ದೇಶಕ್ಕಿಂತ ಐಪಿಎಲ್ ಹೆಚ್ಚಾದಾಗ ಹೀಗಾಗುತ್ತದೆ: ಟಿ20 ವಿಶ್ವಕಪ್ ನಿಂದ ಹೊರಬಿದ್ದ ಟೀಂ ಇಂಡಿಯಾ ಕುರಿತು ಕಪಿಲ್ ದೇವ್ ಹೇಳಿಕೆ
ನವದೆಹಲಿ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹೊರಬಿದ್ದ ಟೀಂ ಇಂಡಿಯಾ ಕುರಿತು ಮಾಜಿ ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರು ಹೇಳಿಕೆ ನೀಡಿದ್ದು, ದೇಶಕ್ಕಿಂತ ಐಪಿಎಲ್ ಹೆಚ್ಚಾದಾಗ ಹೀಗಾಗುತ್ತದೆ ಎಂದು ಹೇಳಿದ್ದಾರೆ.
ಹಾಲಿ ಟೂರ್ನಿಯಲ್ಲಿ ನಾಲ್ಕರ ಘಟ್ಟಕ್ಕೇರಲಾಗದೇ ಪರಿತಪಿಸಿ ಟೂರ್ನಿಯಿಂದ ಹೊರಬಿದ್ದಿರುವ ಟೀಂ ಇಂಡಿಯಾ ಆಟಗಾರರ ನಿಷ್ಠೆಯನ್ನು ಕಪಿಲ್ ದೇವ್ ಅವರು ಪರೋಕ್ಷವಾಗಿ ಪ್ರಶ್ನಿಸಿದ್ದು, 'ದೇಶದ ಕ್ರಿಕೆಟ್ ಆಟಗಾರರು ರಾಷ್ಟ್ರೀಯ ಕರ್ತವ್ಯಕ್ಕಿಂತ ನಗದು-ಸಮೃದ್ಧ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಆದ್ಯತೆ ನೀಡಿದ್ದಾರೆ. ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್ ಆಡಲು ಆದ್ಯತೆ ನೀಡಿದಾಗ, ನಾವು ಏನು ಹೇಳಬಹುದು? ಪ್ರತಿಯೊಬ್ಬ ಆಟಗಾರನೂ ತಮ್ಮ ದೇಶಕ್ಕಾಗಿ ಆಡುವಾಗ ಹೆಮ್ಮೆ ಪಡಬೇಕು ಎಂದು ನಾನು ನಂಬುತ್ತೇನೆ ಎಂದು ಹೇಳಿದ್ದಾರೆ.
ದೇಶದ ತಂಡ ಮೊದಲು, ಆ ಬಳಿಕವಷ್ಟೇ ಫ್ರಾಂಚೈಸಿ ತಂಡ ಎಂಬ ಮನೋಭಾವ ಬಂದಾಗ ದೇಶಕ್ಕಾಗಿ ಆಡುವ ಕೆಚ್ಚು ಹೆಚ್ಚಾಗುತ್ತದೆ. ನನ್ನ ಮಟ್ಟಿಗೆ ರಾಷ್ಟ್ರೀಯ ತಂಡವೇ ಮೊದಲ ಆದ್ಯತೆಯಾಗಿರಬೇಕು ಎಂದು ನಾನು ನಂಬುತ್ತೇನೆ. ಅಲ್ಲಿ (ಫ್ರಾಂಚೈಸಿಗಳಿಗೆ) ಕ್ರಿಕೆಟ್ ಆಡಬೇಡಿ ಎಂದು ನಾನು ಹೇಳುತ್ತಿಲ್ಲ ಆದರೆ ಭವಿಷ್ಯಕ್ಕಾಗಿ ಅವರ ಕ್ರಿಕೆಟ್ (ವೇಳಾಪಟ್ಟಿ) ಅನ್ನು ಉತ್ತಮವಾಗಿ ಯೋಜಿಸುವುದು ಈಗ ಬಿಸಿಸಿಐನ ಜವಾಬ್ದಾರಿಯಾಗಿದೆ ಎಂದು 1983 ರಲ್ಲಿ ಭಾರತದ ವಿಶ್ವಕಪ್ ಗೆಲುವಿಗೆ ಕಾರಣವಾದ ಕಪಿಲ್ ದೇವ್ ಹೇಳಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್: ವಿರಾಟ್ ಕೊಹ್ಲಿ- ರವಿ ಶಾಸ್ತ್ರಿ ಜೋಡಿಯ ಯುಗಾಂತ್ಯ!
ನ್ಯೂಜಿಲೆಂಡ್ ತಂಡವು ಅಫ್ಘಾನಿಸ್ತಾನವನ್ನು ಸೋಲಿಸಿ ಗ್ರೂಪ್ 2 ರಿಂದ ಎರಡನೇ ಸೆಮಿಫೈನಲ್ ಸ್ಥಾನವನ್ನು ಕಾಯ್ದಿರಿಸಿದ ನಂತರ ಭಾರತವು ಭಾನುವಾರ ಟ್ವೆಂಟಿ-20 ವಿಶ್ವಕಪ್ನಿಂದ ಹೊರಬಿದ್ದಿದೆ. ಟೂರ್ನಿ ಆರಂಭಕ್ಕೂ ಮೊದಲು ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲಿ ಒಂದಾಗಿದ್ದ ಭಾರತ ತಂಡ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧ ಸೋಲು ಅನುಭವಿಸಿ ಟೂರ್ನಿಯಿಂದ ಹೊರ ಬೀಳುವುದು ಬಹುತೇಕ ಖಚಿತವಾಗಿತ್ತು. ಆದರೆ ಆ ಬಳಿಕ ಆಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್ ತಂಡಗಳ ಮೇಲಿನ ಭರ್ಜರಿ ಜಯ ಮತ್ತೆ ಸೆಮೀಸ್ ಆಸೆ ಚಿಗುರೊಡೆಯುವಂತೆ ಮಾಡಿತ್ತು.
ಆದರೆ ನಿನ್ನೆ ನಡೆದ ಆಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಜಯ ಗಳಿಸುವ ಮೂಲಕ ನ್ಯೂಜಿಲೆಂಡ್ ತಂಡ ಸೆಮೀಸ್ ಗೆ ಅರ್ಹತೆ ಪಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ