ಕಲಬುರಗಿ: ಕೆಲವು ದಿನಗಳ ಹಿಂದೆ ವಸತಿ ಯೋಜನೆಯಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು, ಸೋಮವಾರ ತಮ್ಮ ಆರೋಪಗಳನ್ನು ಪುನರುಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುದ್ಧ ಭೂಮಿಯಿಂದ ಓಡಿ ಹೋಗುವ ಜಾಯಮಾನ ನನ್ನದಲ್ಲ. ನಾನು ಸತ್ಯವನ್ನೇ ಹೇಳಿದ್ದೀನಿ. ನನ್ನ ಹೇಳಿಕೆಗೆ ನಾನು ಈಗಲೂ ಬದ್ದ ಎಂದು ಹೇಳಿದ್ದಾರೆ.
ನನ್ನ ಹೇಳಿಕೆ ಸರಿಯಾಗಿದೆ ಎಂದು ರಾಜುಕಾಗೆ ಸಹ ಹೇಳಿದ್ದಾರೆ. ನನಗೂ ಮೊದಲೇ, ಆರು ತಿಂಗಳ ಹಿಂದೆಯೇ, ಪಕ್ಷದ ಶಾಸಕಾಂಗ ಸಭೆಯಲ್ಲಿ ಏನು ಹೇಳಬೇಕೋ ಅದನ್ನು ಕೆಲವರು ಹೇಳಿದ್ದಾರೆ. ಇನ್ನೂ ಹಲವರು ಇದರ ಬಗ್ಗೆ ಮಾತನಾಡುವವರಿದ್ದಾರೆ' ಎಂದರು. ಆ ಮೂಲಕ ಕಾಂಗ್ರೆಸ್ ನಲ್ಲಿ ಇನ್ನೂ ಹಲವು ಅಸಮಾಧಾನಿತ ಶಾಸಕರಿದ್ದಾರೆ ಎಂಬ ಸುಳಿವು ನೀಡಿದರು.
ಅಫಜಲಪುರ ಕಾಂಗ್ರೆಸ್ ಶಾಸಕ ಎಂ. ವೈ.ಪಾಟೀಲ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ. ತಮ್ಮ ಕ್ಷೇತ್ರದಲ್ಲಿಯೂ ಏನೂ ಅಭಿವೃದ್ಧಿ ಕಾಮಗಾರಿಗಳು ಆಗಿಲ್ಲ ಎಂದು ಹೇಳಿದ್ದಾರಂತೆ. ಅವರ ಕ್ಷೇತ್ರದ ಜನರು ನನಗೆ ಕರೆ ಮಾಡಿ, ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯ ನನ್ನ ಆತ್ಮೀಯ ಸ್ನೇಹಿತರು. ಹಿಂದೆ ಯಾವ ರೀತಿ ಪ್ರೀತಿ ತೋರಿಸುತ್ತಿದ್ದರೋ, ಈಗಲೂ ಅದೇ ರೀತಿ ಪ್ರೀತಿಯಿಂದ ಮಾತನಾಡಿಸುತ್ತಾರೆ. ನನಗೆ ಕರೆ ಮಾಡಿ, ರಾಯಚೂರಿಗೆ ಬರಲು ಹೇಳಿದರು. ಆದರೆ, ಅಲ್ಲಿ ನನಗೆ ಆಹ್ವಾನವಿಲ್ಲ, ನಾನು ಬರಲ್ಲ ಎಂದು ಹೇಳಿದ್ದೇನೆ. ಅದಕ್ಕೆ, ದೆಹಲಿ ಹೋಗಿ ಬರುತ್ತೇನೆ, ಬಳಿಕ, ಬಂದು ಭೇಟಿ ಮಾಡು ಎಂದಿದ್ದಾರೆ. ಜೂ.25ರಂದು ಸಿಎಂ ಭೇಟಿ ಮಾಡುವೆ ಎಂದು ತಿಳಿಸಿದರು.
ಆಳಂದದಲ್ಲಿ ಮೌಲಾನ ಆಜಾದ್ ಮಾದರಿ ವಸತಿ ಶಾಲೆಯ ನಿರ್ಮಾಣಕ್ಕಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ) 17 ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಬೇಡಿಕೆ ಇಡದಿದ್ದರೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ನನ್ನ ಗಮನಕ್ಕೆ ತರೆದೇಯೇ ಅದೇ ವಸತಿ ಶಾಲೆಗೆ 17 ಕೋಟಿ ರೂ.ಗಳ ಅನುದಾನವನ್ನು ನೀಡಿದೆ. ಶಾಲೆಯ ನಿರ್ಮಾಣವನ್ನೂ ಪ್ರಾರಂಭಿಸಲಾಗಿದೆ ಎಂದರು.
ಇದೇ ವೇಳೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇತ್ತೀಚೆಗೆ ಬೆಂಗಳೂರು ದಕ್ಷಿಣ ತಹಸಿಲ್ ಕಚೇರಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು.
ಸಮಸ್ಯೆ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪಿಎ ಜೊತೆ ಮಾತನಾಡಿದ್ದೇನೆ ಆದರೆ ಯಾರ ವಿರುದ್ಧವೂ ಯಾವುದೇ ಆರೋಪಗಳನ್ನು ಮಾಡಿಲ್ಲ ಆದರೆ, ಸಮಸ್ಯೆ ಕುರಿತು ಮಾತನಾಡಿದ್ದೇನೆಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಹೇಳಿಕೆಯನ್ನು ಖಂಡಿಸಿರುವ ಬಗ್ಗೆ ಪ್ರತಿಕ್ರಿಯಿಸಿಸ, ಅವರು ಜವಾಬ್ದಾರಿಯುತ ಸ್ಥಾನಗಳನ್ನು ಹೊಂದಿದ್ದಾರೆ. ಖಂಡಿಸುವ ಸ್ವಾತಂತ್ರ್ಯವನ್ನು ಅವರಿಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸ್ವಾಗತಿಸುವುದು ಮತ್ತು ಟೀಕಿಸುವುದು ಸಾಮಾನ್ಯ ಎಂದರು.
ಇದೇ ವೇಳೆ, ಬಿ.ರ್ಆ.ಪಾಟೀಲ ಅವರ ಪಕ್ಕದಲ್ಲಿದ್ದ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಸಹ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕ್ಷೇತ್ರದ ಶಾಸಕನಾದ ನನಗೂ ಮಾಹಿತಿ ನೀಡದೆ, ನನ್ನ ಕ್ಷೇತ್ರ ದಲ್ಲಿ ಕೆಆರ್ಐಡಿಎಲ್ ಕೈಗೊಳ್ಳುವ ಕಾಮಗಾರಿಗಳ ಉದ್ಘಾಟನೆಯಾಗುತ್ತಿದೆ' ಎಂದು ಬೇಸರ ವ್ಯಕ್ತಪಡಿಸಿದರು.