ವಿದೇಶ

ಭಾರತ ಹೊರತುಪಡಿಸಿ ಹಿಂದೂ ಮಹಾಸಾಗರದ 19 ರಾಷ್ಟ್ರಗಳೊಂದಿಗೆ ಚೀನಾ ಸಭೆ! 

Srinivas Rao BV

ನವದೆಹಲಿ: ಕೋವಿಡ್-19 ನಲ್ಲೇ ನರಳುತ್ತಿರುವ ಚೀನಾ ತನ್ನ ವಿಸ್ತರಣಾವಾದದ ಮಹತ್ವಾಕಾಂಕ್ಷೆಯನ್ನಂತೂ ಬಿಟ್ಟಿಲ್ಲ. ಕೋವಿಡ್ ಸೋಂಕು ಏರುತ್ತಿರುವುದರ ನಡುವೆಯೂ ಭಾರತವನ್ನು ಬದಿಗಿರಿಸಿ, ಐಒಆರ್ (ಹಿಂದೂ ಮಹಾಸಾಗರದ) ನ 19 ರಾಷ್ಟ್ರಗಳೊಂದಿಗೆ ಸಭೆ ನಡೆಸಿದೆ.

ಈ ಸಭೆಯಲ್ಲಿ ಭಾರತದ ಅನುಪಸ್ಥಿತಿ ಸ್ಪಷ್ಟವಾಗಿ ಕಾಣುತ್ತಿತ್ತು ಹಾಗೂ ಬೀಜಿಂಗ್ ನ ಮೂಲಗಳ ಪ್ರಕಾರ ಭಾರತಕ್ಕೆ ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಿರಲಿಲ್ಲ ಎಂಬ ಮಾಹಿತಿಯೂ ಲಭ್ಯವಾಗಿದೆ.

ನ.21 ರಂದು ಚೀನಾದ ವಿದೇಶಾಂಗ ಸಚಿವಾಲಯಕ್ಕೆ ಸಂಬಂಧಪಟ್ಟ ಚೀನಾ ಅಂತಾರಾಷ್ಟ್ರೀಯ ಬೆಳವಣಿಗೆಗಳ ಸಹಕಾರ ಸಂಸ್ಥೆ ಈ ಸಭೆಯನ್ನು ಆಯೋಜಿಸಿತ್ತು. "ಹಂಚಿಕೆಯ ಅಭಿವೃದ್ಧಿ: ನೀಲಿ ಆರ್ಥಿಕತೆಯ ದೃಷ್ಟಿಕೋನದಿಂದ ಸಿದ್ಧಾಂತ ಮತ್ತು ಅಭ್ಯಾಸ" ("Shared Development: Theory and Practice from the Perspective of the Blue Economy") ಎಂಬ ಥೀಮ್ ನ ಅಡಿಯಲ್ಲಿ ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ಈ ಸಭೆ ನಡೆದಿದೆ.
     
ಸಭೆಯಲ್ಲಿ ಇಂಡೋನೇಶ್ಯಾ, ಪಾಕಿಸ್ತಾನ, ಮ್ಯಾನ್ಮಾರ್, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್, ಕೀನ್ಯಾ,  ಮೊಜಾಂಬಿಕ್, ತಾಂಜಾನಿಯಾ, ಸೀಶೆಲ್ಸ್, ಮಡಗಾಸ್ಕರ್, ಮಾರಿಷಸ್, ಜಿಬೌಟಿ, ಆಸ್ಟ್ರೇಲಿಯಾ ಹಾಗೂ ಅಂತಾರಾಷ್ಟ್ರೀಯ ಸಂಘಟನೆಗಳ 3 ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಕಳೆದ ವರ್ಷವೂ ಚೀನಾ ಕೆಲವು ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಕೋವಿಡ್-19 ಲಸಿಕೆ ಸಹಕಾರದ ವಿಷಯವಾಗಿ ಭಾರತವನ್ನು ಹೊರತುಪಡಿಸಿ ಸಭೆ ನಡೆಸಿತ್ತು.
 
ಈಗ ಸಭೆ ನಡೆಸಿರುವ ಸಿಐಡಿಸಿಎಗೆ ನೇತೃತ್ವ ವಹಿಸಿರುವುದು ಮಾಜಿ ಉಪ ವಿದೇಶಾಂಗ ಸಚಿವ ಹಾಗೂ ಭಾರತದ ರಾಯಭಾರಿ ಲುವೋ ಝೌಹುಯಿ. ಸಂಘಟನೆಯ ಅಧಿಕೃತ ವೆಬ್ ಸೈಟ್ ನ ಪ್ರಕಾರ  ಸಿಐಡಿಸಿಎ ನಾಯಕ ಲುವೋ ಝೌಹುಯಿ ಚೀನಾದ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.

ಈ ವರ್ಷದ ಜನವರಿ ತಿಂಗಳಲ್ಲಿ ಶ್ರೀಲಂಕಾಗೆ ಭೇಟಿ ನೀಡಿದ್ದ ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಹಿಂದೂ ಮಹಾಸಾಗರದ ದ್ವೀಪ ದೇಶಗಳ ಅಭಿವೃದ್ಧಿಗಾಗಿಯೇ ಪ್ರತ್ಯೇಕ ವೇದಿಕೆ ಸ್ಥಾಪನೆ ಬಗ್ಗೆ ಪ್ರಸ್ತಾಪಿಸಿದ್ದರು.
     
ಸಿಐಡಿಸಿಎ ಸಭೆ ಚೀನಾ ವಿದೇಶಾಂಗ ಸಚಿವರು ಪ್ರಸ್ತಾಪಿಸಿದ್ದ ಸಂಗತಿಯೇ? ಎಂಬ ಪ್ರಶ್ನೆಗೆ ಚೀನಾದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯೆ ನೀಡಿದ್ದು, ಅಲ್ಲ ಎಂಬ ಉತ್ತರ ನೀಡಿದೆ.

SCROLL FOR NEXT