ಬೆಂಗಳೂರು: ಪ್ರಮುಖ ಸೈಬರ್ ವಂಚನೆ ಪ್ರಕರಣವೊಂದರಲ್ಲಿ, 74 ವರ್ಷದ ನಿವೃತ್ತ ಶಿಕ್ಷಕಿಯೊಬ್ಬರನ್ನು ಸುಮಾರು ನಾಲ್ಕು ತಿಂಗಳ ಕಾಲ "ಡಿಜಿಟಲ್ ಬಂಧನ"ದಲ್ಲಿ ಇರಿಸಿಕೊಂಡು 24 ಕೋಟಿ ರೂ. ವಂಚಿಸಲಾಗಿದೆ. ಈ ಸಂಬಂಧ ರಾಜ್ಯ ಸೈಬರ್ ಕಮಾಂಡ್ ಘಟಕವು ವಿವಿಧ ರಾಜ್ಯಗಳ ಆರು ಆರೋಪಿಗಳನ್ನು ಬಂಧಿಸಿದೆ.
ಖಾಸಗಿ ಬ್ಯಾಂಕ್ ವ್ಯವಸ್ಥಾಪಕರೊಬ್ಬರ ಸಕಾಲಿಕ ಜಾಗರೂಕತೆಯಿಂದ ಈ ಬೃಹತ್ ವಂಚನೆ ಬೆಳಕಿಗೆ ಬಂದಿದ್ದು, ಮಹಿಳೆ ಇನ್ನಷ್ಟು ಹಣ ಕಳೆದುಕೊಳ್ಳುವುದನ್ನು ತಡೆಯಲಾಗಿದೆ ಮತ್ತು ದೊಡ್ಡ ಪ್ರಮಾಣದ ಸೈಬರ್ ಹಗರಣವನ್ನು ಬಹಿರಂಗಪಡಿಸಿದೆ.
ಬಂಧಿತ ಆರೋಪಿಗಳನ್ನು ತಮಿಳುನಾಡಿನ ಈರೋಡ್ನ ಎನ್ ಶಿವಜ್ಞಾನಂ; ಮಹಾರಾಷ್ಟ್ರದ ಮುಂಬೈನ ಅಕ್ಕಚ್ ಮಲ್ಲಿಕ್; ಗುಜರಾತ್ನ ಅಹಮದಾಬಾದ್ನ ಪಾಲಕ್ ಭಾಯ್ ಪಟೇಲ್ ಮತ್ತು ಅಮಿತ್ ನರೇಂದ್ರ ಪಟೇಲ್; ನವದೆಹಲಿಯ ಓಂ ಪ್ರಕಾಶ್ ರಜಪೂತ್ ಹಾಗೂ ಬಿಹಾರದ ಗೌರವ್ ಕುಮಾರ್ ಎಂದು ಗುರುತಿಸಲಾಗಿದೆ.
ಹಣ ಕಳೆದುಕೊಂಡ ಮಹಿಳೆ ಲಕ್ಷ್ಮಿ ರಾಮಮೂರ್ತಿ ಅವರು, ಶಿವಾಜಿನಗರ ನಿವಾಸಿಯಾಗಿದ್ದು, ಅಪಾರ್ಟ್ಮೆಂಟ್ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಆದರೆ ಅವರ ಮಕ್ಕಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಮಹಿಳೆ ದುಬೈನಲ್ಲಿ ಶಿಕ್ಷಕಿಯಾಗಿಯೂ ಕೆಲಸ ಮಾಡಿದ್ದಾರೆ.
ಆರೋಪಿಗಳು, ತಾವು ಕೇಂದ್ರ ತನಿಖಾ ಸಂಸ್ಥೆ(ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ(ಇಡಿ)ದ ಹಿರಿಯ ಅಧಿಕಾರಿಗಳು ಎಂದು ಹೇಳಿಕೊಂಡು ಮಹಿಳೆಯನ್ನು 'ಡಿಜಿಟಲ್ ಅರೆಸ್ಟ್' ಮಾಡಿದ್ದಾರೆ. ನೀವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದು, ನೀವು ಕಣ್ಗಾವಲಿನಲ್ಲಿದ್ದೀರಿ ಎಂದು ಮಹಿಳೆ ಹೆದರಿಸಿದ್ದಾರೆ.
ಕಾನೂನು ಕ್ರಮಕ್ಕೆ ಹೆದರಿ, ಲಕ್ಷ್ಮಿ ಫೆಬ್ರವರಿ 10 ರಿಂದ ಮಾರ್ಚ್ 24 ರ ನಡುವೆ ಹಂತ ಹಂತವಾಗಿ ವಂಚಕರಿಗೆ 24 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಅಲ್ಲದೆ ಆರೋಪಿಗಳು ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಹೆಚ್ಚುವರಿ ಹಣ ಪಡೆಯಲು, ಲಕ್ಷ್ಮಿ ತನ್ನ ಮನೆಯಲ್ಲಿ ಇರಿಸಲಾಗಿದ್ದ 1.3 ಕೆಜಿ ಚಿನ್ನದ ಆಭರಣಗಳನ್ನು ಅಡವಿಡಲು ಬ್ಯಾಂಕ್ಗೆ ಹೋಗಿದ್ದಾರೆ. ಆಕೆಯ ನಡವಳಿಕೆ ಮತ್ತು ಪದೇ ಪದೇ ಹೆಚ್ಚಿನ ಮೌಲ್ಯದ ವಹಿವಾಟುಗಳನ್ನು ಗಮನಿಸಿದ ಬ್ಯಾಂಕ್ ಮ್ಯಾನೇಜರ್ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬ್ಯಾಂಕಿಗೆ ಧಾವಿಸಿ ಲಕ್ಷ್ಮಿಯನ್ನು ಪ್ರಶ್ನಿಸಿದ್ದಾರೆ. ಆರಂಭದಲ್ಲಿ, ಭಯಭೀತಳಾದ ಮಹಿಳೆ ಮಾತನಾಡಲು ಇಷ್ಟಪಟ್ಟಿಲ್ಲ. ಆದರೆ ಪೊಲೀಸರು ಆಕೆಯನ್ನು ಸಮಾಧಾನಪಡಿಸಿ ತಾಳ್ಮೆಯಿಂದ ಪ್ರಶ್ನಿಸಿದ ನಂತರ, "ಡಿಜಿಟಲ್ ಬಂಧನ" ಸತ್ಯ ಬೆಳಕಿಗೆ ಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯ ಹೇಳಿಕೆಯ ಆಧಾರದ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡು, ಆಕೆಯ ಮಕ್ಕಳಿಗೆ ಮಾಹಿತಿ ನೀಡಿ ತನಿಖೆ ಆರಂಭಿಸಿದರು. ಲಕ್ಷ್ಮಿ ದೇಶಾದ್ಯಂತ 10 ವಿವಿಧ ಬ್ಯಾಂಕ್ಗಳಿಗೆ ಸಂಬಂಧಿಸಿದ 23 ಮ್ಯೂಲ್ ಬ್ಯಾಂಕ್ ಖಾತೆಗಳಿಗೆ 26 ಬಾರಿ ಹಣವನ್ನು ವರ್ಗಾಯಿಸಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಆರೋಪಿಗಳು, ಲಕ್ಷ್ಮಿಯೊಂದಿಗೆ ಮಾತನಾಡುವಾಗ, ಆಕೆ ಇತ್ತೀಚೆಗೆ ಒಂದು ಪ್ಲಾಟ್ ಅನ್ನು ಮಾರಾಟ ಮಾಡಿದ್ದು, ಅವರ ಬಳಿ ದೊಡ್ಡ ಪ್ರಮಾಣದ ಹಣ ಇರುವುದನ್ನು ತಿಳಿದುಕೊಂಡು ಹೆಚ್ಚಿನ ಹಣ ಸುಲಿಗೆಗೆ ಯತ್ನಿಸಿದ್ದಾರೆ.
ತಾಂತ್ರಿಕ ವಿವರಗಳು ಮತ್ತು ಇತರ ಪುರಾವೆಗಳನ್ನು ಬಳಸಿಕೊಂಡು, ಪೊಲೀಸರು ವಿವಿಧ ರಾಜ್ಯಗಳಿಂದ ಆರು ಜನರನ್ನು ಬಂಧಿಸಿದ್ದಾರೆ.
ಎನ್ಸಿಆರ್ಪಿ ಪೋರ್ಟಲ್ ಸಹಾಯದಿಂದ ಪೊಲೀಸರು ಹಣ ವರ್ಗಾವಣೆ ಮತ್ತು ಅಕ್ರಮ ವರ್ಗಾವಣೆಗೆ ಬಳಸಲಾಗುತ್ತಿದ್ದ ಹಲವಾರು ಮ್ಯೂಲ್ ಖಾತೆಗಳನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಪೊಲೀಸರು 4 ಕೋಟಿ ರೂ.ಗೂ ಹೆಚ್ಚು ಹಣವನ್ನು ಸೀಜ್ ಮಾಡಿದ್ದಾರೆ ಮತ್ತು ಆರೋಪಿಗಳಿಂದ 1.46 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.