರಿಹಾರದಲ್ಲಿರುವ ಸಲಹೆಗಾರರು ಮಧ್ಯ ಪ್ರವೇಶಿಸಿ, ಈಗಾಗಲೇ ಮದುವೆಯಾಗಿರುವುದರಿಂದ ಮತ್ತೊಂದು ಮದುವೆಯಾಗುವುದು ಕಾನೂನು ಪ್ರಕಾರ ಅಕ್ರಮ ಎಂದು ಹೇಳಿದ್ದಾರೆ.
''ಜೆಸ್ಸಿಕಾಳ ಬಗ್ಗೆ ಕೆಲ ವರ್ಷಗಳ ಹಿಂದೆ ಶಶಾಂಕ್ ನಮಗೆ ಹೇಳಿದ್ದ. ತಮಗೆ ಜೆಸ್ಸಿಕಾಳೊಂದಿಗಿನ ಸಂಬಂಧದ ಬಗ್ಗೆ ಯಾವುದೇ ಆಕ್ಷೇಪವಿರಲಿಲ್ಲ. ಶಶಾಂಕ್ ಮದುವೆ ಪ್ರಸ್ತಾಪಿಸಿದ್ದರೂ ತನ್ನ ಮನೆಯವರು ವಿರೋಧ ಮಾಡಬಹುದು ಎಂಬ ಭೀತಿಯಿಂದ ಅದಕ್ಕೆ ಪ್ರತಿಕ್ರಿಯಿಸಲು ಜೆಸ್ಸಿಕಾಳೇ ತಡ ಮಾಡಿದ್ದಳು'' ಎಂದು ಶಶಾಂಕ್ ನ ಕುಟುಂಬಸ್ಥರು ಪೊಲೀಸರಿಗೆ ಹೇಳಿದ್ದಾರೆ.
ನಂತರ ಜೆಸ್ಸಿಕಾಗೆ ಪರಿಹಾರ ಕೇಂದ್ರದಲ್ಲಿ ಕಾರ್ಯಕರ್ತರು ಖಿನ್ನತೆಗೆ ಕೌನ್ಸೆಲಿಂಗ್ ನೀಡಿದ್ದು, ಇದೀಗ ಆಕೆ ಗುಣಮುಖವಾಗಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಾಳೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos