ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ, ಅವರ ಸೋದರಳಿಯ ಆಕಾಶ್ ಆನಂದ್ ಅವರೊಂದಿಗಿರುವುದು. 
ದೇಶ

BSPಯಲ್ಲಿ ಮಹಾ ಬಿರುಕು: ಅಶೋಕ್ ಸಿದ್ಧಾರ್ಥ್ ನಿವೃತ್ತಿ ಬೆನ್ನಲ್ಲೇ ಸೋದರಳಿಯ ಆಕಾಶ್ ಆನಂದ್‌ನನ್ನು ಪಕ್ಷದ ಜವಾಬ್ದಾರಿಗಳಿಂದ ಕಿತ್ತೊಗೆದ ಮಾಯಾವತಿ..!

ಅಶೋಕ್ ಸಿದ್ಧಾರ್ಥ್ ಅವರು ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ ಸಂಪೂರ್ಣವಾಗಿ ದೂರ ಸರಿದರೆ ಮಾತ್ರ ಆಕಾಶ್ ಆನಂದ್‌ಗೆ ಪಕ್ಷದ ಜವಾಬ್ದಾರಿಗಳನ್ನು ಮರಳಿ ನೀಡುವ ಬಗ್ಗೆ ಯೋಚಿಸುತ್ತೇನೆ ಎಂದು ಕಠಿಣ ಷರತ್ತು ವಿಧಿಸಿದ್ದರು.

ಲಖನೌ: ಬಹುಜನ ಸಮಾಜ ಪಕ್ಷದಲ್ಲಿ (BSP) ಭುಗಿಲೆದ್ದಿರುವ ತೀವ್ರ ಆಂತರಿಕ ಭಿನ್ನಮತ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ತಮ್ಮ ಉತ್ತರಾಧಿಕಾರಿ ಎನ್ನಲಾಗಿದ್ದ ಸೋದರಳಿಯ ಆಕಾಶ್ ಆನಂದ್ ಅವರನ್ನು ಪಕ್ಷದಿಂದ ಸಂಪೂರ್ಣವಾಗಿ ಮುಕ್ತಗೊಳಿಸಿದ್ದಾರೆ.

ಆಕಾಶ್ ಆನಂದ್ ಅವರ ಮಾವ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಅಶೋಕ್ ಸಿದ್ಧಾರ್ಥ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಮಾಯಾವತಿ ಈ ನಿರ್ಧಾರ ಪ್ರಕಟಿಸಿದ್ದಾರೆ.

ಬುಧವಾರವಷ್ಟೇ ಸಾರ್ವಜನಿಕ ಹೇಳಿಕೆ ನೀಡಿದ್ದ ಮಾಯಾವತಿ, "ಅಶೋಕ್ ಸಿದ್ಧಾರ್ಥ್ ಅವರು ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ ಸಂಪೂರ್ಣವಾಗಿ ದೂರ ಸರಿದರೆ ಮಾತ್ರ ಆಕಾಶ್ ಆನಂದ್‌ಗೆ ಪಕ್ಷದ ಜವಾಬ್ದಾರಿಗಳನ್ನು ಮರಳಿ ನೀಡುವ ಬಗ್ಗೆ ಯೋಚಿಸುತ್ತೇನೆ," ಎಂದು ಕಠಿಣ ಷರತ್ತು ವಿಧಿಸಿದ್ದರು. ಸಿದ್ಧಾರ್ಥ್ ಅವರು ಪಕ್ಷದ ಹಿತಾಸಕ್ತಿಗಿಂತ ತಮ್ಮ ವೈಯಕ್ತಿಕ ಆಸೆಗಳಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದರ ಬೆನ್ನಲ್ಲೇ ಆಕಾಶ್ ಆನಂದ್‌ ರಾಜಕೀಯ ಭವಿಷ್ಯಕ್ಕಾಗಿ ಗುರುವಾರ ಬೆಳಗ್ಗೆ ಅಶೋಕ್ ಸಿದ್ಧಾರ್ಥ್ ಅವರು ಭಾವನಾತ್ಮಕ ಪೋಸ್ಟ್ ಮೂಲಕ ರಾಜಕೀಯ ನಿವೃತ್ತಿ ಘೋಷಿಸಿ, ಮಾಯಾವತಿ ಅವರಿಗೆ ತಮ್ಮ ಸಂಪೂರ್ಣ ನಿಷ್ಠೆಯನ್ನು ಮರುಕಳಿಸಿದ್ದರು. ಆದರೆ, ಈ ನಿರ್ಧಾರ ಸೂಕ್ತ ಸಮಯಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಮಾಯಾವತಿ, ಅಶೋಕ್ ಸಿದ್ಧಾರ್ಥ್ ಅವರ ನಿವೃತ್ತಿ ನಿರ್ಧಾರ "ಬಹಳ ತಡವಾಯಿತು" ಎಂದು ಹೇಳಿ ಆಕಾಶ್ ಆನಂದ್ ಅವರನ್ನು ಪಕ್ಷದಿಂದಲೇ ವಜಾಗೊಳಿಸಿದ್ದಾರೆ.

ಇದೇ ವೇಳೆ ಆಕಾಶ್ ಆನಂದ್ ಅವರ ನಿಷ್ಠೆಯನ್ನು ಬಹಿರಂಗವಾಗಿ ಪ್ರಶ್ನಿಸಿರುವ ಮಾಯಾವತಿ, "ಆಕಾಶ್ ಅವರಿಗೆ ಬಿಎಸ್ಪಿ ಚಳವಳಿ ಮತ್ತು ಸಿದ್ಧಾಂತಕ್ಕಿಂತ ಕುಟುಂಬದ ಹಿತಾಸಕ್ತಿಯೇ ಮುಖ್ಯವಾಗಿದೆ. ಇತ್ತೀಚೆಗೆ ನಾನು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದ ಪ್ರಮುಖ ಹೇಳಿಕೆಯೊಂದನ್ನು ಆಕಾಶ್ ರೀಪೋಸ್ಟ್ ಮಾಡದೆ ಇರುವುದೇ ಇದಕ್ಕೆ ಸಾಕ್ಷಿ," ಎಂದು ಕಿಡಿಕಾರಿದ್ದಾರೆ.

ಪಕ್ಷದ ಕಾರ್ಯಕರ್ತರ ಅಭಿಪ್ರಾಯದಂತೆ ಅವರನ್ನು ಪಕ್ಷದಿಂದ ಕೈ ಬಿಡಲಾಗುತ್ತಿದ್ದು, ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಮನಸ್ಸಿನಲ್ಲಿರುವಾಗ ಆಕಾಶ್‌ ಆನಂದ್‌ ಪಕ್ಷಕ್ಕಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾಧ್ಯವೇ?” ಎಂದು ಪ್ರಶ್ನಿಸಿದ್ದಾರೆ.

ಸೆಪ್ಟೆಂಬರ್‌ 3, 2026ರಂದು ರಾಷ್ಟ್ರೀಯ ಸಂಯೋಜಕ ಹುದ್ದೆಯ ಎಲ್ಲ ಪ್ರಮುಖ ಜವಾಬ್ದಾರಿಗಳಿಂದ ಅವರನ್ನು ಮುಕ್ತಗೊಳಿಸಿದಂತೆ, ಇಂದಿನಿಂದ ಅವರನ್ನು ಪಕ್ಷದಿಂದಲೂ ಸಂಪೂರ್ಣವಾಗಿ ಮುಕ್ತಗೊಳಿಸಬೇಕು ಎಂದು ಪಕ್ಷದ ಜನರು ಭಾವಿಸುತ್ತಿದ್ದಾರೆ. ಹೀಗಾಗಿ ಆಕಾಶ್‌ ಆನಂದ್‌ ಪಕ್ಷದಿಂದ ಸ್ವತಂತ್ರವಾಗಿ ಉಳಿಯಲು ಬಯಸಿದರೆ ಅವರು ಸ್ವತಂತ್ರರಾಗಿರಬಹುದು. ಅಂದರೆ, ಅವರನ್ನು ಇದೀಗ ಪಕ್ಷದಿಂದ ಸಂಪೂರ್ಣವಾಗಿ ಮುಕ್ತಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ (ಸೆಪ್ಟೆಂಬರ್ 3) ಆಕಾಶ್ ಆನಂದ್ ಅವರನ್ನು ಬಿಎಸ್ಪಿಯ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ಸೆಪ್ಟೆಂಬರ್‌ 3ರಂದು ಲಖನೌನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಆಕಾಶ್‌ ಆನಂದ್‌ ಅವರನ್ನು ಬಿಎಸ್‌ಪಿಯ ರಾಷ್ಟ್ರೀಯ ಸಂಯೋಜಕ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಆನಂದ್‌ ಇನ್ನಷ್ಟು “ರಾಜಕೀಯ ಪ್ರಬುದ್ಧತೆ” ಗಳಿಸಬೇಕಿದೆ. ಸದ್ಯಕ್ಕೆ ಅವರಿಗೆ ಯಾವುದೇ ಪ್ರಮುಖ ಸಂಘಟನಾ ಜವಾಬ್ದಾರಿ ವಹಿಸುವುದಿಲ್ಲ ಎಂದು ಮಾಯಾವತಿ ಆಗ ಹೇಳಿದ್ದರು.

ಮಾಜಿ ಬಿಎಸ್‌ಪಿ ರಾಜ್ಯಸಭಾ ಸದಸ್ಯರಾಗಿದ್ದ ಅಶೋಕ್ ಸಿದ್ಧಾರ್ಥ್‌ ಅವರನ್ನು ಆಗಸ್ಟ್‌ 2ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು. ಪದೇಪದೆ ಶಿಸ್ತು ಉಲ್ಲಂಘನೆ, ಪಕ್ಷ ವಿರೋಧಿ ನಿಲುವು ಹಾಗೂ ವಹಿಸಲಾಗಿದ್ದ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದ ಆರೋಪಗಳು ಅವರ ಮೇಲಿದ್ದವು.

ಸಿದ್ಧಾರ್ಥ್‌ ರಾಜಕೀಯದಿಂದ ನಿವೃತ್ತಿಯಾಗಿರುವುದನ್ನು ಮಾಯಾವತಿ “ಸರಿಯಾದ ಹೆಜ್ಜೆ” ಎಂದು ಬಣ್ಣಿಸಿದ್ದಾರೆ. ಆದರೆ ಈ ನಿರ್ಧಾರ ತಡವಾಗಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಪಕ್ಷ, ಅದರ ಚಳವಳಿ ಹಾಗೂ ಆಕಾಶ್‌ ಆನಂದ್‌ ಅವರ ಹಿತದೃಷ್ಟಿಯಿಂದಲೇ ಸಿದ್ಧಾರ್ಥ್‌ ರಾಜಕೀಯದಿಂದ ನಿವೃತ್ತಿಯಾಗಬೇಕೆಂದು ಬಿಎಸ್‌ಪಿ ಬಯಸಿತ್ತು ಎಂದು ತಿಳಿಸಿದ್ದಾರೆ.

“ಅಶೋಕ್ ಸಿದ್ಧಾರ್ಥ್‌ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಇಂದು ಮಾಡಿರುವ ಘೋಷಣೆ ಸರಿಯಾದ ಹೆಜ್ಜೆ. ಆದರೆ, ಅದು ಬಹಳ ತಡವಾಗಿ ತೆಗೆದುಕೊಂಡ ನಿರ್ಧಾರ” ಎಂದು ಮಾಯಾವತಿ ಹೇಳಿದ್ದಾರೆ.

ಅಶೋಕ್ ಸಿದ್ಧಾರ್ಥ್‌ ಹೇಳಿದ್ದೇನು..?

ಇದಕ್ಕೂ ಮುನ್ನ ಗುರುವಾರ ಅಶೋಕ್ ಸಿದ್ಧಾರ್ಥ್‌ ಭಾವುಕ ಪೋಸ್ಟ್‌ ಮೂಲಕ ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ “ಈ ಕ್ಷಣದಿಂದಲೇ” ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಸಿದ್ಧಾರ್ಥ್‌ ಅವರು ತಮ್ಮ ಜೀವನವನ್ನು ಮಾಯಾವತಿಗಾಗಿ ತ್ಯಾಗ ಮಾಡಬೇಕಾದ ಸಂದರ್ಭ ಬಂದರೂ ಅದು ತಮ್ಮ ಪಾಲಿಗೆ ಹೆಮ್ಮೆಯ ವಿಷಯವಾಗಲಿದೆ ಎಂದು ಹೇಳಿದ್ದಾರೆ.

“ನನಗೆ ಮಾಯಾವತಿ ಅವರ ಆದೇಶಕ್ಕಿಂತ ಈ ಜಗತ್ತಿನಲ್ಲಿ ಯಾವುದೂ ದೊಡ್ಡದಲ್ಲ” ಎಂದು ಹೇಳಿದ ಸಿದ್ಧಾರ್ಥ್‌, ಕಳೆದ 35 ವರ್ಷಗಳಿಂದ ಬಿಎಸ್‌ಪಿ ಚಳವಳಿಗೆ ಸಮರ್ಪಿತರಾಗಿ ಕೆಲಸ ಮಾಡಿದ್ದೇನೆ ಹಾಗೂ ಪಕ್ಷ ವಹಿಸಿದ ಪ್ರತಿಯೊಂದು ಜವಾಬ್ದಾರಿಯನ್ನೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮಾಯಾವತಿ ಅವರ ಆದೇಶದ ಮುಂದೆ ಉಳಿದ ಎಲ್ಲ ಸಂಬಂಧಗಳೂ ಅರ್ಥಹೀನ ಎಂದು ಸಿದ್ಧಾರ್ಥ್‌ ಹೇಳಿದ್ದಾರೆ. “ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ನೀವು ನಿಮ್ಮ ಕುಟುಂಬದ ಸದಸ್ಯನನ್ನಾಗಿ ಮಾಡಿಕೊಂಡಿದ್ದೀರಿ. ಈ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.

ಗೌತಮ ಬುದ್ಧ ಹಾಗೂ ತಮ್ಮ ರಾಜಕೀಯ ಗುರು ಕಾನ್ಶಿರಾಮ್‌ ಅವರ ಮೇಲೆ ಪ್ರಮಾಣ ಮಾಡಿ, ತಾವು ಎಂದಿಗೂ ಬಿಎಸ್‌ಪಿ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ ಎಂದು ಸಿದ್ಧಾರ್ಥ್‌ ಹೇಳಿದ್ದಾರೆ.

ತಾವು ಆಕಾಶ್‌ ಆನಂದ್‌ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದೇನೆ ಎಂಬ ಮಾಯಾವತಿ ಅವರ ಆರೋಪವನ್ನು ಉಲ್ಲೇಖಿಸಿದ ಸಿದ್ಧಾರ್ಥ್‌, ಹಲವು ತಿಂಗಳುಗಳಿಂದಲೇ ತಮ್ಮ ಅಳಿಯನನ್ನು ಭೇಟಿಯಾಗಿಲ್ಲ, ಸಲಹೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಾಯಾವತಿ ತಮ್ಮ ಮೇಲೆ ತೋರಿದ್ದ ಗೌರವದ ಕಾರಣ ಕೆಲ ಪಕ್ಷದ ಸಹೋದ್ಯೋಗಿಗಳು ತಾವು ಬಿಎಸ್‌ಪಿಯ ನಿಯಂತ್ರಣ ಪಡೆಯಲು ಬಯಸುತ್ತಿದ್ದಾರೆ ಹಾಗೂ ಆಕಾಶ್‌ ಆನಂದ್‌ ಅವರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪಗಳಲ್ಲಿ “ಸ್ವಲ್ಪವೂ ಸತ್ಯವಿಲ್ಲ” ಎಂದು ಹೇಳಿದ್ದಾರೆ.

“ನಾನು ರಾಜಕೀಯ ಮತ್ತು ಸಾಮಾಜಿಕ ಜೀವನದಲ್ಲಿ ಮುಂದುವರಿಯುವುದರಿಂದ ನಮ್ಮ ಸಂತರು, ಗುರುಗಳು ಮತ್ತು ಮಹನೀಯರು ನಿರ್ಮಿಸಿದ ಬಹುಜನ ಚಳವಳಿಗೆ ಹಾನಿಯಾಗುತ್ತಿದೆ ಎಂದು ನೀವು ಇಂದು ಭಾವಿಸಿದರೆ, ನಾನು ಈಗಲೇ ರಾಜಕೀಯ ಮತ್ತು ಸಾಮಾಜಿಕ ಜೀವನದಿಂದ ನಿವೃತ್ತಿಯಾಗುತ್ತೇನೆ.

ಜೀವನಪೂರ್ತಿ ಮಾಯಾವತಿ ಅವರಿಗೆ ಋಣಿಯಾಗಿರುತ್ತೇನೆ ಎಂದು ಹೇಳಿದ ಸಿದ್ಧಾರ್ಥ್‌, ಅವರಿಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಬೇಕಾದರೂ ಅದನ್ನು ಹೆಮ್ಮೆಯ ಸಂಗತಿಯೆಂದು ಪರಿಗಣಿಸುವುದಾಗಿ ತಿಳಿಸಿದ್ದಾರೆ.

ಸದ್ಯ ಉತ್ತರ ಪ್ರದೇಶದಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಬಿಎಸ್ಪಿ, ಸಂಸತ್ತಿನಲ್ಲಿ ಯಾವುದೇ ಸ್ಥಾನ ಹೊಂದಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಮಾಯಾವತಿ ಅವರು ತಮ್ಮ ಕುಟುಂಬದ ಸದಸ್ಯರ ವಿರುದ್ಧವೇ ಕೈಗೊಂಡಿರುವ ಈ ಕಠಿಣ ನಿರ್ಧಾರ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘BRICS‌ ನಿಂದ ಭಾರತಕ್ಕೇನು ಲಾಭ?’: ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನೆ, ತಿರುಗೇಟು ಕೊಟ್ಟ BJP

Trumpಗೆ Iran ಬಿಗ್ ಶಾಕ್: ಅಮೆರಿಕಾ ಹಡಗು ಸೇರಿ 20ಕ್ಕೂ ಹೆಚ್ಚು ನೌಕೆಗಳ ಮೇಲೆ ದಾಳಿ, Hormuz ಜಲಸಂಧಿ ಹೊರಗೂ 'No-go zone' ವಿಸ್ತರಣೆ..!

Cricket: ಇಂಗ್ಲೆಂಡ್ ನಲ್ಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಮುಖಭಂಗ, ವಲಸಿಗರೆಂದು ತಪ್ಪಾಗಿ ಭಾವಿಸಿ ಪ್ರತಿಭಟನೆ! ಮುಂದೇನಾಯ್ತು?

2.5 ಲಕ್ಷ ರೂ ಸಾಲಶೂಲಕ್ಕೆ ಸಿವಿಲ್ ಸರ್ವಿಸ್ ಆಕಾಂಕ್ಷಿ ಬಲಿ; ಸಾವಿಗೂ ಮುನ್ನ 19 ಮಂದಿಯ ಹೆಸರುಗಳ ಉಲ್ಲೇಖ!

7ನೇ ತಿಂಗಳಿಗೆ ಕಾಲಿಟ್ಟ US-Iran ಸಂಘರ್ಷ: ಯುದ್ಧ ಅಂತ್ಯಕ್ಕೆ ಕೌಂಟ್‌ಡೌನ್; ಇನ್ನು ಅವರ ಆಟ ನಡೆಯಲ್ಲ, ಅಮೆರಿಕ ಎಲೆಕ್ಷನ್ ಬೆನ್ನಲ್ಲೇ ಇರಾನ್'ಗೆ ಖೆಡ್ಡಾ ಎಂದ ಟ್ರಂಪ್..!