ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಸ್ವಯಂಘೋಷಿತ ದೇವಮಾನವನೋರ್ವ ಮಹಿಳೆಯೊಬ್ಬರ ಮೇಲೆ ನಿರಂತರ ಅತ್ಯಾಚಾರವೆಸಗುತ್ತಿದ್ದ ದಾರುಣ ಘಟನೆ ಬೆಳಕಿಗೆ ಬಂದಿದೆ.
ತನ್ನಲ್ಲಿ ದೈವಿಕ ಶಕ್ತಿಗಳಿವೆ ಎಂದು ನಂಬಿಸಿ ಹಲವು ವರ್ಷಗಳಿಂದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ದೈಹಿಕವಾಗಿ ಹಿಂಸಿಸಿ ಆರ್ಥಿಕವಾಗಿ ಶೋಷಿಸಿದ ಆರೋಪದ ಮೇಲೆ ಸ್ವಯಂಘೋಷಿತ ದೇವಮಾನವ ರಾಧಾಮೋಹನ್ ಮಿಶ್ರಾ ಹಾಗೂ ಆತನ ಏಳು ಸಹಚರರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಬಂಧಿತರಾದ ಏಳು ಸಹಚರರಲ್ಲಿ ಆರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೈವಿಕ ಶಕ್ತಿ ಇದೆ ಎಂದು ನಂಬಿಸಿದ್ದ ವಂಚಕ
ಮಿಶ್ರಾ ಹಲವು ವರ್ಷಗಳಿಂದ ಜನರನ್ನು ವಂಚಿಸುತ್ತಿದ್ದಾನೆ ಎಂದು ಆರೋಪಿಸಲಾಗಿದ್ದು, ದೂರುದಾರೆಯ ಕುಟುಂಬವು ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಆತನ ಸಂಪರ್ಕದಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಆಧುನಿಕ ಗುರುಕುಲ" ಎಂಬ ಹೆಸರಿನಲ್ಲಿ ಕುಟುಂಬಗಳನ್ನು ನಂಬಿಸಿ ತಮ್ಮ ಮಕ್ಕಳನ್ನು ಆಶ್ರಮದಲ್ಲಿ ವಾಸಿಸಲು ಒಪ್ಪಿಸುತ್ತಿದ್ದ ಆರೋಪಿಯು, ಮಕ್ಕಳು ಹಗಲು ಶಾಲೆ-ಕಾಲೇಜುಗಳಿಗೆ ತೆರಳಿದರೂ ಆಶ್ರಮದಲ್ಲೇ ವಾಸಿಸುವಂತೆ ಮಾಡುತ್ತಿದ್ದನು. ಅಲ್ಲಿ ಅವರಿಗೆ ದೈಹಿಕ ಹಿಂಸೆ ಹಾಗೂ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ತಾನು ಅಲೌಕಿಕ ಶಕ್ತಿಗಳನ್ನು ಹೊಂದಿದ್ದೇನೆ, ಜನರ ಮನಸ್ಸಿನಲ್ಲಿರುವ ವಿಚಾರಗಳನ್ನು ಓದಬಲ್ಲೆ ಮತ್ತು ಭವಿಷ್ಯವನ್ನು ಊಹಿಸಬಲ್ಲೆ ಎಂಬ ಭ್ರಮೆಯನ್ನು ಆತ ಅನುಯಾಯಿಗಳಲ್ಲಿ ಸೃಷ್ಟಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಅನುಯಾಯಿಗಳಿಂದ ಅವರ ಆಲೋಚನೆಗಳು ಮತ್ತು ವೈಯಕ್ತಿಕ ಜೀವನದ ಬಗ್ಗೆ ವಿವರವಾದ ವರದಿಗಳನ್ನು ಬರೆಯಿಸಿಕೊಂಡು, ನಂತರ ಅವುಗಳನ್ನು ದೂರುದಾರೆಯ ಹಾಗೂ ಆಕೆಯ ಕುಟುಂಬದ ಮೇಲೆ ಪ್ರಭಾವ ಬೀರುವ ಮತ್ತು ನಿಯಂತ್ರಿಸುವ ಸಾಧನವಾಗಿ ಬಳಸುತ್ತಿದ್ದನು ಎಂಬ ಆರೋಪವೂ ಕೇಳಿಬಂದಿದೆ.
ಲೈಂಗಿಕ ದೌರ್ಜನ್ಯದ ಬಳಿಕ ಮೂತ್ರ ಕುಡಿಸುತ್ತಿದ್ದ ಆರೋಪಿ
ಪೊಲೀಸರ ಪ್ರಕಾರ, ಸಂತ್ರಸ್ತ ಮಹಿಳೆಯನ್ನು ದೀರ್ಘಕಾಲದವರೆಗೆ ಅಮಾನವೀಯವಾಗಿ ಹಿಂಸಿಸಲಾಗಿದ್ದು, ಆಕೆಗೆ ವಿದ್ಯುತ್ ಶಾಕ್ಗಳನ್ನು ನೀಡುವುದರ ಜೊತೆಗೆ ಆರೋಪಿ ದೇವಮಾನವನ ಮೂತ್ರವನ್ನು ಬಲವಂತವಾಗಿ ಕುಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಜೂನ್ 16ರಂದು ಈ ಸಂಬಂಧ ದೂರು ದಾಖಲಾಗಿದ್ದು, ಅದರ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ಸ್ವಯಂಘೋಷಿತ ದೇವಮಾನವ ರಾಧಾಮೋಹನ್ ಮಿಶ್ರಾ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿರಂತರ ಅತ್ಯಾಚಾರ
ಆರೋಪಿಗಳು ದೂರುದಾರೆಯ ಮೇಲೆ ಪದೇ ಪದೇ ಅತ್ಯಾಚಾರ, ಲೈಂಗಿಕ ಕಿರುಕುಳ ಹಾಗೂ ಅಮಾನವೀಯ ವರ್ತನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸಂಬಂಧಿತ ಕಲಂಗಳು ಹಾಗೂ ಮಹಾರಾಷ್ಟ್ರ ಮಾನವ ಬಲಿ ತಡೆ ಮತ್ತು ನಿರ್ಮೂಲನೆ ಹಾಗೂ ಇತರೆ ಅಮಾನವೀಯ, ದುಷ್ಟ, ಅಘೋರಿ ಆಚರಣೆಗಳು ಮತ್ತು ಕಪ್ಪು ಮಂತ್ರ-ತಂತ್ರ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಲ್ಯಾಪ್ ಟಾಪ್, ಹಾರ್ಡ್ ಡಿಸ್ಕ್ ಗಳು ವಶಕ್ಕೆ
ದೂರಿನ ಆಧಾರದ ಮೇಲೆ ಪುಣೆಯ ಖರಾಡಿ ಪ್ರದೇಶದಲ್ಲಿರುವ ಮಿಶ್ರಾ ಅವರ ಆಶ್ರಮದಲ್ಲಿ ಶೋಧ ನಡೆಸಿದ ಪೊಲೀಸರು, ಎಂಟು ಲ್ಯಾಪ್ಟಾಪ್ಗಳು, 19 ಹಾರ್ಡ್ ಡಿಸ್ಕ್ಗಳು, 10 ಡಿವಿಡಿಗಳು, ಒಂಬತ್ತು ಮೊಬೈಲ್ ಫೋನ್ಗಳು, 20 ಕ್ಯಾಸೆಟ್ಗಳು ಹಾಗೂ 23 ಪೆನ್ ಡ್ರೈವ್ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಸುಮಾರು ₹6.5 ಲಕ್ಷ ನಗದು ಹಾಗೂ ₹15 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ.
ಅವಧಿ ಮೀರಿದ ಔಷಧಿಗಳು
ಆಶ್ರಮದಲ್ಲಿ ಅವಧಿ ಮೀರಿದ ಔಷಧಿಗಳೂ ಸೇರಿದಂತೆ ದೊಡ್ಡ ಪ್ರಮಾಣದ ಔಷಧಿಗಳು ಪತ್ತೆಯಾಗಿದ್ದು, ಅವುಗಳ ಬಳಕೆಯ ಉದ್ದೇಶವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.