

ಬೆಂಗಳೂರು: ಕೆಡಿ ದಿ ಡೆವಿಲ್ ಚಿತ್ರದ 'ಸರ್ಸೆ ನಿನ್ನ ಸೆರಗ' ವಿವಾದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ನಟಿ ನೋರಾ ಫತೇಹಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
‘ಸರ್ಕೆ ಚುನರ್’ ಹಾಡು ವಿವಾದದ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾದ ನಟಿ ನೋರಾ ಫತೇಹಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದು, ಇದೇ ವೇಳೆ ಅನಾಥ ಬಾಲಕಿಯರ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವುದಾಗಿ ಘೋಷಿಸಿ, “ಇದು ಸಮಾಜಕ್ಕೆ ಮರಳಿ ಕೊಡುವ ನನ್ನ ಪ್ರಯತ್ನ” ಎಂದು ಹೇಳಿದ್ದಾರೆ.
ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ವಿಚಾರಣೆಗೆ ಹಾಜರಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಟಿ ನೋರಾ ಫತೇಹಿ, 'ಇದು ನಾನು ಉದ್ದೇಶಪೂರ್ವಕವಾಗಿ ಸೃಷ್ಟಿಸಿದ ಪರಿಸ್ಥಿತಿ ಅಲ್ಲ. ಯಾರ ಭಾವನೆಗೂ ಧಕ್ಕೆ ತರುವ ಉದ್ದೇಶ ನಮ್ಮದಾಗಿರಲಿಲ್ಲ. ಆದರೆ ಕಲಾವಿದೆಯಾಗಿ ನನ್ನ ಹೊಣೆಗಾರಿಕೆಯನ್ನು ನಾನು ಅರಿತಿದ್ದೇನೆ. ನಾನು ಖಚಿತವಾಗಿ ಕ್ಷಮೆಯಾಚಿಸುತ್ತೇನೆ. ನಾವು ಎಲ್ಲಾ ವಿಷಯಗಳನ್ನು ಲಿಖಿತ ರೂಪದಲ್ಲಿಯೂ ನೀಡಿದ್ದೇವೆ. ಆಯೋಗದವರು ತುಂಬಾ ಸಹಕಾರ ನೀಡಿದರು ಎಂದು ಹೇಳಿದರು.
ಅನಾಥ ಬಾಲಕಿಯರ ಶಿಕ್ಷಣಕ್ಕೆ ನೆರವು
ಇದೇ ವೇಳೆ ಅನಾಥ ಬಾಲಕಿಯರ ಶಿಕ್ಷಣಕ್ಕೆ ಪ್ರಾಯೋಜಕತ್ವ ನೀಡುವುದಾಗಿ ಘೋಷಿಸಿ, “ಇದು ಸಮಾಜಕ್ಕೆ ಮರಳಿ ಕೊಡುವ ನನ್ನ ಪ್ರಯತ್ನ” ಎಂದು ಹೇಳಿದ್ದಾರೆ. ಸಮಾಜಕ್ಕೆ ಮರಳಿ ಕೊಡುವ ಮನೋಭಾವದಿಂದ ಕೆಲ ಅನಾಥ ಬಾಲಕಿಯರ ಶಿಕ್ಷಣದ ವೆಚ್ಚವನ್ನು ಭರಿಸುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು.
ಸಮಾಜಕ್ಕೆ ಏನಾದರೂ ಮರಳಿ ನೀಡುವುದು ಬಹಳ ಮುಖ್ಯ. ಆದ್ದರಿಂದ ಕೆಲವು ಅನಾಥ ಬಾಲಕಿಯರ ಶಿಕ್ಷಣವನ್ನು ಪ್ರಾಯೋಜಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.
ಏನಿದು ವಿವಾದ?
ನಟ ಧ್ರುವಸರ್ಜಾ ಅಭಿನಯದ, ಪ್ರೇಮ್ ನಿರ್ದೇಶನದ ಕೆಡಿ ದಿ ಡೆವಿಲ್ ಚಿತ್ರದ 'ಸರ್ಸೆ ನಿನ್ನ ಸೆರಗ' ಹಾಡಿನ ಸಾಹಿತ್ಯ ವಿವಾದಕ್ಕೀಡಾಗಿತ್ತು. ಹಾಡಿನಲ್ಲಿ ಅಶ್ಲೀಲ ಅರ್ಥಬರುವ ವಾಕ್ಯಗಳನ್ನು ಬಳಸಲಾಗಿದೆ ಎಂದು ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಯಾಗಿತ್ತು. ಆ ಹಾಡಿನಲ್ಲಿ ನೃತ್ಯ ಮಾಡಿದ್ದ ಬಾಲಿವುಡ್ ನಟಿ ನೋರಾ ಫತೇಹಿ ಕೂಡ ಆಕ್ರೋಶಕ್ಕೆ ತುತ್ತಾಗಿ ವ್ಯಾಪಕ ಟೀಕೆ ಎದುರಿಸಿದ್ದರು.
ಹಾಡು ವಿವಾದಕ್ಕೀಡಾಗುತ್ತಿದ್ದಂತೆಯೇ ಹಾಡಿನಿಂದ ತಾನು ದೂರವಿದ್ದೇನೆ ಎಂದು ನೋರಾ ಸ್ಪಷ್ಟಪಡಿಸಿದ್ದರು. ತಾವು ಕನ್ನಡ ಆವೃತ್ತಿಯಲ್ಲಿ ಮಾತ್ರ ನಟಿಸಿದ್ದಾಗಿ, ಹಿಂದಿ ಆವೃತ್ತಿಯಲ್ಲಿ ಹಾಡನ್ನು ಬಳಸಲು ತಮ್ಮ ಅನುಮತಿ ಪಡೆಯಲಾಗಿಲ್ಲ ಎಂದು ಹೇಳಿದ್ದರು. ಕನ್ನಡ ಸಾಹಿತ್ಯದ ಸಂಪೂರ್ಣ ಅರ್ಥ ತಿಳಿಸದೇ, ಕೇವಲ ಸಾರಾಂಶವನ್ನಷ್ಟೇ ನೀಡಲಾಗಿತ್ತು ಎಂದು ಕೂಡ ಅವರು ತಿಳಿಸಿದ್ದರು.
‘ಸರ್ಕೆ ಚುನರ್’ ಹಾಡು ಬಿಡುಗಡೆಯಾದ ತಕ್ಷಣವೇ ಅದರ ಸಾಹಿತ್ಯ ಮತ್ತು ನೃತ್ಯ ವಿನ್ಯಾಸದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿದ್ದವು. ಗಾಯಕ ಅರ್ಮಾನ್ ಮಲಿಕ್ ಹಾಡಿನ ಸಾಹಿತ್ಯವನ್ನು ಎಂದು ಟೀಕಿಸಿದ್ದರು. ಹಾಡು ನಿಷೇಧಿಸುವಂತೆ ಕಾನೂನು ದೂರುಗಳೂ ದಾಖಲಾಗಿದ್ದವು. ಒತ್ತಡ ಹೆಚ್ಚಾಗುತ್ತಿದ್ದಂತೆ ಹಾಡನ್ನು ಯೂಟ್ಯೂಬ್ನಿಂದ ತೆಗೆದುಹಾಕಲಾಗಿತ್ತು.
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ವಿಜಯಾ ರಹಾತ್ಕರ್ ಈ ವಿಷಯದಲ್ಲಿ ಮಹಿಳೆಯರ ಗೌರವವನ್ನು ಸೃಜನಶೀಲತೆಯ ಹೆಸರಿನಲ್ಲಿ ಹಾನಿಗೊಳಿಸಲಾಗುವುದಿಲ್ಲ ಎಂದು ಕಠಿಣ ನಿಲುವು ವ್ಯಕ್ತಪಡಿಸಿದ್ದರು. ವಿಚಾರಣೆಯ ವೇಳೆ ಉದ್ದೇಶ, ಹೊಣೆಗಾರಿಕೆ ಮತ್ತು ಜಾಗೃತಿಯ ವಿಚಾರಗಳಲ್ಲಿ ಸಂಬಂಧಪಟ್ಟವರನ್ನು ಪ್ರಶ್ನಿಸಿದ್ದ ಆಯೋಗ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು.
Advertisement