ರಾಜಕೀಯ

ಸಿದ್ದರಾಮಯ್ಯ ಸ್ಪರ್ಧಿಸಲು ಬಯಸಿದ್ದೇ ಆದರೆ ವರುಣಾ ಕ್ಷೇತ್ರ ಈಗಲೂ ಮುಕ್ತವಾಗಿದೆ: ಯತೀಂದ್ರ

Manjula VN

ಬೆಂಗಳೂರು: ಇದು ಸಿದ್ದರಾಮಯ್ಯ ಅವರ ಕೊನೆಯ ಚುನಾವಣೆ. ಅವರು ಸ್ಪರ್ಧಿಸಲು ಬಯಸಿದ್ದೇ ಆದರೆ, ವರುಣಾ ಕ್ಷೇತ್ರ ಈಗಲೂ ಮುಕ್ತವಾಗಿದೆ ಎಂದು ಸಿದ್ದರಾಮಯ್ಯ ಅವರ ಪುತ್ರ ಹಾಗೂ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಈ ರಾಜ್ಯ ಕಂಡ ಅಪರೂಪದ ಜನಪರ ರಾಜಕಾರಣಿ. ಅವರದ್ದು ಇದು ಕೊನೆಯ ಚುನಾವಣೆ, ಸಿದ್ದರಾಮಯ್ಯ ಅವರಿಗೆ ಕ್ಷೇತ್ರವಿಲ್ಲ ಎಂಬ ಪ್ರಚಾರ ಪ್ರತಿಪಕ್ಷದ ತಂತ್ರವಾಗಿದೆ. ಸಿದ್ದರಾಮಯ್ಯ ನವರಿಗೆ ಬೇರೆ ಬೇರೆ ಕ್ಷೇತ್ರದಿಂದ ನಿಲ್ಲಿ ಎಂದು ಆಹ್ವಾನ ಬರುತ್ತಿದೆ. ಅವರದು ಈಗಲೇ ಕ್ಷೇತ್ರದ ಬಗ್ಗೆ ಫೈನಲ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಕೆಲವು ಸಂಘಟನೆಗಳು ಕರಪತ್ರಗಳನ್ನು ಮುದ್ರಿಸಿ ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ಯತೀಂದ್ರ ಅವರು ಹೇಳಿಕೆ ನೀಡಿದ್ದಾರೆ.

ಇಂತಹ ಅಪಪ್ರಚಾರ “ಯಾರು ಮಾಡಿದ್ದಾರೆ? ಈ ಬಗ್ಗೆ ತನಿಖೆಯಾಗಲಿದೆಯೇ?'' ಈದ್ಗಾ ಭೂಮಿ ವಿಚಾರವಾಗಿಯೂ ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಶಾಸಕರೊಬ್ಬರ ವಿರುದ್ಧ ಇದೇ ರೀತಿಯ ಕರಪತ್ರಗಳು ಹರಿದಾಡಿದ್ದವು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮಾತನಾಡಿ, ಕಾಂಗ್ರೆಸ್‌ನ ವಿರುದ್ಧ ವಾಟ್ಸಾಪ್‌ನಲ್ಲಿ ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿಯನ್ನು ಪ್ರಸಾರ ಮಾಡಲು ಬಿಜೆಪಿ ಬಳಿ ಡರ್ಟಿ ಟ್ರಿಕ್ಸ್ ಇಲಾಖೆ ಇದೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಎಲ್ಲಿಂದ ಬೇಕಾದರೂ ಸ್ಪರ್ಧಿಸಬಹುದು, ಎಲ್ಲಿಂದ ಸ್ಪರ್ಧಿಸಿದರೂ ಇಡೀ ಕ್ಷೇತ್ರಕ್ಕೆ ಲಾಭವಾಗಲಿದೆ. ಮೈಸೂರಿನ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೆ ಇಡೀ ಜಿಲ್ಲೆ ಮತ್ತು ಅಕ್ಕಪಕ್ಕದ ಪ್ರದೇಶಗಳಿಗೆ ಲಾಭವಾಗಲಿದೆ ಎಂದು ಖಂಡ್ರೆ ತಿಳಿಸಿದ್ದಾರೆ.

ಎಂಎಲ್ಸಿ ಪ್ರಕಾಶ್ ರಾಥೋಡ್ ಮಾತನಾಡಿ, ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಮನವಿ ಮಾಡಲಾಗುತ್ತಿದೆ. ಅಂತಿಮವಾಗಿ ಹೈಕಮಾಂಡ್‌ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದಿದ್ದಾರೆ.

ಈ ನಡುವೆ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಅವರ ಬೆಂಬಲಿಗರ ತಂಡ ಈಗಾಗಲೇ ಕೋಲಾರಕ್ಕೆ ಭೇಟಿ ನೀಡಿದ್ದು, ಸಿದ್ದರಾಮಯ್ಯ ಅವರು ತಂಗಲು ಮನೆ, ಕಚೇರಿ, ಸೇರಿದಂತೆ ಪ್ರಚಾರ ಕಾರ್ಯಗಳನ್ನು ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

SCROLL FOR NEXT